ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಔಷಧಿ ವ್ಯಾಪಾರ ಸಂಘದ ಅಧ್ಯಕ್ಷರಾದ ರಾಮು , ಸಂಘದ ಕಾರ್ಯದರ್ಶಿ, ಸಂಘದ ಜಿಲ್ಲಾ ಉಪಾಧ್ಯಕ್ಷ ದೇವರಾಜ್ ನೇತೃತ್ವದಲ್ಲಿ ಬಂದ್ ಕರೆಕೊಟ್ಟಿದ್ದ ಹಿನ್ನಲೆಯಲ್ಲಿ ಖಾಸಗಿ ಔಷಧ ಅಂಗಡಿಗಳಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬೇಡಿಕೆಗೆ ಆಗ್ರಹಿಸಿದರು. ಆನ್ಲೈನ್ ಔಷಧ ಮಾರಾಟದಿಂದ ಸ್ಥಳೀಯ ಔಷಧ ಅಂಗಡಿಗಳ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ವೈದ್ಯರ ಚೀಟಿ ಇಲ್ಲದೆ ಔಷಧ ವಿತರಣೆ ನಡೆಯುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆಯ ಬಗ್ಗೆ ಎಲ್ಲ ಖಾಸಗಿ ಔಷಧ ಅಂಗಡಿ ಮಾಲೀಕರು ತೀವ್ರ ಆತಂಕ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜನೌಷಧ ಕೇಂದ್ರಗಳು ಹಾಗೂ ಕೆಲ ಅಗತ್ಯ ಸೇವೆಯ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ಔಷಧ ಅಂಗಡಿಗಳನ್ನು ಬಂದ್ ಮಾಡಿದ್ದರು. ತುರ್ತು ಔಷಧಿಗಾಗಿ ಬಂದ ರೋಗಿಗಳು, ಸಾರ್ವ ಜನಿಕರು ಪರದಾಡುವ ಸ್ಥಿತಿ ನಿರ್ಮಾಣ ಸಾಮಾನ್ಯವಾಗಿತ್ತು. ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ವೇಳೆ ತಾಲೂಕು ಔಷಧಿ ಮಾರಾಟ ಕೇಂದ್ರ ಸಂಘಟನೆಯ ಉಪಾಧ್ಯಕ್ಷ ಸತ್ಯ ಮೆಡಿಕಲ್ ಶಿವಪ್ರಸಾದ್, ಖಚಾಂಚಿ ಶ್ರೀರಾಮ್ ಮೆಡಿಕಲ್ ಸೆಂಟರ್ನ ಅಂಜನರೆಡ್ಡಿ ಸೇರಿದಂತೆ ಪಟ್ಟಣದ ಎಲ್ಲ ಔಷಧ ಅಂಗಡಿ ಮಾಲೀಕರು ಭಾಗವಹಿಸಿದ್ದರು.