ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಡಿಸಿ ಕಚೇರಿ ಹಾಗೂ ಕೇಂದ್ರ ಬಸ್ ನಿಲ್ದಾಣ ಬಳಿ ಸಮುದಾಯದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಶಬ್ಬೀರ್ ಕಾಗಜಕೋಟ ಮಾತನಾಡಿ, ಶಕ್ತಿ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ಸಾರಿಗೆ ಇಲಾಖೆ ಜಿಲ್ಲಾ ನಿಯಂತ್ರಣಾಧಿಕಾರಿಗಳು ವಿಫಲರಾಗಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಲ್ಲಿಸಲು ಒತ್ತಾಯಿಸುತ್ತೇವೆ. ಈ ಕಾರ್ಡ್ ಗಳನ್ನು ನಿಮಗೆ ಯಾರು ನೀಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರು ಸಾಮಾಜಿಕ, ಕೌಟುಂಬಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬದಲಾಗಿ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಯಲ್ಲಿ ಜೀವನ ನಡೆಸಲು ಶ್ರಮಿಸುತ್ತಿದ್ದೇವೆ. ಶಕ್ತಿ ಯೋಜನೆಯಲ್ಲಿ ಎದುರಿಸುತ್ತಿರುವ ಸಮಸ್ಯೆ ಕುರಿತು ನವಸ್ಪೂರ್ತಿ ಸಂಘಟನೆಯಿಂದ ಮೌಕಿಕವಾಗಿ ಹಾಗೂ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮವಾಗಿಲ್ಲ ಎಂದರು.ದಿನನಿತ್ಯ ಬಸ್ ನಲ್ಲಿ ನಮ್ಮ ಸಮುದಾಯಕ್ಕೆ ಸಾರ್ವಜನಿಕ ಹಿಂಸೆ ತಪ್ಪಿಲ್ಲ, ಹತ್ತು ದಿನದಲ್ಲಿ 5 ಸಮಸ್ಯೆ ಆಗಿವೆ. ಸಾರ್ವಜನಿಕವಾಗಿ ಲಿಂಗತ್ವ ಬಹಿರಂಗವಾಗಿ ಅಪಮಾನ ಅನುಭವಿಸಿದ ಸಾಕಷ್ಟು ಉದಾಹರಣೆಗಳಿವೆ. ಶಕ್ತಿ ಯೋಜನೆಯಲ್ಲಿ ಪ್ರಯಾಣಿಸುವಾಗ ಯಾವುದೇ ಹಿಂಸೆ, ಸಾರ್ವಜನಿಕ ನಿಂದನೆ ಆಗದ ರೀತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು. ಸಿಎಂ, ಸಚಿವರು ಹಾಗೂ ಡಿಸಿ ಅವರು ನಿಂದಿಸುವವರ ವಿರುದ್ಧ ತಕ್ಷಣವೇ ಕ್ರಮಕೈಗೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತರ ವಿವಿಧ ಗುರುತಿಸುವಿಕೆಗಳ ಬಗ್ಗೆ ಜಾಗೃತಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಲ್ಲು ಕುಂಬಾರ, ಈರಮ್ಮ ಲಗಳಿ, ಈರವ್ವ ಪೂಜಾರಿ, ಶಾಂತಗೌಡತಿ ಬಿರಾದಾರ, ದಾದಾಪೀರ ಮುಲ್ಲಾ ಸೇರಿ ಹಲವರು ಭಾಗವಹಿಸಿದ್ದರು.