ಧಾರವಾಡ:
ಹೆಡ್ ಕಾನ್ಸ್ಟೆಬಲ್ ಚಂದ್ರು ನಡುವಿನಮನಿ, ಕಾನ್ಸ್ಟೆಬಲ್ಗಳಾದ ಕಿರಣ್ ಡೊಕ್ಕನ್ನವರ ಹಾಗೂ ಸೈಯದ್ ತಹಶೀಲ್ದಾರ ಅಮಾನತುಗೊಂಡ ಠಾಣೆಯ ಸಿಬ್ಬಂದಿ. ಇಲ್ಲಿಯ ಗಿರಿನಗರದ, ಮೂಲತಃ ಬಾಗಲಕೋಟ ಜಿಲ್ಲೆಯ ಆದಿತ್ಯಾ ಮ್ಯಾಗೇರಿ (20) ಆತ್ಮಹತ್ಯೆ ಪ್ರಕರಣದಲ್ಲಿ ಈ ಮೂವರನ್ನು ಅಮಾನತು ಮಾಡಲಾಗಿದೆ.
ಗಾಂಜಾ ಸೇವನೆಯ ಆರೋಪದ ಅಡಿ ಆದಿತ್ಯಾ ಸೇರಿದಂತೆ ಹತ್ತು ವಿದ್ಯಾರ್ಥಿಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಕಳೆದ ಶನಿವಾರ ವಶಕ್ಕೆ ತೆಗೆದುಕೊಂಡಿದ್ದರು. ಆದರೆ, ಗಾಂಜಾ ಸೇವನೆಯ ವರದಿಯಲ್ಲಿ ಗಾಂಜಾ ಸೇವನೆ ಮಾಡಿರಲಿಲ್ಲ ಎಂಬ ವರದಿ ಬಂದಿತ್ತು. ಇಷ್ಟಾಗಿಯೂ ಈ ಪ್ರಕರಣದಿಂದ ಹೊರ ಬರಲು ಪೊಲೀಸರು ಹಣ ಕೇಳಿದ್ದರು. ತಂದೆ ಇಲ್ಲದೆ ತಾಯಿಯ ಆಶ್ರಯದಲ್ಲಿದ್ದ ಆದಿತ್ಯಾ ಈ ವಿಚಾರವಾಗಿ ಸೋಮವಾರ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು.ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಇದೀಗ ಮೂವರನ್ನು ಅಮಾನತು ಮಾಡಿದೆ. ಈ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಈ ಪ್ರಕರಣ ಕುರಿತು ಹಿರಿಯ ಅಧಿಕಾರಿಗಳು ತಮಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೂವರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಡಿಸಿಪಿ ಶ್ರುತಿ ಮಾಡುತ್ತಿದ್ದು, ವಿದ್ಯಾಗಿರಿ ಠಾಣೆಯ ಸಿಬ್ಬಂದಿ ಹಣ ಕೇಳಿದ್ದರ ಬಗ್ಗೆಯೂ ತನಿಖೆಯಾಗಲಿದೆ. ಯುವಕನ ಪೋಷಕರು ಹೆಚ್ಚುವರಿ ದೂರು ನೀಡಿದರೆ ಕಾನೂನು ಕ್ರಮ ನಡೆಯಲಿದೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತಾರಾದರೂ ಭಾಗಿಯಾಗಿದ್ದರೂ ಕ್ರಮ ಆಗಲಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.