ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಲೋಕಸಭೆ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಚುನಾವಣಾಧಿಕಾರಿ ಜಿಪಂ ಸಿಇಒ ರಾಹುಲ ಶಿಂಧೆ ಹೇಳಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಚಿಕ್ಕೊಡಿ ಲೋಕಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಚಿಕ್ಕೊಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,41,758 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆಯನ್ನು ಜರುಗಿಸಲು ಆಯೋಗವು ನಿರ್ಧರಿಸಿದ್ದು, 01-ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ. ಚಿಕ್ಕೊಡಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏ.12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಏ.19 ಕೊನೆಯ ದಿನವಾಗಿದ್ದು, ಏ.20ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏ.22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದರು.ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ 17,41,758 ಮತದಾರರ ಪೈಕಿ 8,75,953 ಪುರುಷ ಮತದಾರರು, 8,65,731 ಮಹಿಳಾ ಮತದಾರರು, 74 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿರುತ್ತಾರೆ. ಮಾ.16ರವರೆಗಿನ ಅಂಕಿ ಅಂಶಗಳ ಪ್ರಕಾರ 50,589 ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆಯ ಸಮರ್ಪಕ ಅನುಷ್ಠಾನಕ್ಕಾಗಿ ಚಿಕ್ಕೊಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 148 ಸೆಕ್ಟರ್ ಆಫಿಸರ್, 27 ಫ್ಲೈಯಿಂಗ್ ಸ್ಕ್ವಾಡ್, 21 ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು ಹಾಗೂ 8 ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಮಾ.16 ರಿಂದ ಜೂ.06 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.ಚಿಕ್ಕೊಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 32 ಚೆಕ್ಪೋಸ್ಟ್ಗಳನ್ನು ರಚಿಸಲಾಗಿದ್ದು, ಈ ಪೈಕಿ 18 ರಾಜ್ಯದ ಗಡಿ ಭಾಗದಲ್ಲಿ, ಜಿಲ್ಲೆಯ ಗಡಿಯಲ್ಲಿ 2 ಹಾಗೂ 12 ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.
ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರಿಗೆ ಮತ್ತು 85 ವರ್ಷ ಮೇಲ್ಪಟ್ಟ ವಯೋಮಾನ ಮತದಾರರು ಮತಚಲಾಯಿಸಲು ಅನುಕೂಲವಾಗುವಂತೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದೆ.ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೊಗದಿಂದ C-vigil App ಅನ್ನು ಪರಿಚಯಿಸಿದ್ದು, ಸಾರ್ವಜನಿಕರು ಅನಾಮಧೇಯವಾಗಿ ಅಥವಾ ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಬಹುದು.
ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಸ್ಪರ್ಧಿಸುವ ಅಭ್ಯರ್ಥಿಗಳು ರಾಜಕೀಯ ಸಭೆ, ಸಮಾರಂಭಗಳು, ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಂದ ಮತ್ತು ಚುನಾವಣಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಪ್ರಚಾರ ಕಾರ್ಯಕ್ರಮಗಳಿಗೆ ಉಪಯೋಗಿಸುವ ವಾಹನಗಳಿಗೆ, ಪಕ್ಷದ ಕಛೇರಿ ತೆರೆಯಲು ಸೇರಿದಂತೆ ಎಲ್ಲಾ ಪರವಾನಗಿಗಳಿಗೆ 48 ಗಂಟೆ ಮುಂಚಿತವಾಗಿ SUVIDHA App ಮೂಲಕ ಅಥವಾ ಲಿಖಿತ ರೂಪದಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅನುಮತಿಗಳಿಗಾಗಿ Single Window System (ಏಕ ಗವಾಕ್ಷಿ) ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳು ಇದರ ಸದುಪಯೋಗ ಉಪಯೋಗ ಪಡೆದುಕೊಳ್ಳಬಹುದು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.ಚುನಾವಣಾ ಸಹಾಯವಾಣಿ ಕೇಂದ್ರಗಳು:
ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿ 08338-272132, 272130, ನಿಪ್ಪಾಣಿ_08348-220030, ಚಿಕ್ಕೊಡಿ ಸದಲಗಾ- 08338-272130, ಅಥಣಿ- 08289-468501, ಕಾಗವಾಡ- 08339-264555, ಕುಡಚಿ-9845986105, ರಾಯಬಾಗ- 8867519106, ಹುಕ್ಕೇರಿ- 08333-265036, ಯಮಕನಮರಡಿ-08333-200308, ಹಾಗೂ ಚುನಾವಣಾ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದಾಗಿದೆ.ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾಣೆಗಳನ್ನು ಜರುಗಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ತಿಳಿಸಿದರು.
ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಡಿ.ಎಸ್.ಪಿ ಗೌಡರ, ಚಿಕ್ಕೊಡಿ ತಹಸೀಲ್ದಾರ್ ಸಿ.ಎಸ್.ಕುಲಕರ್ಣಿ ಉಪಸ್ಥಿತರಿದ್ದರು.ವಾಹನಗಳ ಕಟ್ಟುನಿಟ್ಟಿನ ತಪಾಷಣೆ
ಮುಂಬರುವ ಮೇ.7 ರಂದು ನಡೆಯುವ ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಲೋಕಸಭೆ ಕ್ಷೇತ್ರದಲ್ಲಿ 32 ಚೆಕ್ ಪೋಸ್ಟ್ಗಳನ್ನು ಆರಂಭಿಸಿದೆ. ಚುನಾವಣೆ ಮುಗಿಯುವವರಿಗೂ ನಿರಂತರ 24 ಗಂಟೆಗಳ ಕಾಲ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುವ ಕಾರ್ಯ ಭರದಿಂದ ನಡೆದಿದೆ.ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಚುನಾವಣೆ ಆಯೋಗ ಲೋಕಸಭೆ ಕ್ಷೇತ್ರದ ಆಯಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗಡಿ ಚೆಕ್ ಪೋಸ್ಟಗಳನ್ನು ಸ್ಥಾಪನೆ ಮಾಡಿದೆ. ಚೆಕ್ ಪೋಸ್ಟ್ ಪ್ರವೇಶ ಮಾಡಿ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡುವ ಕಾರ್ಯ ಆರಂಭಿಸಿದೆ. ಪ್ರತಿ ಚೆಕ್ ಪೋಸ್ಟ್ಗಳಲ್ಲಿ 3 ಜನ ಎಸ್ಎಸ್ಟಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ಆಯೋಗ ನಿಯೋಜಿಸಿದೆ. ನಿಪ್ಪಾಣಿ ವಿಧಾನಸಭೆ ಮತಕ್ಷೇತ್ರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೊಗನ್ನೊಳ್ಳಿ ಚೆಕ್ಪೋಪೋಸ್ಟ್, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ನಿಪ್ಪಾಣಿ-ಮುರಗೋಡ ರಸ್ತೆ, ಅಪ್ಪಾಚಿವಾಡಿ ಕ್ರಾಸ್, ಮಾಂಗೂರ ಕ್ರಾಸ್ ಹತ್ತಿರ ಚೆಕ್ ಪೋಸ್ಟ್ ಆರಂಭಿಸಿದೆ. ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದಲ್ಲಿ ಚಿಕ್ಕೋಡಿ-ಹಾಲಟ್ಟಿಯ ಬಳಿ ಸಂಕೇಶ್ವರ ರಸ್ತೆ, ಕರ್ನಾಟಕ-ಮಹಾರಾಷ್ಟ್ರದ ಗಡಿ ಭಾಗದವಾದ ಯಕ್ಸಂಬಾ ಬಳಿ, ಸದಲಗಾ-ದತ್ತವಾಡ, ಚಿಕ್ಕೋಡಿಯ ಚೆನ್ಯಾನದಡ್ಡಿ, ಅಥಣಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಲೋಕಸಭೆ ಕ್ಷೇತ್ರದ ಕೊನೆ ಹಳ್ಳಿಯಾದ ತೇಲಸಂಗ ಬಳಿ, ಕೊಟ್ಟಲಗಿ-ಗುಡ್ಡಾಪೂರ, ಕೋಹಳ್ಳಿ ಚೆಕ್ಪೋಸ್ಟ್ ಆರಂಭಿಸಿದೆ. ಕಾಗವಾಡ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಹಾರಾಷ್ಟ್ರದ ಮಿರಜ ಸಂಪರ್ಕ ಕಲ್ಪಿಸುವ ಕಾಗವಾಡ-ಮಿರಜ ರಸ್ತೆ, ಗಡಿಯ ಕಾಗವಾಡ-ಗಣೇಶವಾಡಿ ಬಳಿ, ಮಂಗಸೂಲಿ-ಅರಗ, ಕೆಂಪವಾಡ-ಸಿದ್ದೇವಾಡಿ, ಮದಭಾವಿ-ಕಾಟವಾ ಮಹಾರಾಷ್ಟ್ರದ ಗಡಿ ಹತ್ತಿರ, ಮಹಾರಾಷ್ಟ್ರದ ಗಡಿಯ ಬಳ್ಳಿಗೇರಿ-ಜತ್ ರೋಡ ಚೆಕ್ ಪೋಸ್ಟ್ ಆರಂಭಿಸಿದೆ. ಕುಡಚಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಚಿ ಮತ್ತು ಹಾರೂಗೇರಿ ಬಳಿ ಚೆಕ್ಪೋಸ್ಟ್ ಆರಂಭಿಸಿದೆ. ರಾಯಬಾಗ ವಿಧಾನಸಭೆ ಕ್ಷೇತ್ರದಲ್ಲಿ ಕಂಕಣವಾಡಿ ಮತ್ತು ಕಬ್ಬೂರ ಬಳಿ ಚೆಕ್ಪೋಸ್ಟ್ ಆರಂಭಿಸಿದೆ. ಹುಕ್ಕೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಹಿಟ್ನಿ ಕ್ರಾಸ್, ಗಡಿಯ ಬುಗಡೆ ಆಲೂರ, ಬೈರಾಪೂರ, ಸಂಕೇಶ್ವರ ಬಳಿ ನಾಗನೂರ ಬಳಿ ಚೆಕ್ಪೋಸ್ಟ್ ಆರಂಭಿಸಿದೆ. ಇನ್ನೂ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ದಡ್ಡಿ ಕ್ರಾಸ್, ಕುರಣಿ ಕ್ರಾಸ್ ಮತ್ತು ಯಮಕನಮರಡಿ ಬಳಿ ಚುನಾವಣೆ ಆಯೋಗ ಚೆಕ್ ಪೋಸ್ಟ್ ಆರಂಭಿಸಿದೆ.