ಉನ್ನತ ಶಿಕ್ಷಣಕ್ಕಾಗಿ ಗಜೇಂದ್ರಗಡ, ರೋಣ ತಾಲೂಕಿನ ವಿದ್ಯಾರ್ಥಿಗಳ ಪರದಾಟ

KannadaprabhaNewsNetwork |  
Published : Apr 27, 2026, 02:15 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಹಾಗೂ ರಾಜ್ಯವೇ ತಿರುಗಿ ತಾಲೂಕಿನತ್ತ ನೋಡುವ ಫಲಿತಾಂಶ ಬಂದರೂ ಉನ್ನತ ವ್ಯಾಸಂಗದ ಕನಸನ್ನು ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಅನೇಕ ವಿದ್ಯಾರ್ಥಿಗಳ ಕನಸನ್ನು ಕಮರುವಂತೆ ಮಾಡುತ್ತಿದೆ.

ಎಸ್.ಎಂ. ಸೈಯದ್

ಗಜೇಂದ್ರಗಡ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಛಾಪು ಮೂಡಿಸಿದ ತಾಲೂಕಿನ ಸೂಡಿ ಗ್ರಾಮದ ಪ್ರವೀಣಕುಮಾರ ಸೊಬಗಿನ ಸಾಧನೆಗೆ ಶಹಭಾಶ್‌ಗಿರಿ ಜತೆಗೆ ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಉಚಿತ ಪ್ರವೇಶದ ಆಹ್ವಾನಗಳು ಬರುತ್ತಿವೆ. ಆದರೆ, ಉತ್ತಮ ಅಂಕ ಪಡೆದರೂ ಗಜೇಂದ್ರಗಡ ಹಾಗೂ ರೋಣ ತಾಲೂಕಿನ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅನ್ಯ ಜಿಲ್ಲೆಗಳಿಗೆ ತೆರಳುವ ದುಸ್ಥಿತಿಯಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ತಾಲೂಕು ದಾಖಲಿಸುತ್ತಿದೆ. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಇಟಗಿ ಗ್ರಾಮದ ಪಿಎಂಶ್ರೀ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ ೬೨೫ಕ್ಕೆ ೬೨೨ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪ್ರತಿಭೆಗಳ ಸಾಲು: ೨೦೨೧ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಜೇಂದ್ರಗಡದ ಕಿರಣ ತಾಳಿಕೋಟಿ ೬೨೫ಕ್ಕೆ ೬೨೫ ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಗೋಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರತಿಭಾ ಮುತ್ತಪ್ಪ ಸೊಬರದ ವಿದ್ಯಾರ್ಥಿನಿ ೨೦೨೨ನೇ ಸಾಲಿನಲ್ಲಿ ೬೨೫ಕ್ಕೆ ೬೨೨ ಅಂಕ ಗಳಿಸಿದ್ದರು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ತಾಳಿಕೋಟಿ ಬೆಳಗಾವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಪ್ರತಿಭಾ ಮುತ್ತಪ್ಪ ಸೊಬರದ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಟ್ಟಿ ಹೆಚ್ಚಾಗುತ್ತದೆ.

ಆದರೆ ಜಿಲ್ಲೆ ಹಾಗೂ ರಾಜ್ಯವೇ ತಿರುಗಿ ತಾಲೂಕಿನತ್ತ ನೋಡುವ ಫಲಿತಾಂಶ ಬಂದರೂ ಉನ್ನತ ವ್ಯಾಸಂಗದ ಕನಸನ್ನು ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಅನೇಕ ವಿದ್ಯಾರ್ಥಿಗಳ ಕನಸನ್ನು ಕಮರುವಂತೆ ಮಾಡುತ್ತಿದೆ.

ಆರ್ಥಿಕ ಸಂಕಷ್ಟ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಮಗನಿಗೆ ಉಚಿತ ಪ್ರವೇಶ ನೀಡಲು ಅನೇಕ ಕಾಲೇಜುಗಳು ಸಂಪರ್ಕಿಸುತ್ತಿವೆ. ಆದರೆ ಮುಂದಿನ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಚಿಂತೆಗೆ ದೂಡಿದೆ ಎಂದು ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬಂದ ವಿದ್ಯಾರ್ಥಿಯ ತಾಯಿ ಲಲಿತಾ ಈರಪ್ಪ ಸೊಬಗಿನ ತಿಳಿಸಿದರು.

ಅನುಕೂಲ: ೨೦೨೨ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ೬೨೫ಕ್ಕೆ ೬೨೨ ಅಂಕ ಪಡೆದ ನನ್ನ ಮಗಳು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ತಾಲೂಕಿನಲ್ಲಿಯೇ ಉನ್ನತ ವ್ಯಾಸಂಗ ಕೇಂದ್ರಗಳಿದ್ದರೆ ಮತ್ತಷ್ಟು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಗೋಗೇರಿ ಗ್ರಾಮದ ಮುತ್ತಪ್ಪ ಸೊಬರದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾಲನೆ
2024ರ ಕನಕಗಿರಿ ಉತ್ಸವದ ಸ್ಮರಣಿಕೆ, ಗಂಧದ ಹಾರಗಳಿಗೆ ಧೂಳು