ಕಾರವಾರ: ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಅಕ್ಷರ ದಾಸೋಹದ ಆಹಾರ ಪದಾರ್ಥಗಳ ಸರಬರಾಜು ಮತ್ತು ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದ ಕುರಿತಂತೆ ಯಾವುದೇ ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಎಚ್ಚರಿಕೆ ನೀಡಿದರು.
ಆನಂತರ ವಿದ್ಯಾರ್ಥಿಗಳೊಂದಿಗೆ ನೆಲದಲ್ಲೇ ಕುಳಿತು ಭೋಜನ ಸೇವಿಸುವ ಮೂಲಕ ಅಕ್ಷರ ದಾಸೋಹದಲ್ಲಿ ವಿತರಿಸುವ ಆಹಾರದ ಗುಣಮಟ್ಟವನ್ನು ಜಿಲ್ಲಾಧಿಕಾರಿ ಖುದ್ದು ಪರೀಕ್ಷಿಸಿದರು.
ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಉತ್ತಮ ಗುಣಮಟ್ಟ ಮತ್ತು ರುಚಿಯಿಂದ ಕೂಡಿರುವ ಆಹಾರವನ್ನು ನೀಡಬೇಕು. ಆಹಾರ ತಯಾರಿಕೆಗೆ ಸರಬರಾಜು ಆಗುವ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಬಳಸುವಂತೆ ಹಾಗೂ ಆಹಾರ ತಯಾರಿಕಾ ಕೊಠಡಿಯಲ್ಲಿ ಮತ್ತು ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳಲ್ಲಿ ಗರಿಷ್ಠ ಶುಚಿತ್ವವನ್ನು ಕಾಪಾಡಬೇಕು, ಇವುಗಳ ಕುರಿತಂತೆ ಯಾವುದೇ ದೂರುಗಳು ಕೇಳಿ ಬಂದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಕಾರವಾರ ಡಿಡಿಪಿಐ ಲತಾ ನಾಯ್ಕ್ ಇದ್ದರು.