ಜಮೀರ್‌ ವಿರುದ್ಧ ಕಠಿಣ ಕ್ರಮ, ಮಂಪರು ಪರೀಕ್ಷೆಗೆ ಒತ್ತಾಯ

KannadaprabhaNewsNetwork |  
Published : Jun 03, 2026, 01:15 AM IST
2ಕೆಡಿವಿಜಿ1-ದಾವಣಗೆರೆಯಲ್ಲಿ ಮಂಗಳವಾರ ಕೆಪಿಸಿಸಿ ಮುಖಂಡ ಡಿ.ಬಸವರಾಜ, ಮಾಜಿ ಮೇಯರ್ ಕೆ.ಚಮನ್ ಸಾಬ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ವಿರುದ್ಧ ಕೆಲಸ ಮಾಡಿದ್ದ ಮಾಜಿ ಸಚಿವ ಬಿ.ಝೆಡ್. ಜಮೀರ್ ಅಹಮ್ಮದ್‌- ಮಹಮ್ಮದ್ ಸಿರಾಜ್ ಆಡಿಯೋ ವೈರಲ್ ಆಗಿದೆ. ಈಗ ಅದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ್ದೆಂದು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಯಾವುದೇ ಮುಲಾಜಿಗೂ ಒಳಗಾಗದೇ ಜಮೀರ್‌ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಎಐಸಿಸಿ ಮತ್ತು ಕೆಪಿಸಿಸಿ ವರಿಷ್ಠರಿಗೆ ಒತ್ತಾಯಿಸಿದ್ದಾರೆ.

- ದಾವಣಗೆರೆ ದಕ್ಷಿಣ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ, ಸೋಲಿಸಲು ಸಂಚು: ಡಿ.ಬಸವರಾಜ ಆರೋಪ

- ಆಡಿಯೋ ಸುಳ್ಳೆಂದು ಜಮೀರ್ ನಾವು ಹೇಳಿದಲ್ಲಿಗೆ ಬಂದು ಆಣೆ ಮಾಡಲಿ: ಮಾಜಿ ಮೇಯರ್‌ ಕೆ.ಚಮನ್ ಸಾಬ್‌ ಸವಾಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ವಿರುದ್ಧ ಕೆಲಸ ಮಾಡಿದ್ದ ಮಾಜಿ ಸಚಿವ ಬಿ.ಝೆಡ್. ಜಮೀರ್ ಅಹಮ್ಮದ್‌- ಮಹಮ್ಮದ್ ಸಿರಾಜ್ ಆಡಿಯೋ ವೈರಲ್ ಆಗಿದೆ. ಈಗ ಅದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ್ದೆಂದು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದು, ಯಾವುದೇ ಮುಲಾಜಿಗೂ ಒಳಗಾಗದೇ ಜಮೀರ್‌ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಎಐಸಿಸಿ ಮತ್ತು ಕೆಪಿಸಿಸಿ ವರಿಷ್ಠರಿಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಈ ವಿಚಾರದಲ್ಲಿ ಜಮೀರ್ ಒಪ್ಪದಿದ್ದರೆ ಆಡಿಯೋದಲ್ಲಿ ಇರುವಂತಹ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜಮೀರ್ ಅಹಮ್ಮದ್‌ಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವದಿಂದಲೇ ವಜಾ ಮಾಡಬೇಕು. ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ ಸಂಪುಟದಲ್ಲಿ ಸ್ಥಾನ ನೀಡಬಾರದು. ಆಡಿಯೋ ಎಐ ತಂತ್ರಜ್ಞಾನದ್ದೆಂದು ಹೇಳುತ್ತಿರುವ ಜಮೀರ್ ಅಹಮ್ಮದ್‌- ಮಹಮ್ಮದ್ ಸಿರಾಜ್‌ ಆಡಿಯೋ ಸುಳ್ಳಾಗಿದ್ದರೆ ನಾವು ಹೇಳಿದ ಸ್ಥಳಕ್ಕೆ ಬಂದು, ಆಣೆ ಪ್ರಮಾಣ ಮಾಡಲಿ. ಚಾಮರಾಜ ನಗರ ಕ್ಷೇತ್ರದ ಕಾರ್ಯಕರ್ತರು ದಾವಣಗೆರೆಗೆ ಬಂದು ಇಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಇಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ಜಮೀರ್‌ರ ಒನ್‌ ಪಾಯಿಂಟ್ ಅಜೆಂಡಾ ಎಂದು ಅವರು ಆರೋಪಿಸಿದರು.

ಮಡಿಕೇರಿಯಿಂದ ಬರಲು ಬಸ್ಸಿನ ಖರ್ಚಿಗೂ ದುಡ್ಡಿಲ್ಲವೆಂದು ಹೇಳಿಕೊಂಡ ಎಸ್‌ಡಿಪಿಐ ಅಭ್ಯರ್ಥಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸ್ಪರ್ಧಿಸಿ, ಮನೆ ಮನೆಗೆ ಹಣ ಹಂಚಿದ್ದಾರೆ. ಇಲ್ಲಿಗೆ ಬರಲು ಸಹ ಹಣ ಇಲ್ಲದ ವ್ಯಕ್ತಿಗೆ ಮನೆ ಮನೆಗೆ ₹2 ಸಾವಿರ ಹಂಚಿದ್ದು ಹೇಗೆ? ಈ ಕೋಟ್ಯಂತರ ರು. ಹಣದ ಮೂಲ ಯಾವುದು? ಎಸ್‌ಡಿಪಿಐ ಅಭ್ಯರ್ಥಿ ಹಣ ಹಂಚಿದ ಬಗ್ಗೆ ನಮ್ಮ ಕಾರ್ಯಕರ್ತರೇ ನಮಗೆ ಹೇಳಿದ್ದಾರೆ. ನಮಗೆ ಹೆತ್ತ ತಾಯಿಯೂ ಒಂದೇ, ಕಾಂಗ್ರೆಸ್ ಪಕ್ಷವೂ ಒಂದೇ. ಇಂತಹ ಪಕ್ಷಕ್ಕೆ ದ್ರೋಹ ಬಗೆದ ವ್ಯಕ್ತಿ ಯಾರು? ಇಂದು ಕಳ್ಳತನ ಮಾಡಿದ ಹಲವರು ವೈರಲ್ ಆದ ಆಡಿಯೋ ಎಐ ಸೃಷ್ಟಿ ಎನ್ನುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಅವರು ಹೇಳಿದರು.

ಎಐಸಿಸಿ, ಕೆಪಿಸಿಸಿ ನಾಯಕರಿಗೆ ಈಗಾಗಲೇ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇ-ಮೇಲ್ ಮೂಲಕ ಒತ್ತಾಯಿಸಿದ್ದೇವೆ. ಸ್ಪೀಡ್ ಪೋಸ್ಟ್ ಮೂಲಕವೂ ದೂರಿನ ಪ್ರತಿ ಸಲ್ಲಿಸಿದ್ದೇವೆ. ಕಾಂಗ್ರೆಸ್ ಪಕ್ಷ ಉಳಿಯಬೇಕೆಂದರೆ ಇಂತಹ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಆಗಬೇಕು. ಆಡಿಯೋ ಎಫ್ಎಸ್ಎಲ್‌ಗೆ ಕಳಿಸಿ, ತನಿಖೆ ಮಾಡಬೇಕು. ತಪ್ಪು ಮಾಡಿಲ್ಲವೆಂದರೆ ಮಂಪರು ಪರೀಕ್ಷೆಗೆ ಸ್ವಯಂಪ್ರೇರಿತರಾಗಿ ಜಮೀರ್ ಅಹಮ್ಮದ್ ಇತರರು ಚಾಲೆಂಜ್ ಮಾಡಿ, ಮುಂದೆ ಬರಲಿ. ಆಡಿಯೋ ಹರಿಯಬಿಟ್ಟಿದ್ದು ಯಾರೆಂಬುದು ನಂತರದ ಪ್ರಶ್ನೆ. ತಾಯಿ ಕತ್ತು ಸೀಳುವಂತಹ ಕೃತ್ಯ ನಡೆಸಿದವರ ವಿರುದ್ಧ ಮೊದಲು ಕ್ರಮ ಆಗಬೇಕು. ತಪ್ಪು ಮಾಡಿ, ನುಣುಚಿಕೊಳ್ಳಲು ಎಐ ಸೃಷ್ಟಿ ಎಂಬ ಕಥೆ ಕಟ್ಟುತ್ತಿದ್ದಾರೆ ಎಂದು ಡಿ.ಬಸವರಾಜ ಕಿಡಿಕಾರಿದರು.

ಮಾಜಿ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಇಲ್ಲಿ ಬಂದು ಚುನಾವಣೆ ಮಾಡಿದ್ದಾರೆ. ಮುಸ್ಲಿಂ ಜಾತಿವಾದಿ ಪಕ್ಷಗಳು ಮುಸ್ಲಿಂ ಗೆಲ್ಲಿಸುವ ಕೆಲಸ ಮಾಡುತ್ತಾರೋ, ಸೋಲಿಸುವ ಕೆಲಸವನ್ನು ಮಾಡುತ್ತಾರೋ? ಅಸಾದುದ್ದೀನ್ ಓವೈಸಿ ಮನೆ ಮೇಲೆ ಇಡಿ, ಐಟಿ ದಾಳಿ ಆಗಿದೆಯಾ? ಬಿಜೆಪಿ ಅಭ್ಯರ್ಥಿ ನಮ್ಮ ಕಾಲಿಗೆ ಬಿದ್ದ ಅಂತಾ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಾವು ಖರ್ಚು ಕೊಡುತ್ತೇವೆ, ಒಂದು ಜಾಗವನ್ನು ಹೇಳುತ್ತೇವೆ. ಅಲ್ಲಿಗೆ ಬಂದು ಪ್ರಮಾಣ ಮಾಡಲಿ. ಹಿಂದೂಗಳಿಗೆ ಧರ್ಮಸ್ಥಳ ಹೇಗೆ ಪವಿತ್ರ ಸ್ಥಳವೋ ನಮಗೂ ಪವಿತ್ರ ಸ್ಥಳ ಇದೆ. ಜಮೀರ್ ಅಹಮ್ಮದ್ ಸೇರಿ ಉಳಿದವರು ಬರುತ್ತಾರೆಂದರೆ ನಾವು ಹೇಳಿದ ಜಾಗಕ್ಕೆ ಬಂದು ಆಣೆ, ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕಾಂಗ ನಾಯಕ ಡಿ.ಕೆ.ಶಿವಕುಮಾರ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲರಿಗೆ ಇ-ಮೇಲ್, ಸ್ಪೀಡ್ ಪೋಸ್ಟ್ ಮೂಲಕ ಜಮೀರ್ ಅಹಮ್ಮದ್ ಇತರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇವೆ. ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದವರು ಯಾರೇ ಆಗಿದ್ದರೂ ಅಂತಹವರು ಕ್ಷಮೆಗೆ ಅರ್ಹರಲ್ಲ. ಆಡಿಯೋ ಸಂಭಾಷಣೆಯ ಸತ್ಯಾಸತ್ಯತೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದೇ ನಮ್ಮ ಒತ್ತಾಯ ಎಂದು ಕೆ.ಚಮನ್ ಸಾಬ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡರಾದ ಆರ್.ಎಚ್. ನಾಗಭೂಷಣ, ಎ.ಬಿ.ರಹೀಂ ಸಾಬ್‌, ಜಾಕೀರ್ ಅಲಿ, ಸುರೇಶ ಇತರರು ಇದ್ದರು.

- - -

(ಕೋಟ್ಸ್‌) ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿ, ಜವಾಬ್ದಾರಿಯುತ ಸಚಿವನಾಗಿ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ ಸೋಲಿಗೆ ಸಂಚು ರೂಪಿಸಿದ್ದು ಜಗಜ್ಜಾಹೀರಾಗಿದೆ. ಇದು ತಳಮಟ್ಟದಲ್ಲಿ ಹಗಲಿರುಳು ದುಡಿದ ಕಾರ್ಯಕರ್ತರಲ್ಲಿ ತೀವ್ರ ನಿರಾಸೆ, ಆಕ್ರೋಶ ತಂದಿದೆ. ವೈರಲ್ ಆಡಿಯೋದಲ್ಲಿ ಕಾಂಗ್ರೆಸ್ ಸಿದ್ಧಾಂತಕ್ಕೆ ದ್ರೋಹ ಬಗೆದು, ನಮ್ಮ ಅಧಿಕೃತ ಅಭ್ಯರ್ಥಿಯ ಕುಕ್ಕರ್‌ ಗುರುತಿನ ಪಕ್ಷೇತರ ಅಥವಾ ಇತರೆ ಸಂಘಟನೆಗಳಿಗೆ ಮತ ಚಲಾಯಿಸುವಂತೆ ಅಲ್ಪಸಂಖ್ಯಾತ ಸಮುದಾಯವನ್ನು ಜಮೀರ್ ಅಹಮ್ಮದ್ ಪ್ರಚೋದಿಸಿದ್ದಾರೆ.

- ಡಿ.ಬಸವರಾಜ, ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ.

- - - ಎಸ್‌ಡಿಪಿಐ ಪಕ್ಷವು ಮುಸ್ಲಿಂ ನಾಯಕತ್ವವನ್ನೇ ಕೊಲೆ ಮಾಡಿ, ಬಿಜೆಪಿಗೆ ಸಹಕಾರ ಮಾಡಿ ಕೊಡುತ್ತದೆ. ಈ ಹಿಂದೆಲ್ಲಾ ನಾವು ಹೆಚ್ಚು ಸೀಟುಗಳನ್ನು ಗೆಲ್ಲುತ್ತಿದ್ದೆವು. ಆದರೆ, ಎಸ್‌ಡಿಪಿಐ ರಾಜಕೀಯಕ್ಕೆ ಬಂದ ಮೇಲೆ ನಾವು ಕಡಿಮೆ ಸೀಟು ಗೆಲ್ಲುವಂತಾಗಿದೆ. ಕಾರಣ ಜಾತ್ಯತೀತ ಮುಸ್ಲಿಂ ನಾಯಕತ್ವದಲ್ಲಿದ್ದ ಮುಖಂಡರ ಬದಲಿಗೆ ಕೋಮುವಾದಿ ಮನೋಭಾವದ ಮುಖಂಡರನ್ನು ಕಣಕ್ಕಿಳಿಸಿ, ಸಮುದಾಯವನ್ನು ಗೊಂದಲಕ್ಕೊಳಗಾಗಿಸಿ, ಮುಸ್ಲಿಮರ ಓಟು ತಪ್ಪಿಸುವ ಮೂಲಕ, ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿ, ಬಿಜೆಪಿಗೆ ಸಹಕಾರ ಮಾಡಿಕೊಡುತ್ತಿದ್ದಾರೆ.

- ಕೆ.ಚಮನ್ ಸಾಬ್, ಮಾಜಿ ಮೇಯರ್, ದಾವಣಗೆರೆ.

- - -

-2ಕೆಡಿವಿಜಿ1: ದಾವಣಗೆರೆಯಲ್ಲಿ ಮಂಗಳವಾರ ಕೆಪಿಸಿಸಿ ಮುಖಂಡ ಡಿ.ಬಸವರಾಜ, ಮಾಜಿ ಮೇಯರ್ ಕೆ.ಚಮನ್ ಸಾಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಲ್ಕು ಹೋಬಳಿಯಲ್ಲಿ ಬಿತ್ತನೆ ಬೀಜ ವಿತರಣೆ
ಹೊನ್ನಾಳಿ ಶಾಸಕ ಶಾಂತನಗೌಡಗೆ ಸಂಪುಟ ಸಚಿವ ಸ್ಥಾನ ನೀಡಿ