ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ವಿವಿ ಸ್ಥಾಪನೆಗಳು ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವ ವಸಂತ, ಪ್ರವೇಶದ್ವಾರ ಉದ್ಘಾಟನೆ, ಯುವ ಸಂಭ್ರಮ ಆಯೋಜಿಸಲಾಗಿತ್ತು. ೫೦ ಲಕ್ಷ ರು. ವೆಚ್ಚದಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿತ್ತು. ರಾತ್ರಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಆವರಣದಲ್ಲಿ ಹಾಕಿದ್ದ ಶಾಮಿಯಾನ ನೆಲಕಚ್ಚಿತ್ತು. ವಿವಿ ಆವರಣದ ಅಲ್ಲಲ್ಲಿ ನೀರು ನಿಂತು ಕಾಲಿಡಲಾಗದಷ್ಟು ಕೆಸರುಮಯವಾಗಿದೆ. ಕಾರ್ಯಕ್ರಮ ಮಾಡಲು ಸಾಧ್ಯವಾಗದ ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದ್ದರಿಂದ ಗುರುವಾರ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಬೆಳಗ್ಗೆಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಪಿ.ರವಿಕುಮಾರ್, ಮಳೆಯಿಂದ ಶಾಮಿಯಾನ ಕುಸಿದುಬಿದ್ದಿದೆ. ನೀರು ಎಲ್ಲೆಡೆ ತುಂಬಿಕೊಂಡಿರುವುದರಿಂದ ಇವತ್ತಿನ ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡಲಾಗಿದೆ. ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ನಾಳೆ ಅಥವಾ ನಾಡಿದ್ದು ಕಾರ್ಯಕ್ರಮದ ದಿನಾಂಕ ತಿಳಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಭಾರೀ ಗಾಳಿ-ಮಳೆಗೆ ಹಲವೆಡೆ ಹಾಕಿದ್ದ ಫ್ಲೆಕ್ಸ್ಗಳು ಕಳಚಿಬಿದ್ದಿದ್ದರೆ, ಹಲವೆಡೆ ತೂರಿಕೊಂಡು ಹೋಗಿ ಮತ್ತೆಲ್ಲೋ ಬಿದ್ದಿವೆ. ಚಾಮುಂಡೇಶ್ವರಿ ನಗರದ ೬ನೇ ಕ್ರಾಸ್ನಲ್ಲಿ ಟ್ರಾನ್ಸ್ಫಾರ್ಮರ್ ಬಳಿ ವೈರ್ಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡು ಸುತ್ತಲಿನ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿತ್ತು. ಅಲ್ಲದೇ, ರಾತ್ರಿಯಿಡೀ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಗುರುವಾರ ಬೆಳಗ್ಗೆ ೧೧ ಗಂಟೆ ಸಮಯಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು. ವಿವೇಕಾನಂದ ನಗರ ಬಡಾವಣೆಯಲ್ಲಿ ಮರ ಉರುಳಿ ರಾತ್ರಿ ವಿದ್ಯುತ್ ಕಡಿತಗೊಂಡಿತ್ತು.
ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಬದನೆಕಾಯಿ ಫಸಲು ನಷ್ಟವಾಗಿದೆ. ಎಚ್.ಎಲ್.ಶಿವಲಿಂಗಯ್ಯ ಅವರಿಗೆ ಸೇರಿದ ೨ ಎಕರೆ ಭೂಮಿಯಲ್ಲಿ ಒಂದೂಕಾಲು ಎಕರೆ ಬದನೆಕಾಯಿ, ತರಕಾರಿ ಗಿಡಗಳನ್ನು ಬೆಳೆಯಲಾಗಿತ್ತು.
ಈಗ ಮಾರುಕಟ್ಟೆಯಲ್ಲಿ ಬದನೆಕಾಯಿಗೆ ಒಳ್ಳೆಯ ಬೆಲೆ ಇತ್ತು, ಬೇಸಿಗೆ ಮಳೆಯಿಂದ ರೈತ ಶಿವಲಿಂಗಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯ ತಿಳಿದ ಹೊಳಲು ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾದ ಗುಣಶೇಖರ್ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ದೊರಕಿಸುವ ಭರವಸೆ ನೀಡಿದರು. ಜಿಲ್ಲೆಯಲ್ಲಿ ೯.೪ ಮಿ.ಮೀ. ಮಳೆ