ಕನ್ನಡಪ್ರಭ ವಾರ್ತೆ ಕಲಬುರಗಿ
ಗ್ರಾಮದ ರೈತ ಅಂಬಾರಾಯ ಗುರುಣ್ಣ ಕಣ್ಣಿ (ಸ.ನಂ 10) ಇವರಿಗೆ ಸೇರಿದ್ದ ಎತ್ತು ಇದಾಗಿತ್ತು. ಎಂದಿನಂತೆ ಇವರು ಹೊಲದಲ್ಲಿ ಮರದ ಕೆಳಗೆ ಎತ್ತುಗಳನ್ನು ಕಟ್ಟಿ ಮೇವು ಹಾಕಿದ್ದರು. ಸಿಡಿಲಿನ ಅಬ್ಬರ ಶುರುವಾದಾಗ ಎತ್ತುಗಳು ಮರದ ಕೆಳಗೇ ಇದ್ದವು. ಸಿಡಿಲು ರಭಸದಿಂದ ಅಪ್ಪಳಿಸದ್ದರಿಂದ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ.
ಸಿಡಿಲಿಗೆ ಎತ್ತು ಬಲಿಯಾದ ಸುದ್ದಿ ತಿಳಿದ ತಕ್ಷಣ ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಅಂಬಾರಾಯ ಕಣ್ಣಿ ಇವರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ನೊಂದ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದರು.ಸಂಜೆ 5 ಗಂಟೆಗೆ ಸಿಡಿಲು ಬಿದ್ದು ಎತ್ತು ಸಾವನ್ನಪ್ಪಿದೆ, ಮರುಕ್ಷಣವೇ 6 ಗಂಟೆಯೊಳಗೇ ಶಾಸಕರು ದುರಂತದ ಸ್ಥಳದಲ್ಲಿದ್ದು ಸಾಂತ್ವನ ಹೇಳಿದ್ದಲ್ಲದೆ ತಕ್ಷಣ ಸಂಬಂಧಪಟ್ಟಂತಹ ಎಲ್ಲರಿಗೂ ಮಾತನಾಡಿ ರೈತನ ನೆರವಿಗೆ ಬರುವಂತೆ ಸೂಚಿಸಿದ್ದು ವಿಶೇಷವಾಗಿತ್ತು.
ಊರಲ್ಲಿ ಗಾಳಿ, ಮಳೆ ಹೊಡೆತಕ್ಕೆ ಧರೆಗೆ ಉರುಳಿರುವ ದೀಪದ ಕಂಬಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿ ಮತ್ತೆ ಎಂದಿನಂತೆ ವಿದ್ಯುತ್ ಪೂರೈಕೆ ಆಗುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಊರವರು ಶಾಸಕರಿಗೆ ಆಗ್ರಹಿಸಿದರು. ಸ್ಥಳದಲ್ಲೇ ಅಲ್ಲಂಪ್ರಭು ಪಾಟೀಲರು ಜೆಸ್ಕಾಂ ಅಧಿಕಾರಿಗಳಿಗೆ ಮಾತನಾಡುತ್ತ ತಕ್ಷಣ ಸೀತನೂರ್ ಹಾಗೂ ಸುತ್ತಲಿನ ಗ್ರಾಮಗಳ ಕರೆಂಟ್ ಕಂಬಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪವನಕುಮಾರ್ ವಳಕೇರಿ, ಲಿಂಗರಾಜ ಕಣ್ಣಿ, ಭೀಮರಾವ ಮೇಳಕುಂದಾ, ಗೌತಮ ಸೇರಿದಂತೆ ಸೂತನೂರು ಗ್ರಾಮದ ಮುಖಂಡರು, ರೈತರು, ರೈತ ಕುಟುಂಬದವರು ಸ್ಥಳದಲ್ಲಿದ್ದು, ಸೀತನೂರು ಹಾಗೂ ಸುತ್ತಮುತ್ತ ಮಳೆ, ಸಿಡಿಲಿನಿಂದಾದ ಅನಾಹುತಗಳನ್ನು ಶಾಸಕರಿಗೆ ವಿವರಿಸಿ ಬೇಗ ಪರಿಹಾರಕ್ಕೆ ಆಗ್ರಹಿಸಿದರು.