ಬಾಲಕಾರ್ಮಿಕ ನಿರ್ಮೂಲನೆಗೆ ಕಠಿಣ ನಿಯಮ ಅಗತ್ಯ: ವೈದ್ಯಾಧಿಕಾರಿ ಡಾ.ಸ್ವಾಮಿ ಗೌಡ

KannadaprabhaNewsNetwork |  
Published : Jun 14, 2024, 01:05 AM IST
13ಎಚ್ಎಸ್ಎನ್7 : ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. | Kannada Prabha

ಸಾರಾಂಶ

ಬಾಲಕಾರ್ಮಿಕ ಮಕ್ಕಳು ಕಂಡು ಬರುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಇನ್ನೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವಾಮಿ ಗೌಡ ಹೇಳಿದರು. ಅರಕಲಗೂಡಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲಕಾರ್ಮಿಕ ವಿರೋಧಿ ದಿನ । ಸಾರ್ವನಿಕ ಆಸ್ಪತ್ರೆಯಲ್ಲಿ ಪದ್ಧತಿ ವಿರುದ್ಧದ ಪ್ರತಿಜ್ಞಾ ವಿಧಿ

ಕನ್ನಡಪ್ರಭ ವಾರ್ತೆ ಅರಕಲಗೂಡು

ದೇಶಾದ್ಯಂತ ಹಾಗೂ ರಾಜ್ಯದ ಕೆಲವು ಕೈಗಾರಿಕಾ ವಲಯಗಳ ಜಿಲ್ಲೆಗಳಲ್ಲಿ ಬಾಲಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು ಸರ್ಕಾರ ಬಾಲಕಾರ್ಮಿಕರ ಸಲುವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಬಾಲಕಾರ್ಮಿಕ ಮಕ್ಕಳು ಕಂಡು ಬರುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಇನ್ನೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸ್ವಾಮಿ ಗೌಡ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸಕಲ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಪ್ರತಿಜ್ಞಾವಿಧಿ ಕೈಗೊಳ್ಳಲಾಯಿತು.ನೀ ವೇಳೆ ಅವರು ಮಾತನಾಡಿದರು.

ಆಸ್ಪತ್ರೆಯ ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಪರಶುರಾಮ ಶಿರೂರ ಮಾತನಾಡಿ, ‘ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು 2002 ರಿಂದ ಆಚರಣೆ ಮಾಡುವುದರ ಮೂಲಕ ಪಾಲಕರಿಗೆ ಹಾಗೂ ವಿವಿಧ ರೀತಿಯ ಕಾರ್ಖಾನೆಗಳಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವ ಮಾಲೀಕರಿಗೂ ಕಠಿಣ ಕ್ರಮಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ಬಾಲಕರನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳಬಾರದು’ ಎಂದು ಹೇಳಿದರು.

‘ಪ್ರತಿಯೊಬ್ಬ ಮಕ್ಕಳಿಗೂ 18 ವರ್ಷ ಆಗುವವರೆಗೂ ಉಚಿತ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ಇರುತ್ತದೆ. ಆದ್ದರಿಂದ ಕಡು ಬಡತನದಲ್ಲಿ ಹುಟ್ಟಿದ ಮಕ್ಕಳಾದರೂ ಕೂಡ ಅವರಿಗೆ ಉಚಿತ ಶಿಕ್ಷಣ ಪುಸ್ತಕ ಬಟ್ಟೆ ಹಾಗೂ ವಸತಿನಿಲಯಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿ ಕೊಟ್ಟಿರುವುದರಿಂದ ಪ್ರತಿಯೊಬ್ಬರಿಗೂ ಕಡ್ಡಾಯ ಶಿಕ್ಷಣ ಪಡೆಯುವಂತಹ ಹಕ್ಕು ಇರುತ್ತದೆ. ಹಾಗಾಗಿ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಳ್ಳುವಂತಹ ಸಣ್ಣಪುಟ್ಟ ಕಾರ್ಖಾನೆ, ಗುಡಿ ಕೈಗಾರಿಕೆಗಳು, ವಿವಿಧ ರೀತಿಯ ಮನೆ ಕೆಲಸಗಳನ್ನು ಬೇಕರಿ ಹಾಗೂ ದಿನಸಿ ಅಂಗಡಿಗಳಲ್ಲಿ ಚಿಕ್ಕ ಮಕ್ಕಳನ್ನ ಬಳಸಿಕೊಂಡು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವಂತಹ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ದಂಡವನ್ನು ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಈ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡರೆ ಬಾಲಕಾರ್ಮಿಕರ ಸಂಖ್ಯೆ ಕಡಿಮೆಯಾಗುತ್ತದೆ. ಸಮಾಜದಲ್ಲಿ ಸಾಕಷ್ಟು ಅಹಿತಕರ ಘಟನೆಗಳು, ಕಳ್ಳತನ, ಕೊಲೆ, ಸುಲಿಗೆ, ಮೋಸ, ವಂಚನೆ ರೀತಿ ಹಲವಾರು ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಅದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಇಂದು ನಾವೆಲ್ಲರೂ ಪ್ರತಿಜ್ಞೆ ಮಾಡುವ ಮೂಲಕ ಬದ್ಧರಾಗಿರುತ್ತೇವೆ. ನಮ್ಮ ಸುತ್ತಮುತ್ತ ಬಾಲಕಾರ್ಮಿಕರು ಕಂಡು ಬಂದರೆ ಪೋಷಕರು ಹಾಗೂ ಮಾಲೀಕರಿಗೆ ತಿಳಿಸಿ ಹೇಳುವುದರ ಮೂಲಕ ಚಿಕ್ಕ ಮಕ್ಕಳನ್ನು ಕಾರ್ಮಿಕರನ್ನಾಗಿ ಬಳಸಿಕೊಳ್ಳಬಾರದು ಎಂದು ಪ್ರತಿಜ್ಞೆಯನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿಯಾಗಿ ಶ್ರೀಕಂಠ, ಲೋಕೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪರಮೇಶ್, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞ ಯೋಗಾಚಾರಿ, ಹಿರಿಯ ಶುಶ್ರೂಷಕ ಅಧಿಕಾರಿ ಚಂದ್ರಮತಿ ಆಶಾ, ಮೆಂಟರ್ ಕವಿತಾ, ಶುಶ್ರೂಷಕ ಅಧಿಕಾರಿ ಪಲ್ಲವಿ, ರಾಘವೇಂದ್ರ, ಉಮೇಶ್, ಪ್ರಕಾಶ, ಪೂಜಾ, ಅರ್ಪಿತಾ, ಹೇಮಾ, ಲೋಕೇಶ್, ಸಂತೋಷ್, ದರ್ಶನ್‌ ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!