ಗುಬ್ಬಿ ಪಟ್ಟಣದ ಆದಿ ದ್ರಾವಿಡ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯದವರು ಮಸೀದಿ ಕಟ್ಟಿದ್ದನ್ನು ವಿರೋಧಿಸಿ ಇಲ್ಲಿನ ನಿವಾಸಿಗಳು ಹಾಗೂ ಛಲವಾದಿ ಮಹಾಸಭಾ ತಾಲೂಕಿನ ಅಧ್ಯಕ್ಷ ಟಿ .ಈರಣ್ಣ ಪ್ರತಿಭಟನೆ ನಡೆಸಿದರು.
ಗುಬ್ಬಿ: ಆದಿ ದ್ರಾವಿಡ ಕಾಲೋನಿಯಲ್ಲಿ ಮಸೀದಿ ಕಟ್ಟಲು ಬಿಡಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಟ್ಟಡದ ಕಾಮಗಾರಿ ನಿಲ್ಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಟಿ .ಈರಣ್ಣ ಎಚ್ಚರಿಕೆ ನೀಡಿದರು.ಪಟ್ಟಣದ ಮಸೀದಿ ಕಟ್ಟಿದ್ದನ್ನು ವಿರೋಧಿಸಿ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದರು. ಶತಮಾನದಿಂದ ಛಲವಾದಿ ಸಮಾಜದ ಬಂಧುಗಳು ವಾಸವಿರುವ ಈ ಸ್ಥಳ 1928 ಸ್ವತಂತ್ರ ಪೂರ್ವದಲ್ಲಿ ಛಲವಾದಿ ಜನಾಂಗದ ಸಮಾವೇಶ ನಡೆಸಿದ್ದ ಸಾಕ್ಷಿಯಿದೆ. ಸರ್ಕಾರ 1968ರಲ್ಲಿ ಎರಡು ಎಕರೆ ಪ್ರದೇಶವನ್ನು ಎಡಿ ಕಾಲೋನಿ ಎಂದು ಗುರುತಿಸಿ ಆದಿ ದ್ರಾವಿಡ ಜನರಿಗೆ ನಿವೇಶನ ಹಂಚಲಾಗಿತ್ತು ಎಂದರು.
ಈ ಮಧ್ಯೆ ದಿಢೀರ್ ಮುಸ್ಲಿಂ ಸಮುದಾಯ ಮದರಸ ಧಾರ್ಮಿಕ ಕಟ್ಟಡ ಕೆಲಸ ನಡೆಸಿರುವುದು ಸರಿಯಲ್ಲ. ಇವರಿಗೆ ನಿವೇಶನ ದೊರೆಕಿದ್ದೆ ಅಚ್ಚರಿಯಾಗಿದೆ. ಈ ಹಿಂದೆ ಲಕ್ಷ್ಮಣರಾವ್ ಅವರಿಂದ ನಿವೇಶನ ಮುಸ್ಲಿಂ ಸಮಾಜದವರಿಗೆ ದೊರೆಕಿದೆ. ನಂತರ ಜಾಮಿಯಾ ಮಸೀದಿ ಹೆಸರಿಗೆ ದಾನವಾಗಿ ನೀಡಿದ ಬಳಿಕ ಮದರಸ ಕಟ್ಟಡವನ್ನು ಆರಂಭಿಸಲಾಗಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ತಂದಿದೆ. ಇಲ್ಲಿ ಎಲ್ಲಾ ಸಮಾಜದವರು, ಧರ್ಮದವರೂ ಇದ್ದಾರೆ. ಆದರೆ ಧಾರ್ಮಿಕ ಆಚರಣೆಯ ಕಟ್ಟಡ ಮಾಡದೆ ವಾಸದ ಮನೆ ನಿರ್ಮಿಸಿಕೊಂಡು ಅದರಲ್ಲಿ ಮುಸ್ಲಿಂ ಸಮಾಜದವರೇ ವಾಸ ಮಾಡಲಿ. ಆದರೆ ಮಸೀದಿ ಕಟ್ಟಬಾರದು. ಈ ಬಗ್ಗೆ ತಹಸೀಲ್ದಾರ್ ಸ್ಥಳ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಮುಖಂಡ ಕುಮಾರ್ ಮಾತನಾಡಿ, ಗ್ರಾಮದ ಸರ್ವೆ ನಂಬರ್ 84ರಲ್ಲಿನ ಎರಡು ಎಕರೆ ಪ್ರದೇಶದಲ್ಲಿ ಈ ಹಿಂದೆ 56 ನಿವೇಶನ ವಿಂಗಡಿಸಿ ಮೊದಲ ಹಂತದಲ್ಲಿ 27 ಜನರಿಗೆ ಹಂಚಲಾಗಿತ್ತು. 2ನೇ ಹಂತದಲ್ಲಿ ಸಹ ಹಂಚಿದ ನಿವೇಶನ ಪಟ್ಟಿಯಲ್ಲಿ ಲಕ್ಷ್ಮಣರಾವ್ ಹೆಸರು ಬಂದಿದೆ. ಅವರಿಗೆ ನೀಡಿದ ನಿವೇಶನ ಅವರ ಮಕ್ಕಳು ಮುಸ್ಲಿಂ ಸಮುದಾಯವರಿಗೆ ಮಾರಾಟ ಮಾಡಿದ್ದರು. ನಂತರ ಜಾಮಿಯಾ ಮಸೀದಿ ಹೆಸರಿಗೆ ದಾನವಾಗಿ ಬಂದ ನಿವೇಶನ ಎಂದು ಇಲ್ಲಿ ಮದರಸ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಆಕ್ಷೇಪಾರ್ಹ ಎಂದರು. ಮುಖಂಡರಾದ ಜಗದೀಶ್, ದಿನಕರ್, ಗಂಗಭೈರ, ಶಿವಮ್ಮ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.