ಹಾವೇರಿ: ರಾಜ್ಯ, ದೇಶದಲ್ಲಿ ನಮಗೆ ಸ್ಥಾನಮಾನ ದೊರಕಿದ್ದರೆ ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರು ಕಾರಣ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಹಿರಿಯರು ತಮ್ಮ ಪ್ರಾಣತ್ಯಾಗ ಮಾಡಿದ್ದು ಸ್ಮರಣೀಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ಉತ್ತರಾಧಿಕಾರಿಗಳ ಸಂಘದ ಉಪಾಧ್ಯಕ್ಷ ಡಾ. ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿ, ಈಗ ಯಾವುದೇ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಜೀವಂತವಾಗಿ ಬದುಕಿಲ್ಲ. ಆದರೆ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಇದ್ದು ಅವರಿಗೆ ಸರ್ಕಾರ ಹಾಗೂ ಸಾರ್ವಜನಿಕವಾಗಿ ಇವರಿಗೆ ಈ ದೇಶದ ಸ್ವಾತಂತ್ರ್ಯಕ್ಕೆ ದುಡಿದ ಹಾಗೂ ಮಡಿದ ಕುಟುಂಬಸ್ಥರು ಎಂಬ ಗೌರವ ಸಿಗಬೇಕು. ಸ್ವಾತಂತ್ರ್ಯ ಹೋರಾಟಕ್ಕಾಗಿ ಎಲ್ಲವನ್ನು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಹಾಗೂ ರಾಷ್ಟ್ರೀಯ ಪರಿವಾರ ಎಂದು ಗುರುತಿನ ಪತ್ರವನ್ನು ನೀಡಬೇಕು ಎಂದರು.ಸಿದ್ದಾಪುರದ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಉಪನ್ಯಾಸ ನೀಡಿದರು. ಹಿರಿಯ ವಕೀಲ ಪಿ.ವಿ. ನಡುವಿನಮಠ ಮಾತನಾಡಿ, ಸ್ವಾತಂತ್ರ್ಯ ಯೋಧರ ವಂಶಸ್ಥರ ಸಮ್ಮೇಳನವನ್ನು ಸರ್ಕಾರ ಸ್ವಇಚ್ಛೆಯಿಂದ ಮಾಡಿದಲ್ಲಿ ಅರ್ಥಪೂರ್ಣವಾಗಿರುತ್ತದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ ವಹಿಸಿದ್ದರು. ಹಾವೇರಿಯ ತಹಸೀಲ್ದಾರ್ ಶಂಕರ ಜಿ.ಎಸ್., ಹಿರಿಯ ಮುಖಂಡ ಎಂ.ಎಂ. ಹಿರೇಮಠ, ಕಲಾವಿದೆ ಪದ್ಮಶ್ರೀ ಹೆಗಡೆ, ಅಪ್ರತಿಮ ಸ್ವಾತಂತ್ರ್ಯ ಯೋಧ ಸಂಗೂರ ಕರಿಯಪ್ಪನವರ ಮಗಳು ಚಿಕ್ಕಮ್ಮ ಆಡೂರ ಹಾಗೂ ಸಂಘಟನೆಯ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.ಶಿಕ್ಷಕ ಡಾ.ಎಸ್. ಹನುಮಂತಪ್ಪ ಹಂಸಭಾವಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಸಂತೋಷ ಎಸ್.ಬಿ. ಹಂಸಭಾವಿ ನಿರ್ವಹಿಸಿ, ವಂದಿಸಿದರು.