ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೨೦ ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಅಳವಡಿಕೆ ಕಾಮಗಾರಿ ಸೋಮವಾರದಿಂದ ಪ್ರಾರಂಭಿಸಲಾಗುತ್ತದೆ ಎಂದು ಬಳ್ಳಾರಿ ಗೆಸ್ಕಾಂ ವಲಯದ ಮುಖ್ಯ ಅಭಿಯಂತರ ಆರ್.ತೇಜ್ಯಾನಾಯ್ಕ ತಿಳಿಸಿದರು.
ನೂತನ ಪರಿವರ್ತಕ ಅಳವಡಿಕೆ ಕಾಮಗಾರಿ ವೇಳೆ ಸ್ವಲ್ಪ ಮಟ್ಟಿನ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ರೈತರು ಇಲಾಖೆಯೊಂದಿಗೆ ಸಹಕರಿಸಲು ಕೋರಿದರು. ಜೊತೆಗೆ ಜಿ.ಕೋಡಿಹಳ್ಳಿ ಮತ್ತು ತೆಲುಗೋಳಿ ಗ್ರಾಮಗಳಿಗೆ ನೂತನ ಉಪ ವಿತರಣಾ ಕೇಂದ್ರಗಳ ಮಂಜೂರಾತಿ ದೊರೆತಿದ್ದು, ಟೆಂಡರ್ ಕರೆಯಲಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತುಂಗಭದ್ರಾ ಜಲಾಶಯದ ನಿರ್ಮಾಣದ ಹಿನ್ನೆಲೆಯಲ್ಲಿ ನಿರಾಶ್ರಿತರಾದ ಈ ಭಾಗದ ಬಹುತೇಕ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದು ಇವರ ಜಮೀನುಗಳನ್ನು ನೀರಾವರಿ ಸೌಲಭ್ಯ ಕಲ್ಪಿಸುವ ಅಗತ್ಯ ಇದೆ. ಪೂರಕ ವಿದ್ಯುತ್ ವಿತರಣೆಗೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಈ ಭಾಗದ ರೈತರು ನಿರಂತರವಾಗಿ ಹೋರಾಟ ನಡೆಸಿದ ಫಲವಾಗಿ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕಕ್ಕೆ ಮಂಜೂರಾತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಇಟಗಿ ಸ್ವೀಕರಣಾ ಘಟಕದ ಕಾರ್ಯ ನಿರ್ವಾಹಕ ಅಭಿಯಂತರ ರವೀಂದ್ರನಾಥ್ ಹಾಗೂ ಪಟ್ಟಣದ ಇಇ ಸತೀಶ್ ಮತ್ತು ಉಪ ವಿಭಾಗದ ನಾಗರಾಜ್ ಕುರೇಕುಪ್ಪ ರೈತರೊಂದಿಗೆ ಸಂವಾದ ನಡೆಸಿದರು. ಸಭೆಯಲ್ಲಿ ಹ್ಯಾಟಿ ಆನಂದರೆಡ್ಡಿ, ಮೈನಳ್ಳಿ ಕೊಟ್ರೇಶಪ್ಪ, ಬಾಣದ ಶಿವಪ್ಪ, ಆಂಜನೇಯರೆಡ್ಡಿ, ಚಿಲಗೋಡು ದೊಡ್ಡಬಸಪ್ಪ, ಗುಡ್ಡದ್ ಮೋಹನರೆಡ್ಡಿ, ಯಂಕಾರೆಡ್ಡಿ, ಮುತ್ಕೂರು ಲಚ್ಚಪ್ಪ, ನಿವೃತ್ತ ತಾ.ಪಂ.ಇಓ ಟಿ.ವೆಂಕೋಬಪ್ಪ ಮತ್ತಿತರರಿದ್ದರು.