ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು

KannadaprabhaNewsNetwork | Published : May 29, 2025 12:40 AM
ಶಿವನಸಮುದ್ರ ಸಮೀಪದ ಕಾವೇರಿ ನದಿಯಲ್ಲಿ ಈಜಲು ಇಳಿದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದು, ಈ ಘಟನೆ ಇದೀಗ ಗಂಭೀರ ತಿರುವು ಪಡೆದಿದೆ.

ಕೊಳ್ಳೇಗಾಲ: ಶಿವನಸಮುದ್ರ ಸಮೀಪದ ಕಾವೇರಿ ನದಿಯಲ್ಲಿ ಈಜಲು ಇಳಿದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದು, ಈ ಘಟನೆ ಇದೀಗ ಗಂಭೀರ ತಿರುವು ಪಡೆದಿದೆ.

ಮೃತ ವಿದ್ಯಾರ್ಥಿಯ ತಂದೆ ಅವರ ಮಗನನ್ನು ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದಾರೆ. ಮೃತ ವಿದ್ಯಾರ್ಥಿ ನಂದಕುಮಾರ್, ರಾಮನಗರದ ನಿವಾಸಿ ಹಾಗೂ ಹಾರೋಹಳ್ಳಿ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದನು. ಕಳೆದ ಒಂದು ದಿನಗಳ ಹಿಂದೆ, ನಂದಕುಮಾರ್ ಸೇರಿದಂತೆ 7 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ತಂಡ ಶಿವನಸಮುದ್ರ ಪ್ರವಾಸಕ್ಕೆ ಆಗಮಿಸಿದ್ದರು.

ಅವರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತ ವೀಕ್ಷಿಸಿ ನಂತರ ದರ್ಗಾ ಹಿಂಭಾಗದ ನದಿಗೆ ಹೋಗಿದ್ದರು. ಅಲ್ಲಿ ನಾಲ್ವರು ವಿದ್ಯಾರ್ಥಿಗಳು ನದಿಗೆ ಇಳಿದಾಗ, ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಈಜಲು ಸಾಧ್ಯವಾಗದೆ ಮೂವರು ಬಂಡೆಯನ್ನು ಹಿಡಿದು ನೆರವಿಗಾಗಿ ಕಿರುಚಿದರು. ಸ್ಥಳೀಯರ ಮುಕ್ತಾಯದಿಂದ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ಪ್ರಮೋದ್ (23), ಪ್ರಫುಲ್ಲ (22), ತುಷಾರಾ (20) ಎಂಬವರನ್ನು ಹಗ್ಗದ ಸಹಾಯದಿಂದ ರಕ್ಷಿಸಿದರು.ಆದರೆ, ನಂದಕುಮಾರ್ ನದಿಯಲ್ಲಿ ಕೊಚ್ಚಿ ಹೋಗಿದ್ದನು. ತಡರಾತ್ರಿ ತನಕ ಶೋಧ ನಡೆದರೂ ಅವನ ಪತ್ತೆ ಆಗಿರಲಿಲ್ಲ. ಬಳಿಕ ಬುಧವಾರ ಬೆಳಗ್ಗೆ ಶೋಧ ಮುಂದುವರಿಸಿದ ಅಗ್ನಿಶಾಮಕ ದಳ ಮೃತದೇಹವನ್ನು ಪತ್ತೆಹಚ್ಚಿ ನದಿಯಿಂದ ಹೊರತೆಗೆದಿದ್ದು ಈ ಘಟನೆ ಕುರಿತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಂದ ವಿವರಗಳನ್ನು ಸಂಗ್ರಹಿಸಿದ್ದಾರೆ.ಈ ನಡುವೆ, ಮೃತನ ತಂದೆ ಬೆಂಗಳೂರು ಡೇರಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಶಂಕರ್, ತಮ್ಮ ಮಗನಿಗೆ ಇದು ಪೂರ್ವನಿಯೋಜಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅವರು ತಮ್ಮ ಮಗನನ್ನು ಸ್ನೇಹಿತರು ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸ್ ತನಿಖೆ ಇದೀಗ ದುರ್ಘಟನೆ ಅಥವಾ ಕೊಲೆ ಎಂಬ ದಿಕ್ಕಿನಲ್ಲಿ ಸ್ಪಷ್ಟತೆ ತರಬೇಕಾಗಿದೆ ಅಲ್ಲದೆ ವಿದ್ಯಾರ್ಥಿಗಳ ಹೇಳಿಕೆಗಳು, ಸ್ಥಳದ ಪರಿಸ್ಥಿತಿ ಮತ್ತು ತಜ್ಞರ ವರದಿಗಳ ಮೇಲೆ ಮುಂದಿನ ಕ್ರಮ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗಿದ್ದು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.