ದೇವದಾಸಿ ಮಹಿಳೆಯರ ಬೇಡಿಕೆಗಾಗಿ ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಾಗಿ ಡಿ. ೨೮.೨೯ ಹಾಗೂ ೩೦ ಮೂರು ದಿನಗಳ ಕಾಲ ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ ಗದಗ ನಗರಸಭೆ ಗಾರ್ಡನ್‌ ಆವರಣದಲ್ಲಿ ನಡೆದ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಹೇಳಿದರು.

ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಿಲ್ಲಾ ಮಟ್ಟದ ಸಮಾವೇಶಗದಗ: ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಾಗಿ ಡಿ. ೨೮.೨೯ ಹಾಗೂ ೩೦ ಮೂರು ದಿನಗಳ ಕಾಲ ಬೆಂಗಳೂರ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ ಹೇಳಿದರು.

ಇಲ್ಲಿಯ ನಗರಸಭೆ ಗಾರ್ಡನ್‌ ಆವರಣದಲ್ಲಿ ನಡೆದ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ರಾಜ್ಯ ಸರಕಾರದ ವಶದಲ್ಲಿ ದಶ ಲಕ್ಷಾಂತರ ಎಕರೆ ಜಮೀನು ವಶದಲ್ಲಿದ್ದರೂ ಮತ್ತು ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಪ್ರತಿ ವರ್ಷ ೩೦,೦೦೦ ಕೋಟಿ ರು.ಗಳಿಗೂ ಅಧಿಕ ಮೊತ್ತ ಹೊಂದಿದ್ದರು ಈ ದೌರ್ಜನ್ಯದ ದೇವದಾಸಿ ಪದ್ಧತಿಯು ಅದರ ಸೋಂಕು ಈಗಲೂ ಮುಂದುವರೆಯುತ್ತಿರುವುದಕ್ಕೆ ಅವುಗಳ ಮೇಲ್ಜಾತಿ ಹಾಗೂ ಮೇಲ್ವರ್ಗಗಳ ಪರವಾದ ರಾಜಕಾರಣವೇ ಕಾರಣವಾಗಿದೆ ಎಂದರು.ತಕ್ಷಣವೇ ಸರಕಾರ ತಮ್ಮ ಹಳೆಯ ಹಳಸಲು ನಿಲುವನ್ನು ಕೈ ಬಿಟ್ಟು ಸಮಯ ಮಿತಿಯೊಳಗೆ ದೌರ್ಜನ್ಯದ ದೇವದಾಸಿ ಪದ್ಧತಿ ಬೇರು ಸಮೇತ ನಿರ್ಮೂಲನೆ ಮಾಡಲು ಗಂಭೀರ ಕ್ರಮ ವಹಿಸುವಂತೆ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಬಲವಾಗಿ ಒತ್ತಾಯಿಸುತ್ತದೆ. ದೌರ್ಜನ್ಯದ ನಿರ್ಮೂಲನೆ ಮಾಡಬೇಕು ಹಾಗೂ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ಈ ಕೆಳಕಂಡ ಅಂಶಗಳ ಆಧಾರದಲ್ಲಿ ತಿದ್ದುಪಡಿ ಮಾಡಬೇಕು ಎಂದರು.

ಈಗಾಗಲೇ ದೇವದಾಸಿ ಮಹಿಳೆಯರ ಜೊತೆ ಸಂಸಾರ ನಡೆಸಿದ್ದು ಅವರ ಸಂತಾನಕ್ಕೆ ಕಾರಣರಾದವರಿಗೆ ಹೊಣೆಗಾರಿಕೆ ನಿಗದಿಸಬೇಕು. ಅವರುಗಳ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ದೊರೆಯುವಂತೆ ಕ್ರಮವಹಿಸಬೇಕು. ಈ ವಿಚಾರದ ದೂರುಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಣೆಗಾರಿಕೆ ವಹಿಸಿ ಕ್ರಮ ವಹಿಸಬೇಕು.

ಇನ್ನು ಮುಂದೆ ಯಾವುದೇ ದೌರ್ಜನ್ಯದ ದೇವದಾಸಿ ಪದ್ಧತಿಯ ಫಲಾನುಭವಿಯಾಗುವ ವ್ಯಕ್ತಿಯು ದುರುದ್ದೇಶದಿಂದ ಈ ದೌರ್ಜ್ಯಕ್ಕೆ ಕ್ರಮ ವಹಿಸುವ ಫಲಾನುಭವಿಯನ್ನು ಮುಖ್ಯ ಅಪರಾಧಿಯಾಗಿಸಿ ಬಂಧಿಸಬೇಕು. ಇದುವರೆಗಿನ ಎಲ್ಲ ವಯೋಮಾನದ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಆ ಕುಟುಂಬದ ಪರಿತ್ಯಕ್ತ ಮಹಿಳೆಯರನ್ನು ಪ್ರತ್ಯೇಕವಾಗಿ ಗಣತಿ ಮಾಡಿ ಪುನರ್ವಸತಿಗೆ ಕ್ರಮ ವಹಿಸಬೇಕು. ವಯೋಮಾನ ಭೇದವಿಲ್ಲದೆ ಮಾಸಿಕ ಸಹಾಯಧನವಾಗಿ ತಲಾ ೫,೦೦೦ ರು ಒದಗಿಸಬೇಕು ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ ೨೮.೨೯ ಹಾಗೂ ೩೦ ಮೂರು ದಿನಗಳ ಕಾಲ ಬೆಂಗಳೂರ ಫ್ರೀಡಂ ಪಾರ್ಕನಲ್ಲಿ ಹೋರಾಟ ನಡೆಸಲಾಗುವದು ಎಂದು ತಿಳಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಕೃಷಿಯಲ್ಲಿ ತೊಡಗಲು ಬಯಸುವ ಎಲ್ಲ ಮಹಿಳೆಯರಿಗೆ ಮತ್ತು ದಲಿತ ಕುಟುಂಬಗಳಿಗೆ ಮುಂದಿನ ಹತ್ತು ವರ್ಷಗಳೊಳಗೆ ಪ್ರತಿ ಕುಟುಂಬಕ್ಕೆ ಕನಿಷ್ಠ ತಲಾ ೫ ಎಕರೆ ನೀರಾವರಿ ಜಮೀನನ್ನು ಒದಗಿಸಲು ಯೋಜಿಸಬೇಕು. ಇದಕ್ಕಾಗಿ ಪ್ರತಿಯೊಂದು ಗ್ರಾಮದಲ್ಲಿ ಹೆಚ್ಚು ಭೂಮಿ ಹೊಂದಿರುವವರ ಜಮೀನುಗಳನ್ನು ಭೂ ಸ್ವಾಧೀನ ಮಾಡಬೇಕು. ಕನಿಷ್ಠ ಒಂದು ಲಕ್ಷ ರು ಸಹಾಯಧನ, ೨ ಲಕ್ಷ ರು.ಗಳ ಸ್ವಯಂ ಉದ್ಯೋಗದ ಸಾಲ ಸೌಲಭ್ಯ ಸರಕಾರದ ಗ್ಯಾರಂಟಿಯೊಂದಿಗೆ ೫ ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳು ಅವರ ನಡುವೆ ವಿವಾಹವಾದರೂ ತಲಾ ೩ ಲಕ್ಷ ಸಹಾಯ ಒದಗಿಸಬೇಕು.

ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಮಾಸಿಕ ತಲಾ ೧೦,೦೦೦ ನಿರುದ್ಯೋಗ ಭತ್ಯೆಒದಗಿಸಬೇಕು.

ಪುನರ್ವಸತಿ ಯೋಜನೆಯನ್ನು ಯಾವುದೇ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಿಕೊಡಬಾರದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ನಡೆಸಬೇಕು ಎಂದರು.

ಗಣತಿ ಪಟ್ಟಿಯಲ್ಲಿರುವ ಮಹಿಳೆಯರ ವಯೋ ಹಿರಿತನದ ಆಧಾರದಲ್ಲಿ ಎಲ್ಲಾ ಸೌಲಭ್ಯಗಳು ಕನಿಷ್ಟ ೧೦ ವರ್ಷದ ಕಾಲ ಮಿತಿಯೊಳಗೆ ಯಾವುದೇ ಅರ್ಜಿಗಳನ್ನು ಪಡೆಯದೇ ಅವರ ಬ್ಯಾಂಕ್ ಖಾತೆಗೆ ನೇರ ಸೌಲಭ್ಯ ವಿತರಿಸಲು ಕ್ರಮ ವಹಿಸಬೇಕು ಮತ್ತು ಆ ಮೂಲಕ ಭ್ರಷ್ಟಾಚಾರವನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ, ಜಿಲ್ಲಾಧ್ಯಕ್ಷೆ ದೇವಮ್ಮ ಜೋಗಣ್ಣವರ, ಖಜಾಂಚಿ ಹುಲಿಗೆಮ್ಮ,

ಪಕ್ಕೀರಮ್ಮ ಪೂಜಾರ, ಮೈಲಾರಪ್ಪ ಮಾದರ, ಪರಶುರಾಮ ಮಾದರ, ಮರಿಯಮ್ಮ ಹುಲಕೋಟಿ, ಭೀಮವ್ವ ನರಗುಂದ, ಮಲ್ಲಿಕಾರ್ಜುನ ಮಾದರ ಇದ್ದರು.

Share this article