ಇಲ್ಲಿನ ಉದ್ಯಾವರದ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ಕುಮಾರಭೃತ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಉಡುಪಿ: ಇಲ್ಲಿನ ಉದ್ಯಾವರದ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ಕುಮಾರಭೃತ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ಸ್ತನ್ಯಪಾನದ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.
ಈ ನಾಟಕದ ಮೂಲಕ ಮಗುವಿನ ಬೆಳವಣಿಗೆ, ವಿಕಾಸ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವಲ್ಲಿ ಸ್ತನ್ಯಪಾನದ ಮಹತ್ವವನ್ನು ವಿವರಿಸಿ, ಸೂಕ್ತ ಶಿಶು ಆಹಾರ ಪದ್ಧತಿಗಳನ್ನು ಅನುಸರಿಸಲು ಪ್ರೋತ್ಸಾಹಿಸಲಾಯಿತು. ಮೊದಲ ಆರು ತಿಂಗಳವರೆಗೆ ಕೇವಲ ತಾಯಿಯ ಹಾಲನ್ನೇ ನೀಡುವುದರ ಮಹತ್ವವನ್ನು ಸಾರಲಾಯಿತು, ಸ್ತನ್ಯಪಾನ ಮಾಡಿಸುವುದರಿಂದ ಬೆಳೆಯುವ ಮಗುವಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಲಭಿಸುವುದಲ್ಲದೆ, ಮೆದುಳಿನ ಬೆಳವಣಿಗೆಗೆ ಬೇಕಾಗುವ ಜೀವಸತ್ವಗಳೂ ದೊರೆಯುತ್ತವೆ, ಸ್ತನ್ಯಪಾನವು ತಾಯಂದಿರನ್ನು ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್ನಿಂದ ತಡೆಗಟ್ಟುವುದಲ್ಲದೆ, ತಾಯಿ ಹಾಗೂ ಮಗುವಿನ ಬಾಂಧವ್ಯವನ್ನು ವೃದ್ಧಿಸುತ್ತದೆ, ಸ್ತನ್ಯಪಾನ ಸಾಧ್ಯವಿರುವ ಸಂದರ್ಭಗಳಲ್ಲಿ ಫಾರ್ಮುಲಾ ಹಾಲನ್ನು ಅನಗತ್ಯವಾಗಿ ಬಳಸಬಾರದು ಎಂಬ ವಿಷಯವನ್ನು ಜನಸಾಮಾನ್ಯರಿಗೆ ಸಾರಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಕುಮಾರಭೃತ್ಯ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಪುರಾಣಿಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಡಾ. ಸಹನಾ ಶಂಕರಿ, ಸಹಾಯಕ ಪ್ರಾಧ್ಯಾಪಕಿಯರಾದ ಡಾ. ಚಿತ್ರಲೇಖಾ, ಡಾ. ಕಾವ್ಯ, ಡಾ. ಪ್ರಿಯಾಂಕಾ ವೈ. ಅವರು ಸಹಕರಿಸಿದರು. ಆಸ್ಪತ್ರೆಯ ವೈದ್ಯರು, ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು, ತಾಯಂದಿರು, ಗರ್ಭಿಣಿಯರು, ಆಸ್ಪತ್ರೆಯ ಆರೋಗ್ಯಾಕಾಂಕ್ಷಿಗಳು, ನರ್ಸ್, ಸಿಬ್ಬಂದಿಗಳು ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.