16 ಜಿಲ್ಲೆಯಲ್ಲಿ ಬೇಸಿಗೆ ಮಳೆ: 2 ಬಲಿ, ಕೆಲವೆಡೆ ಅನಾಹುತ

ಶಿವಮೊಗ್ಗ, ಮಂಡ್ಯ ಮತ್ತಿತರ ಕಡೆ ಭಾರಿ ಗಾಳಿ ಬೀಸಿದ ಪರಿಣಾಮ 30ಕ್ಕೂ ಹೆಚ್ಚು ರಾಸು ಸಾವು ಕಂಡಿವೆ. ಕೆಲವೆಡೆ ಆಲಿಕಲ್ಲು ಮಳೆ ಸುರಿದ ಕುರಿತು ವರದಿಯಾಗಿದೆ

KannadaprabhaNewsNetwork | Published : Apr 18, 2024 7:46 PM IST / Updated: Apr 19 2024, 07:05 AM IST

 ಬೆಂಗಳೂರು :  ಒಂದೆರಡು ದಿನಗಳ ಬಿಡುವಿನ ಬಳಿಕ ರಾಜ್ಯದಲ್ಲಿ ಮತ್ತೆ 16 ಜಿಲ್ಲೆಗಳಲ್ಲಿ ಬೇಸಿಗೆ ಮಳೆ ಸುರಿದಿದೆ. ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಮಳೆ ಸಂಬಂಧಿ ಅನಾಹುತಕ್ಕೆ ಗುರುವಾರ ಇಬ್ಬರು ಬಲಿಯಾಗಿದ್ದಾರೆ. 30ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಜೂಲಕಟ್ಟಿ ಗ್ರಾಮದ ಹೊಲವೊಂದರಲ್ಲಿ ರೈತ ಸಿದ್ದಯ್ಯ ಗುರುವಿನ (32) ಸಿಡಿಲು ಬಡಿದು ಮೃತಪಟ್ಟರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೋಣಂದೂರು ಸಮೀಪ ದೇಮ್ಲಾಪುರ ಗ್ರಾ.ಪಂ. ವ್ಯಾಪ್ತಿಯ ಸಂಪಗಾರು ಗ್ರಾಮದ ಜಯಂತ ಭಟ್ ( 64) ಎಂಬುವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಮೈಮೇಲೆ ಮರ ಬಿದ್ದು ಸಾವಿಗೀಡಾಗಿದ್ದಾರೆ.

ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ವಿಜಯನಗರ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ವಿಜಯಪುರದಲ್ಲಿ ಕೆಲಕಾಲ ಗಾಳಿ, ಸಿಡಿಲು-ಗುಡುಗು ಸಹಿತ ಉತ್ತಮ ಮಳೆಯಾಗಿದೆ. ವಿಜಯನಗರದಲ್ಲಿ ಕೆಲವೆಡೆ ಆಲಿಕಲ್ಲು ಬಿದ್ದ ವರದಿಯಾಗಿದೆ.

ಭಾರೀ ಗಾಳಿ: ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪಾಲಿಗೆ ಇದು ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಕೊಂಚ ತಂಪಿನ ಅನುಭವವಾದಂತಾಯಿತು. ಇನ್ನು ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡದಲ್ಲಿ ಭಾರೀ ಗಾಳಿ ಸಹಿತ ಕೆಲಕಾಲ ಸಿಡಿಲಬ್ಬರದ ಮಳೆಯಾಗಿರುವ ಹಿನ್ನೆಲೆಯಲ್ಲಿ ಜನ ಜೀವನ ಕೊಂಚ ಅಸ್ತವ್ಯಸ್ತಗೊಂಡಿತು. ದಿಢೀರ್‌ ಮಳೆ ಮತ್ತು ಭಾರೀ ಗಾಳಿಯಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಭಾರೀ ಗಾಳಿಗೆ ಮಂಡ್ಯದಲ್ಲಿ ಬಿರುಗಾಳಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು, ಕಿರಗಂದೂರು ರಸ್ತೆ ಬಳಿ ಹೆದ್ದಾರಿಯಲ್ಲಿ ಆದಿಚುಂಚನಗಿರಿ ಸಂಸ್ಥಾನ ಮಠದ ಸ್ವಾಗತ ಕಮಾನು ಕುಸಿದುಬಿದ್ದಿದೆ. ಶಿವಮೊಗ್ಗದ ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಭಾರೀ ಮರವೊಂದು ಬಿದ್ದು ಒಂದು ತಾಸಿಗೂ ಅಧಿಕ ಕಾಲ ವಾಹನ ಸಂಚಾರ ಹಸ್ತವ್ಯಸ್ತಗೊಂಡರೆ, ಹೊಳೆಹೊನ್ನೂರಲ್ಲೂ ಹಲವೆಡೆ ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ಸಿಡಿಲು ಬಡಿದು ಬಂಗಿ ಮಹಲ್‌ಗೆ ಹಾನಿವಿಜಯಪುರ ನಗರದ ನಗರದ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ಮೆಹತರ್ ಮಹಲ್ (ಬಂಗಿ ಮಹಲ್)ನ ಮಿನಾರ್ (ಗೋಪುರ) ಸಿಡಿಲ ಹೊಡೆತಕ್ಕೆ ಕುಸಿದು ಬಿದಿದ್ದೆ. ಮಿನಾರ್‌ನ ಮೇಲ್ಭಾಗದಲ್ಲಿದ್ದ ಒಂದು ಬದಿಯ ಗೋಪುರದ ಕಲ್ಲುಗಳು ಬಿದ್ದ ಪರಿಣಾಮ ಕೆಳಗಡೆ ನಿಂತಿದ್ದ ಕಾರಿಗೂ ಹಾನಿಯಾಗಿದೆ. ಅದೇ ರೀತಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಹಗರನೂರು ಗ್ರಾಮದ ತುಂಬಿನೆಪ್ಪ ದೇವಾಲಯದ ಗರುಡ ಗಂಭಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

Share this article