ಯೂರಿಯಾ ಗೊಬ್ಬರ ಅನಧಿಕೃತ ಸಂಗ್ರಹಿಸಿದರೆ ಕಠಿಣ ಕ್ರಮ: ಡಿಸಿ

KannadaprabhaNewsNetwork |  
Published : Jul 11, 2025, 11:48 PM IST
11ಕೆಪಿಎಲ್21 ಜಿಲ್ಲಾಧಿಕಾರಿಗಳ ಕಛೇರಿಯ ವಿಡಿಯೋ ಕಾನ್ಪರೇನ್ಸ್ ಹಾಲನಲ್ಲಿ ಕೊಪ್ಪಳ ಜಿಲ್ಲೆಯ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಪ್ರಗತಿ ಪರಿಶೀಲನೆ ಸಭೆ | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ 16445 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದ್ದು ಈ ವರ್ಷ 19799 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ. ಇನ್ನೂ 9 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಸ್ಟಾಕ್ ಇದ್ದು ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ.

ಕೊಪ್ಪಳ:

ಜಿಲ್ಲೆಗೆ ಈಗಾಗಲೇ ಯೂರಿಯಾ ಗೊಬ್ಬರ ಕಳೆದ ಭಾರಿಗಿಂತ ಹೆಚ್ಚು ಸರಬರಾಜಾಗಿದೆ. ಜಿಲ್ಲೆಯಲ್ಲಿ ಯಾರಾದರೂ ಅನಧಿಕೃತವಾಗಿ ಶೇಖರಿಸಿದ್ದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಜತೆಗೆ ಅಂಗಡಿ ಲೈಸನ್ಸ್‌ ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಪ್ರಗತಿ ಪರಿಶೀಲನೆ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಎಸ್‌ಬಿಐ ಲೀಡ್‌ ಬ್ಯಾಂಕ್ ಮ್ಯಾನೇಜರ್, ತಹಸೀಲ್ದಾರ್‌ರು, ಸಹಾಯಕ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಅಧಿಕಾರಿಗಳು, ಇನ್ಸೂರೆನ್ಸ್ ಕಂಪನಿ ಪ್ರತಿನಿಧಿಗಳು, ಗ್ರಾಮ ಒನ್ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ ಪ್ರತಿನಿಧಿಗಳೊಂದಿಗೆ ಗೂಗಲ್ ಮೀಟ್ ಮುಖಾಂತರ ವೀಡಿಯೋ ಸಂವಾದ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೃಷಿ ಅಧಿಕಾರಿಗಳು ಹಾಗೂ ವಿಜಿಲೆನ್ಸ್ ಟೀಂ ಹೆಚ್ಚು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಕಳೆದ ವರ್ಷ 86 ಸಾವಿರ ರೈತರು ಮಾಡಿಸಿದ್ದು, ಈ ಸಲ ಮಳೆ ಕಡಿಮೆ ಆಗಿರುವುದರಿಂದ ಹೆಚ್ಚಿನ ರೈತರು ವಿಮೆ ಮಾಡಿಸಲು ಮಾಹಿತಿ ನೀಡಬೇಕು. ಬೆಳೆ ಸಮೀಕ್ಷೆ ಕಾರ್ಯವನ್ನು ಆದಷ್ಟು ಬೇಗನೆ ಜಿಲ್ಲೆಯಲ್ಲಿ ಮಾಡಿಮುಗಿಸಬೇಕೆಂದು ಹೇಳಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ. ಮಾತನಾಡಿ, ಕಳೆದ ವರ್ಷ 16445 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದ್ದು ಈ ವರ್ಷ 19799 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ. ಇನ್ನೂ 9 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಸ್ಟಾಕ್ ಇದ್ದು ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ. ಕಳ್ಳ ಸಂತೆಯಲ್ಲಿ ಅನಧಿಕೃತ ರಸಗೊಬ್ಬರ ಮಾರಾಟ ಮತ್ತು ದಾಸ್ತಾನು ಕಂಡು ಬಂದಲ್ಲಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳಾದ ಸುನಿಲ್ ಕುಮಾರ್ (8277932117) ಹಾಗೂ ನಾಗರಾಜ (8277932109) ಅವರಿಗೆ ಕರೆ ಮಾಡಿ ದೂರು ನೀಡಬಹುದು ಎಂದರು.

ಸಂವಾದದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆ ಉಪನಿರ್ದೇಶಕ ಎಲ್. ಸಿದ್ದೇಶ್ವರ. ತಹಸೀಲ್ದಾರ್‌ ವಿಶ್ವನಾಥ ಮುರಡಿ ಸೇರಿದಂತೆ ಜಿಲ್ಲೆಯ ತಹಸೀಲ್ದಾರ್‌ರು, ಸಹಾಯಕ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

PREV