ಖಾಸಗಿ ಶಾಲೆಗಳ ವ್ಯಾಮೋಹ ಬಿಡಿ: ಶಾಸಕ ಬಸವಂತಪ್ಪ

KannadaprabhaNewsNetwork | Published : May 30, 2025 1:21 AM
ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಕೆರೆಯಾಗಳಹಳ್ಳಿ ಗ್ರಾಮ ಸರ್ಕಾರಿ ಶಾಲೆ ಪ್ರಾರಂಭ ಕಾರ್ಯಕ್ರಮಕ್ಕೆ ಚಾಲನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು, ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಸೇರಿಸಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಉತ್ತರ ವಲಯದ ಕೆರೆಯಾಗಳಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ‘ಪ್ರಸಕ್ತ ವರ್ಷದ ಶಾಲಾ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಹಾಗೂ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಖುದ್ದಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿ, ಉತ್ತಮ ಶಿಕ್ಷಣ ಕಲ್ಪಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನುರಿತ ಪ್ರತಿಭಾವಂತ ಶಿಕ್ಷಕರು ಇದ್ದಾರೆ. ಶಾಲೆಯಲ್ಲಿ ಶಿಕ್ಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದು ಸಾಧ್ಯವಾದಲ್ಲಿ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.

ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಏಕೆಂದರೆ ಜಗತ್ತು ಮುನ್ನಡೆಯುವುದು ಮಕ್ಕಳ ಹೆಜ್ಜೆಗಳ ಮೇಲೆ. ಅವರಿಗೆ ಅಗತ್ಯವಾದ ಅಕ್ಕರೆ, ಅನ್ನ ಮತ್ತು ಅಕ್ಷರ ಈ ಮೂರನ್ನು ನೀಡುವುದು ಸಮಾಜದ ಜವಾಬ್ದಾರಿ. ನಮ್ಮಂತೆ ನಮ್ಮ ಮಕ್ಕಳು ಆಗಬೇಕೆಂಬ ಮನೋಧರ್ಮ ಇಟ್ಟುಕೊಂಡು ಬದುಕಿಗೆ ಅಚ್ಚುವುದನ್ನು ಬಿಟ್ಟು, ಮೊದಲು ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದರಿ ಪ್ರತಿಯೊಬ್ಬ ತಂದೆ-ತಾಯಿಗಳಿಗೆ ಎಂದು ಕರೆ ನೀಡಿದರು.

ಶಾಲೆಗೆ ಹೈಟೆಕ್ ಶೌಚಾಲಯ, ಭೋಜನಾಲಯ ಕೊಠಡಿ, ಅಂಗನವಾಡಿ ಶಾಲೆಗೆ ಮೂಲಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು. ಕ್ಷೇತ್ರದ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸದಂತೆ ದಾಖಲಾತಿ ಆಂದೋಲನ ಮೂಲಕ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆ ತರಲು ಈಗಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಶಾಸಕ ಕೆ.ಎಸ್. ಬಸವಂತಪ್ಪ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕಿ ಶೋಭಾ, ಎಸ್‌ಡಿಎಂಸಿ ಅಧ್ಯಕ್ಷ ಕರಿಯಪ್ಪ, ಗ್ರಾಮದ ಮುಖಂಡರಾದ ಆರ್.ಬಸಣ್ಣ, ಷಣ್ಮುಖಪ್ಪ, ನಾಗಣ್ಣ, ಹೊನ್ನಪ್ಪ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- - -

(ಕೋಟ್‌) ನಮ್ಮ ಮಕ್ಕಳು ಓದುವ ಶಾಲೆ ಸ್ವಚ್ಛವಾಗಿರಬೇಕೆಂಬ ಮನೋಭಾವದಿಂದ ಗ್ರಾಮದ ಮಹಿಳೆಯರು ಶಾಲಾವರಣ ಸ್ವಚ್ಛತೆ ಮಾಡಿ, ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಹೀಗೆ ಆಗಬೇಕಿದೆ. ಸರ್ಕಾರಿ ಎಂದರೆ ಅಸೆಡ್ಡೆ ತೋರಿ ಮೂಗು ಮುರಿಯುವವರೇ ಹೆಚ್ಚು. ಇಂತಹದರಲ್ಲಿ ಇಲ್ಲಿನ ತಾಯಂದಿರು ಸ್ವಯಂಪ್ರೇರಿತವಾಗಿ ಶಾಲಾವರಣ ಸ್ವಚ್ಛತೆ ಮಾಡಿ, ತಮ್ಮ ಮಕ್ಕಳನ್ನು ತಾವೇ ಸ್ವಾಗತಿಸಿರುವುದು ಇತರೆ ಮಹಿಳೆಯರಿಗೆ ಸ್ಫೂರ್ತಿ ತುಂಬಿದೆ.

- ಕೆ.ಎಸ್. ಬಸವಂತಪ್ಪ, ಶಾಸಕ

- - -

-29ಕೆಡಿವಿಜಿ33, 34:

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕೆರೆಯಾಗಳಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಸಿ ನೀರೆರೆಯುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.