ಗೋಕರ್ಣ: ಕಳೆದ ಹಲವು ದಿನಗಳಿಂದ ಬಿಡಾಡಿ ದನಗಳು ನಾಪತ್ತೆಯಾಗುತ್ತಿದ್ದು, ದನಕಳ್ಳರ ಚಟುವಟಿಕೆ ನಡೆಯುತ್ತಿದೆಯೇ ಎಂದು ಸಾರ್ವಜನಿಕರು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
ಬೇಕಿದೆ ನಿಗಾ: ಮಧ್ಯರಾತ್ರಿಯಿಂದ ಬೆಳಗಿನಜಾವದಲ್ಲಿ ನಡೆಯುವ ಈ ಕಳ್ಳರ ಕಾರ್ಯಾಚರಣೆಯನ್ನು ತಡೆಗಟ್ಟಬೇಕಿದೆ. ಪೊಲೀಸರಿಗೆ ಆಧುನಿಕ ಸೌಲಭ್ಯ ಕಲ್ಪಿಸಿ ನಿಗಾ ಇಡುವ ಕಾರ್ಯವಾಗಬೇಕಿದೆ. ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ ಪಿಎಸ್ಐ ಓರ್ವರಿಗೆ ದನಗಳ್ಳರ ಹಿಡಿಯಲು ಹೋದ ಸಂದರ್ಭದಲ್ಲಿ ಅವರ ಮೇಲೆ ವಾಹನ ಹಾಯಿಸಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಅಧಿಕಾರಿ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ಬಗ್ಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಜನಸ್ನೇಹಿಯಾಗಿರುವ ಎಸ್ಪಿ ಗಮನ ಹರಿಸಬೇಕಿದೆ.ಬೇಕಿದೆ ಚೆಕ್ ಪೋಸ್ಟ್, ಸಿಸಿಟಿವಿ ಕ್ಯಾಮೆರಾ:ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರ ಜೊತೆ ಈಗಾಗಲೇ ಕ್ಯಾಮೆರಾ ಇರುವ ಕಡೆ ಅವು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಪರೀಕ್ಷಿಸಿ ಸರಿಪಡಿಸಬೇಕಿದೆ. ಇಲ್ಲಿ ಹಿತ್ತಲಮಕ್ಕಿ ಪೊಲೀಸ್ ಚೆಕ್ ಪೋಸ್ಟ್ ಮತ್ತೆ ಪ್ರಾರಂಭಿಸಿ, ಸಿಬ್ಬಂದಿ ನಿಯೋಜಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಸ್ಥಳೀಯ ಆಡಳಿತದ ನಿರ್ಲಕ್ಷ್ಯ: ಈ ಹಿಂದೆ ಭೂಮಿಯ ಉಳುಮೆಗೆ ಎತ್ತುಗಳನ್ನು ಬಳಸಿಕೊಂಡು ನಂತರ ಅವುಗಳನ್ನು ಹೊರಗೆ ನೀಡುವ ಪರಿಪಾಠವಿತ್ತು. ಬಳಿಕ ಉಳುಮೆಗೆ ಯಂತ್ರ ಬಂದ ನಂತರ ಎತ್ತುಗಳು ಬೀದಿಪಾಲಾಗುವುದರ ಜತೆ ಇತ್ತೀಚೆಗೆ ಆಕಳು ಸಹ ಬೀದಿಯಲ್ಲೇ ಕಾಲ ಕಳೆಯುತ್ತಿವೆ. ಅಲ್ಲಲ್ಲಿ ಕರು ಹಾಕಿಕೊಂಡು ನರಳಾಡುತ್ತಿರುತ್ತವೆ. ಇಂತಹ ಸಂಕಷ್ಟದಲ್ಲಿರುವ ಪುಣ್ಯಕೋಟಿಯನ್ನು ಒಮ್ಮೆಯೂ ತಿರುಗಿ ನೋಡಿ ಸಾಕುವವರಿಗಾದರೂ ನೀಡುವ ಕನಿಷ್ಠ ಔದಾರ್ಯತೆಯನ್ನು ಮಾಲಕರು ತೋರುತ್ತಿಲ್ಲ.ದನಗಳ ಕಿವಿಗೆ ಅಳವಡಿಸಿರುವ ವಿಶೇಷ ಗುರುತಿನ ಟ್ಯಾಗ್ ಮೂಲಕ ಮಾಲಕರ ಪತ್ತೆ ಹಚ್ಚಿ ದನ ತೆಗೆದುಕೊಂಡು ಹೋಗುವಂತೆ ಖಡಕ್ ಎಚ್ಚರಿಕೆ ನೀಡಬೇಕು. ಯಾರೂ ತೆಗೆದುಕೊಂಡು ಹೋಗದಿದ್ದಲ್ಲಿ ಗೋಶಾಲೆಗೆ ಕಳುಹಿಸುವ ಕನಿಷ್ಠ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮಾಡದಿರುವುದರಿಂದ ಅವು ಇಂತಹ ದನಗಳ್ಳರ ಪಾಲಾಗುತ್ತಿವೆ.