ಮುಳಗುಂದ: ಪಟ್ಟಣದ ಐತಿಹಾಸಿಕ ಅಬ್ಬಿಗೇರಿ ಕೆರೆಯಲ್ಲಿ ಅಬ್ಬಿಗೇರಿ ವಿಹಾರಧಾಮ ಉದ್ಘಾಟನೆ ಹಾಗೂ ದೋಣಿ ವಿಹಾರಕ್ಕೆ ಭಾನುವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಆನಂತರ ಮಾತನಾಡಿದ ಅವರು, ಐತಿಹಾಸಿಕ ಸ್ಥಳವಾಗಿರುವ ಮುಳಗುಂದದಲ್ಲಿ ಅಬ್ಬಿಗೇರಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿದ್ದೇವೆ. ಈ ಬೋಟಿಂಗ್ ವ್ಯವಸ್ಥೆ ಗ್ರಾಮಸ್ಥರ ಆಕರ್ಷಣೀಯವಾಗಿದೆ. ಇದೊಂದು ಪ್ರವಾಸಿಗರಿಗೆ ದೋಣಿಯಲ್ಲಿ ವಿಹರಿಸಿ ಕೆಲಸಮಯ ಕಾಲ ಕಳೆಯುವುದಕ್ಕೆ ಅತ್ಯಂತ ಸಂತೋಷದ ತಾಣವಾಗಲಿದೆ.ಇಲ್ಲಿಯೇ ದಾವಲ್ ಮಲ್ಲಿಕ್ ಪುಣ್ಯ ಕ್ಷೇತ್ರಕ್ಕೆ ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೂರದ ಊರುಗಳಿಂದ ಬರುತ್ತಾರೆ. ಅವರಿಗೆ ಈ ಒಂದು ಪ್ರದೇಶ ಇನ್ನು ಹೆಚ್ಚು ಸಂತೋಷ ತಂದುಕೊಡುವ ತಾಣವಾಗಲಿದೆ. ಇಲ್ಲಿಯ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ, ಜೈನ ಬಸದಿ, ಅನ್ನದಾನೇಶ್ವರ ದೇವಸ್ಥಾನ, ಬಾಲಲೀಲಾ ಮಹಾಂತ ಶಿಯೋಗಿಗಳ ಗವಿಮಠ, ಸೋಮೇಶ್ವರ ದೇವಾಲಯಗಳು ಮುಳಗುಂದ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಮಾಡಲಿಕ್ಕೆ ಕಾರಣವಾಗುತ್ತವೆ. ಆ ನಿಟ್ಟಿನಲ್ಲಿ ಮುಳಗುಂದವನ್ನು ಪ್ರವಾಸಿ ದೃಷ್ಟಿಯಿಂದ ಅಭಿವೃದ್ಧಿ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ರೋಹನ್, ಪ್ರಭು ಬುರಬುರೆ, ಹಿರಿಯ ಮುಖಂಡರಾದ ಶಿವಣ್ಣ ನೀಲಗುಂದ, ಪರಶುರಾಮ ವಂಟಕರ, ಬಸವರಾಜ ಬಾತಖಾನಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸುಂಕಾಪುರ, ಪಪಂ ಅಧ್ಯಕ್ಷ ಯಲ್ಲವ್ವ ಕವಲೂರ, ಸದಸ್ಯರಾದ ಕೆ.ಎಲ್. ಕರಿಗೌಡರ, ವಿಜಯ ನೀಲಗುಂದ, ಷಣ್ಮುಖಪ್ಪ ಬಡ್ನಿ, ಮಹಾದೇವಪ್ಪ ಗಡಾದ, ಇಮಾಮಸಾಬ ಶೇಖ, ಬಸವರಾಜ ಹಾರೋಗೇರಿ, ಅನುಸೂಯಾ ಸೋಮಗಿರಿ, ಚಂಪಾವತಿ ಗುಳೇದ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.