ಬೆಂಗಳೂರು : ನಗರದ ಬನಶಂಕರಿ 6ನೇ ಹಂತದ ಸೋಂಪುರ ಕೆರೆಗೆ ಕಲುಷಿತ ನೀರು ಹರಿಯುವುದರ ತಡೆಗೆ ಇಂಟರ್ಮೀಡಿಯೇಟ್ ಸೀವೇಜ್ ಪಂಪಿಂಗ್ ಸ್ಟೇಷನ್ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಸಂಬಂಧಿತ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅಂತಿಮ ಅವಕಾಶ ನೀಡಿದ್ದಾರೆ.
ಸೋಂಪುರ ಕೆರೆ ಅಭಿವೃದ್ಧಿ ಸಂಬಂಧ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂತಿಗಳು, ವಿಚಾರಣೆಗೆ ಹಾಜರಾಗಿದ್ದ ಬಿಡಿಎ, ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಗೆ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.
ಕಳೆದ ಮೇ 13ರಂದು ನಡೆದ ವಿಚಾರ ವೇಳೆ ಕೆರೆಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಇಂಟರ್ಮೀಡಿಯೇಟ್ ಸೀವೇಜ್ ಪಂಪಿಂಗ್ ಸ್ಟೇಷನ್ ಸ್ಥಾಪಿಸಲು ಸ್ಥಳ ಗುರುತಿಸಲು ಸೂಚಿಸಿದ್ದರು. ಆದರೆ, ಅಧಿಕಾರಿಗಳು ಇನ್ನೂ ಸ್ಥಳ ಗುರುತಿಸಿರಲಿಲ್ಲ. ಹೀಗಾಗಿ ಸ್ಥಳ ಗುರುತಿಸಲು ಅಂತಿಮ ಅವಕಾಶ ನೀಡಿದರು.ಕೆರೆ ಅಭಿವೃದ್ಧಿ ಸಂಬಂಧ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹಿಂದಿನ ವಿಚಾರಣೆ ವೇಳೆ ಹೇಳಿದ್ದರು. ಆದರೆ, ಈವರೆಗೂ ಕೆರೆ ಅಭಿವೃದ್ಧಿಗೆ ಕ್ರಮ ಜರುಗಿಸಿಲ್ಲ. ಹೀಗಾಗಿ ತ್ವರಿತವಾಗಿ ಕೆಲಸ ಪ್ರಾರಂಭಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಯ ಅಂಚಿನಲ್ಲಿ ಐಎಸ್ಪಿಎಸ್ ನಿರ್ಮಾಣಕ್ಕೆ ಅಡೆತಡೆಗಳು ಬಂದಲ್ಲಿ ಪರಿಹರಿಸಿಕೊಳ್ಳಲು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಖದ್ದು ಭೇಟಿ ನೀಡಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಜಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.ಈ ಪ್ರಕರಣದ ತನಿಖೆಯು 2018ನೇ ಸಾಲಿನಿಂದ ನಡೆಯುತ್ತಿರುವುದರಿಂದ ಕೂಡಲೇ ಕ್ರಮ ವಹಿಸುವಂತೆ ವಿಚಾರಣೆಗೆ ಹಾಜರಾಗಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಕ್ರಮ ವಹಿಸದಿದ್ದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, ಪ್ರಕರಣದ ವಿಚಾರಣೆಯನ್ನು ಆ.22ಕ್ಕೆ ಮುಂದೂಡಿದರು.