-ಘಟಕದಲ್ಲಿ ಅತ್ಯಂತ ಹಳೆಯ ಮಿಷನರಿಯಿಂದ ಕ್ಲಾರಿಫ್ಲೆಕ್ಟರ್ ಯಂತ್ರ ಸಂಪೂರ್ಣ ಹಾಳು

-45 ಕಾರ್ಮಿಕರಿಂದ ಕೆಲ ದಿನಗಳಿಂದ ಹಗಲಿರುಳು ಮಳೆಯೆನ್ನದೇ ಕೆಲಸ ನಡೆಯುತ್ತಿದೆ

- ಈ ಕಾಮಗಾರಿ ಪೂರ್ಣವಾಗಲು ಇನ್ನೂ ಆರು ದಿನಗಳು ಬೇಕಾಗುತ್ತದೆ

- ಸದ್ಯ ವ್ಯತ್ಯಯವಾಗಿರುವ ಭಾಗಗಳಿಗೆ 12 ಟ್ಯಾಂಕರ್ ಮೂಲಕ ನೀರು ಸರಬರಾಜು

- ಇಂದಿನಿಂದ ಇನ್ನೂ ಹೆಚ್ಚುವರಿ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ ಮಾಡಲಾಗುವುದುಕನ್ನಡಪ್ರಭ ವಾರ್ತೆ ಶಿವಮೊಗ್ಗ


ನಗರದಲ್ಲಿ ಇನ್ನೂ ಆರು ದಿನ ಶೇ. 30 ಭಾಗದ ಜನರಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದರು.

ಶುಕ್ರವಾರ ನಗರದ ಮಂಡ್ಲಿಯಲ್ಲಿರುವ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಮತ್ತು ಸರಬರಾಜು ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕ್ಲಾರಿಫ್ಲೆಕ್ಟರ್ ಯಂತ್ರದ ದುರಸ್ತಿ ಕಾರ್ಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಲದಲ್ಲಿ ನಮಗೆ ಯಥೇಚ್ಛವಾಗಿ ನೀರು ಸಿಗುತ್ತಿದೆಯಾದರೂ ಇಲ್ಲಿನ ಶುದ್ಧೀಕರಣ ಘಟಕದಲ್ಲಿ ಅತ್ಯಂತ ಹಳೆಯ ಮಿಷನರಿ ವ್ಯವಸ್ಥೆ ಇರುವ ಕಾರಣ ಶುದ್ಧ ನೀರು ಸರಬರಾಜು ಮಾಡುವ ಕ್ಲಾರಿಫ್ಲೆಕ್ಟರ್ ಯಂತ್ರವು ಸಂಪೂರ್ಣ ಹಾಳಾಗಿದೆ. ನೀರು ಎಲ್ಲವೂ ಕಾಂಕ್ರಿಟ್ ಒಡೆದಿರುವುದರಿಂದ ಭೂಮಿಯ ಅಡಿಗೆ ಸೇರುತ್ತಿತ್ತು. ಪೈಪ್‌ಗಳು ತುಕ್ಕು ಹಿಡಿದಿದ್ದವು. ಅದನ್ನು ಸರಿಪಡಿಸಲು ಹೋದಾಗ ದುರಸ್ತಿ ಮಾಡಲೇಬೇಕಾದ ಅನಿವಾರ್ಯತೆ ಇದ್ದ ಕಾರಣ ಮುಂದೆ ಯಾವುದೇ ಸಮಸ್ಯೆ ಆಗಬಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ತುರ್ತಾಗಿ ಜಲಮಂಡಳಿ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

45 ಕಾರ್ಮಿಕರು ಕಳೆದ ಕೆಲವು ದಿನಗಳಿಂದ ಹಗಲಿರುಳು ಮಳೆಯನ್ನೂ ಲೆಕ್ಕಸಿದೇ ಶ್ರಮಿಸುತ್ತಿದ್ದಾರೆ. ಈ ಕಾಮಗಾರಿ ಪೂರ್ಣವಾಗಲು ಇನ್ನೂ 6 ದಿನ ಬೇಕಾಗುತ್ತದೆ. ಹಾಗಾಗಿ ನೀರು ವ್ಯತ್ಯಯವಾಗುವ ಭಾಗಗಳಿಗೆ ಈಗಾಗಲೇ ಪಾಲಿಕೆಯ ವತಿಯಿಂದ 12 ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇಂದಿನಿಂದ ಇನ್ನೂ ಹೆಚ್ಚುವರಿ ಟ್ಯಾಂಕರ್ ಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಸಾರ್ವಜನಿಕರು ಈ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸಬೇಕು ಎಂದು ವಿನಂತಿಸಿದರು.

24X7 ನೀರು ವಿತರಣೆ ಕಾಮಗಾರಿ ಕೂಡ ನಡೆಯುತ್ತಿದ್ದು, ಅದಕ್ಕೆ ಬೇಕಾದ ಪೂರಕ ಕೆಲಸ ನಡೆಯುತ್ತಿದೆ. ನಗರಾಭಿವೃದ್ಧಿ ಸಚಿವರು ಬಂದಾಗ ನಗರ ಬೆಳೆದು ಜನಸಂಖ್ಯೆ ಹೆಚ್ಚಳವಾಗಿರುವುದರಿಂದ ಇನ್ನೊಂದು ಶುದ್ಧೀಕರಣ ಕೇಂದ್ರಕ್ಕೆ ಮನವಿ ನೀಡಿದ್ದೆವು. ಸುಮಾರು 450 ಕೋಟಿ ರು. ವೆಚ್ಚದ ಈ ಯೋಜನೆಗೆ ಎಲ್ಲಾ ಸಿದ್ಧತೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಾಗವನ್ನೂ ಗುರುತಿಸಿ ಸರ್ಕಾರ ಹಂತ ಹಂತವಾಗಿ ಹಣ ಬಿಡುಗಡೆ ಮಾಡಬೇಕು. ಈ ನಿಟ್ಟಿನಲ್ಲಿ ನೂತನ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.

ಈಗಿನ ಶುದ್ಧೀಕರಣ ಘಟಕ 30 ವರ್ಷ ಹಳೆಯದಾಗಿದ್ದು, ಅದರ ಅವಧಿ ಮುಗಿಯುತ್ತಾ ಬಂದಿದೆ. ತುರ್ತಾಗಿ ನಗರಕ್ಕೆ ಇನ್ನೊಂದು ಅತ್ಯಾಧುನಿಕ ಶುದ್ಧೀಕರಣ ಘಟಕ ಬೇಕಾಗಿದೆ. ಹಿಂದೆ ಗಾಜನೂರಿನಿಂದ ನೇರವಾಗಿ ಈ ಘಟಕಕ್ಕೆ ನೀರು ಸರಬರಾಜು ಮಾಡಲು ಅನೇಕು ಹೋರಾಟ ಮಾಡಿದ್ದೆವು. ಈಗಿರುವ ಘಟಕ ಹಳೆಯದಾಗಿದೆ. ಆದಷ್ಟು ಬೇಗ ಈ ದುರಸ್ತಿ ಕಾರ್ಯ ಮುಗಿದು ಒಂದು ವಾರದೊಳಗೆ ನೀರು ಸರಬರಾಜು ಮಾಡುತ್ತೇವೆ ಎಂದರು.

ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಜೀವನ್ ಮಾತನಾಡಿ, ಪ್ರತಿನಿತ್ಯ ನಗರಕ್ಕೆ ಗಾಜನೂರಿನಿಂದ 84 ಎಂಎಲ್‌ಡಿ ನೀರು ಸರಬರಾಜಾಗುತ್ತದೆ. ಈಗ 22 ಎಂಎಲ್‌ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಡ್ಯಾಮೇಜ್ ಆಗಿದೆ. ಸಮರೋಪಾದಿಯಲ್ಲಿ ಅದನ್ನು ದುರಸ್ತಿ ಮಾಡಲಾಗುತ್ತಿದೆ. ನೀರಿನ ಅಗತ್ಯವಿರುವ ಸಾರ್ವಜನಿಕರು ಸಂಪರ್ಕಿಸುವಂತೆ ಅವರು ಕೋರಿದರು.

ಈ ಸಂದರ್ಭದಲ್ಲಿ ಜಲಮಂಡಳಿಯ ಎಂಜಿನಿಯರ್‌ ಟಿ. ರಾಘವೇಂದ್ರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಇದ್ದರು.

-----------

ಪೋಟೋ: 10ಎಸ್‌ಎಂಜಿಕೆಪಿ01

ಶಿವಮೊಗ್ಗದ ನಗರದ ಮಂಡ್ಲಿಯಲ್ಲಿರುವ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಮತ್ತು ಸರಬರಾಜು ಕೇಂದ್ರಕ್ಕೆ ಗುರುವಾರ ಶಾಸಕ ಎಸ್‌.ಎನ್‌. ಚನ್ನಬಸಪ್ಪ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.