- ಜಿಎಂವಿವಿಯಲ್ಲಿ ಜನ್ಮದಿನಾಚರಣೆ ಸಂಭ್ರಮದಲ್ಲಿ ಮಾಜಿ ಸಚಿವ ಡಾ.ಸಿದ್ದೇಶ್ವರ ಸಲಹೆ
ದಾವಣಗೆರೆ: ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ 74ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಭೆಯಲ್ಲಿ ಡಾ. ಜಿ.ಎಂ. ಸಿದ್ದೇಶ್ವರ ಮಾತನಾಡಿ, ಎಲ್ಲರ ಪ್ರೀತಿ, ಹಾರೈಕೆಗಳಿಗೆ ಕೃತಜ್ಞತೆ ಸಲ್ಲಿಸುತ್ತಾ, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿ.ಎಂ. ವಿಶ್ವವಿದ್ಯಾಲಯವು ಪ್ರಥಮ ಸ್ಥಾನದಲ್ಲಿದ್ದು, ಗುಣಮಟ್ಟದ ಶಿಕ್ಷಣ ಮತ್ತು ಕ್ಯಾಂಪಸ್ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಕಲ್ಲಿನಂತಿದ್ದು, ಶಿಕ್ಷಕರು ಅವರನ್ನು ಶಿಲ್ಪಿಯಂತೆ ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಬೇಕು. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ, ಸಂಸ್ಥೆಯನ್ನು ತಮ್ಮದೇ ಎಂಬ ಭಾವನೆಯಿಂದ ಬೆಳೆಸಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಜ್ಞಾನ ನೀಡಿ, ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಪ್ರಾಧ್ಯಾಪಕರ ಹೊಣೆ. ಆ ಮೂಲಕ ರಾಜ್ಯದಲ್ಲೇ ಜಿಎಂ ವಿವಿ ಹೆಸರುವಾಸಿ ಆಗುವಂತೆ ಮಾಡುವಂತೆ ಪ್ರಾಧ್ಯಾಪಕರಿಗೆ ಹೇಳಿದರು.
ಜಿಎಂ ವಿವಿ ಸಹ ಕುಲಪತಿ ಡಾ. ಎಂ.ವೇಣುಗೋಪಾಲ ರಾವ್ ಉಪಸ್ಥಿತರಿದ್ದು, ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ತಿಳಿಸಿದರು. ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್. ಅವರು ಸ್ವಾಗತಿಸುತ್ತಾ, ಜಿ.ಎಂ. ಸಿದ್ದೇಶ್ವರ ಅವರ ವಿಶೇಷ ಸಾಧನೆಯ ಮೆಲುಕು ಹಾಕಿದರು.
ಕೆ.ವೈಷ್ಣವಿ, ಯು.ವಿನುತಾ ಪ್ರಾರ್ಥಿಸಿದರೆ, ಪ್ರಾಧ್ಯಾಪಕಿ ವೈ.ಎಂ.ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಡಾ.ಶ್ವೇತಾ ಮರಿಗೌಡರ್ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಜನ್ಮದಿನದ ಪ್ರಯುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಹಣ್ಣು ಮತ್ತು ಪರಿಸರ ಸ್ನೇಹಿ ಸಸಿಗಳ ನೆಟ್ಟು ಪ್ರಕೃತಿ ಪ್ರೇಮ ಮೆರೆದರು.
-10ಕೆಡಿವಿಜಿ43: ದಾವಣಗೆರೆಯ ಜಿಎಂ ವಿವಿಯಲ್ಲಿ ಮಾಜಿ ಕೇಂದ್ರ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಜನ್ಮದಿನಾಚರಣೆಯ ಅಂಗವಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.