ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಏಪ್ರಿಲ್ 26ರಂದು ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಆಸೆ-ಆಮಿಷಗಳನ್ನು ತೋರಿ ಮತದಾರರನ್ನು ಸೆಳೆಯುವಂತಹ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭಾ ಕಲ್ಯಾಣ್ ಅವರು ತಿಳಿಸಿದ್ದಾರೆ. ಚುನಾವಣಾ ಪ್ರಕ್ರಿಯೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಮತದಾರರ ಮೇಲೆ ಪ್ರಭಾವ ಬೀರುವ ಹಣಬಲ/ತೋಳ್ಬಲಗಳಂತಹ ಯಾವುದೇ ಚಟುವಟಿಕೆಗಳನ್ನು ನಿಯಂತ್ರಿಸಲು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಚೆಕ್ಪೋಸ್ಟ್, ಸ್ಥಾಯಿ ಕಣ್ಗಾವಲು ತಂಡ, ವಿಡಿಯೋ ಕಣ್ಗಾವಲು ತಂಡ ಹಾಗೂ ಪ್ಲೈಯಿಂಗ್ ಸ್ಕ್ವ್ಯಾಡ್ಗಳನ್ನು ನೇಮಕ ಮಾಡಲಾಗಿದೆ. ಚುನಾವಣೆಯನ್ನು ನ್ಯಾಯ ಸಮ್ಮತವಾಗಿ ಶಾಂತ ರೀತಿಯಲ್ಲಿ ನಡೆಸುವ ದೃಷ್ಟಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನಾ ನಿಯಮದಡಿ ಅನುಮತಿಸದ ಹಣ, ಸೇರಿದಂತೆ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ವಸ್ತುಗಳನ್ನು ವಿತರಣೆ ಮಾಡುವುದನ್ನು ಚುನಾವಣಾ ಅಕ್ರಮವೆಂದು ಪರಿಗಣಿಸಲಾಗುವುದು. ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಆದಾಯ ತೆರಿಗೆ ಕಾಯ್ದೆ ಕಲಂ 269 ಎಸ್ಟಿ ಅನ್ವಯ ಯಾವುದೇ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷ ರು.ಗಳಿಗಿಂತ ಹೆಚ್ಚಿನ ಹಣ/ಉಡುಗೊರೆ ಸ್ವೀಕರಿಸುವುದು ಹಾಗೂ ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 10 ಸಾವಿರ ರು.ಗಳಿಗಿಂತ ಹೆಚ್ಚಿನ ವ್ಯವಹಾರವನ್ನು ನಗದು ಮೂಲಕ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಸಾಗಾಣಿಕೆದಾರರಿಗೆ 35 ಸಾವಿರ ರು.ಗಳವರೆಗೆ ಮಿತಿ ನೀಡಲಾಗಿದೆ.ಸಾಲ ಮರುಪಾವತಿ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆ ಕಲಂ 269 ಎಸ್ಎಸ್ ಮತ್ತು 269 ಟಿ ಅಡಿ 20 ಸಾವಿರ ರು.ಗಳ ನಗದನ್ನು ಮೀರಿದ ಮೊತ್ತವನ್ನು ಸ್ವೀಕರಿಸುವಂತಿಲ್ಲ. ಅಥವಾ ಪಾವತಿ/ಮರುಪಾವತಿ ಮಾಡುವಂತಿಲ್ಲ. ಈ ನಿಯಮ ಸಾಲ ಮರುಪಾವತಿ ಮತ್ತು ಆಸ್ತಿ ವಹಿವಾಟಿಗೂ ಅನ್ವಯಿಸುತ್ತದೆ. ಯಾವುದೇ ವ್ಯಕ್ತಿಯು ಮತದಾರರನ್ನು ಸೆಳೆಯಲು ಅನಧಿಕೃತವಾಗಿ ಹಣ ವಿತರಣೆ/ ಸರಕು, ಬೆಲೆ ಬಾಳುವ ವಸ್ತು, ಉಡುಗೊರೆ ಚೀಟಿ, ಸಿಮ್ ಕಾರ್ಡ್ ಬ್ಯಾಲೆನ್ಸ್, ಪ್ರಯಾಣ ವ್ಯವಸ್ಥೆ, ಆಹಾರ, ಬೇಯಿಸಿದ/ ಬೇಯಿಸದ ಆಹಾರ ಪದಾರ್ಥ, ಆಲ್ಕೋಹಾಲ್ಯುಕ್ತ/ ಆಲ್ಕೋಹಾಲ್ ರಹಿತ ಪಾನೀಯ, ಇಂಧನ, ಉಚಿತ ಸೌಲಭ್ಯ/ ಸಹಾಯಧನ ಸೇರಿದಂತೆ ಮತ್ತಿತರ ಆಮಿಷಗಳನ್ನು ಒಡ್ಡಬಾರದು. ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲಿ ಮತದಾರರನ್ನು ಸೆಳೆಯುವಂತಹ ವಸ್ತುಗಳ ಸಂಗ್ರಹಣೆ, ದಾಸ್ತಾನು, ಸಾಗಣೆ ಮಾಡಬಾರದು ಹಾಗೂ ಸಂಗ್ರಹಣೆ, ದಾಸ್ತಾನು, ಸಾಗಣೆ ಮಾಡಲು ನೆರವಾಗಬಾರದು. ನಿಯಮಬಾಹಿರವಾಗಿ ವಸ್ತುಗಳ ಮಾರಾಟ/ ಸಂಗ್ರಹಣೆ/ದಾಸ್ತಾನು/ಸಾಗಣೆ ಮಾಡುವ ವಹಿವಾಟುಗಳ ಮೇಲೆ ಶಂಕೆ ವ್ಯಕ್ತವಾದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಯಾರೇ ಆಗಲಿ ವಿವರಣಾತ್ಮಕ/ ದೃಢೀಕರಣ ದಾಖಲೆಗಳಿಲ್ಲದೆ 50 ಸಾವಿರ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಸಾಗಿಸಬಾರದು ಹಾಗೂ 10 ಸಾವಿರ ರು.ಗಳಿಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಸಾಗಣೆ ಮಾಡಬಾರದು. ಈ ನಿಯಮಗಳನ್ನು ಉಲ್ಲಂಘನೆ ಮಾಡಿದಲ್ಲಿ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.