ತಿಪಟೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಆದಷ್ಟು ಇವುಗಳಿಂದ ದೂರವಿದ್ದು ಪ್ರಜ್ಞಾವಂತ ಪ್ರಜೆಗಳಾಗಬೇಕು ಎಂದು ವಕೀಲೆ ಶೋಭಾ ಜಯದೇವ್ ಹೇಳಿದರು.
ವಿದ್ಯಾರ್ಥಿಗಳು ಚಂಚಲ ಮನಸ್ಸು, ಆಕರ್ಷಣೆ, ಚಟಗಳಿಗೆ ಬಲಿಯಾಗಿ ಕೆಟ್ಟ ಮನಸ್ಸಿನಿಂದ ಹಾದಿ ತಪ್ಪುತ್ತಿರುವುದು ಬಹಳ ಅಪಾಯಕಾರಿ. ತಂದೆ-ತಾಯಿಗಳ, ಗುರು-ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಗುರಿಯೊಂದಿಗೆ ಮುನ್ನಡೆದು, ಮೌಲ್ಯಾಧಾರಿದ ಶಿಕ್ಷಣದಿಂದ ಸದ್ಗುಣಿಗಳಾಗಬೇಕು. ಓದುವ ವಯಸ್ಸಿನಲ್ಲಿ ಮೊಬೈಲ್, ವಾಟ್ಸಾಪ್ ಬಳಸದೆ ಓದಿನತ್ತ ಗಮನಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವೆ ಸಂಕಟ ಅನುಭವಿಸುವಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿಯಾಗಿ ಹೊರಹೊಮ್ಮಿದ್ದಾಳೆ. ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಕಡೆ ಹೆಚ್ಚು ಆಸಕ್ತಿ ಹಿಸಿ ಉತ್ತಮ ಶಿಕ್ಷಣ ಪಡೆದು ಸಮಾಜದ ಬದಲಾವಣೆಗೆ ಮುಂದಾಗಬೇಕು. ಪ್ರತಿ ಕಾಲೇಜಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಪ್ರಾಂಶುಪಾಲ ಡಾ.ಜಿ.ಡಿ.ಗುರುಮೂರ್ತಿ, ಸಮಿತಿ ಸದಸ್ಯರಾದ ಡಾ.ಚಂದ್ರಕಲಾ, ಡಾ.ದೀಪ್ತಿ ಅಮೀತ್, ಡಾ.ಪಿ.ವಿ.ನಿರ್ಮಲಾದೇವಿ, ಪ್ರೊ.ವಿಜಯಕುಮಾರಿ ಭಾಗವಹಿಸಿದ್ದರು.