ಕನ್ನಡಪ್ರಭ ವಾರ್ತೆ ಹಾಸನ
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ ಒ ಸಂಘಟನೆಯ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ೪೦,೦೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಕ್ರಮ ಜಾರಿಯಲ್ಲಿದೆ. ಚಿಕ್ಕನಾಳು ಪ್ರದೇಶದ ಈ ಎರಡು ಶಾಲೆಗಳಲ್ಲಿ ೩೦ಕ್ಕಿಂತ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬಡ ಮತ್ತು ಕಾರ್ಮಿಕ ವರ್ಗದ ಮಕ್ಕಳಿಗೆ ಸಮೀಪದಲ್ಲೇ ಶಿಕ್ಷಣ ಲಭ್ಯವಾಗುತ್ತಿರುವ ಈ ಶಾಲೆಗಳನ್ನು ಮುಚ್ಚುವುದು ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಶಾಲೆ ಮುಚ್ಚಿ, ಮಕ್ಕಳನ್ನು ನಗರದ ಚಿಪ್ಪಿನಕಟ್ಟೆಯಲ್ಲಿರುವ ಪ್ರೌಢಶಾಲೆಗೆ ವರ್ಗಾಯಿಸುವಂತೆ ಆದೇಶಿಸಿರುವುದನ್ನು ಖಂಡಿಸಿದ ಅವರು, ಇದು ಬಡವರ ಮಕ್ಕಳಿಂದ ಶಿಕ್ಷಣ ಕಸಿಯುವ ವ್ಯವಸ್ಥಿತ ಪ್ರಯತ್ನ. ಶಿಕ್ಷಣ ಸಚಿವರು ಸದನದಲ್ಲಿ ‘ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ’ ಎಂದು ಹೇಳಿ, ಹಿಂಬಾಗಿಲಿನಿಂದ ಆದೇಶ ಹೊರಡಿಸುವುದು ದ್ವಂದ್ವ ನೀತಿ ಎಂದು ಟೀಕಿಸಿದರು.ಕಳೆದ ಎಂಟು ವರ್ಷಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆರೋಪಿಸಿದರು. ಮೂರುವರೆ ಸಾವಿರಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ೨೧,೦೦೦ಕ್ಕಿಂತ ಹೆಚ್ಚು ತರಗತಿ ಕೊಠಡಿಗಳು ದುರಸ್ತಿಯಾಗಿಲ್ಲ. ಮೊದಲು ಈ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚೈತ್ರ, ಉಪಾಧ್ಯಕ್ಷ ಅಭಿಷೇಕ್, ಪೋಷಕರಾದ ಆಯಿಷಾ, ಸಲ್ಮಾ ಬಾನು, ಅಮೀರ ಬಾನು, ಫಾತಿಮಾ ಜಹಾರ, ಸಮೀನಾ, ಜಮೀರ್ ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.