ಎಸ್.ಎಂ. ಸೈಯದ್
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟವಾಗಿರುವ ಎಸ್ಸೆಸ್ಸೆಲ್ಸಿಯಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಫಲಿತಾಂಶವನ್ನು ತಾಲೂಕು ದಾಖಲಿಸುತ್ತಿದೆ. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಇಟಗಿ ಗ್ರಾಮದ ಪಿಎಂಶ್ರೀ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಪ್ರವೀಣಕುಮಾರ ಸೊಬಗಿನ ೬೨೫ಕ್ಕೆ ೬೨೨ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪ್ರತಿಭೆಗಳ ಸಾಲು: ೨೦೨೧ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಜೇಂದ್ರಗಡದ ಕಿರಣ ತಾಳಿಕೋಟಿ ೬೨೫ಕ್ಕೆ ೬೨೫ ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಗೋಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರತಿಭಾ ಮುತ್ತಪ್ಪ ಸೊಬರದ ವಿದ್ಯಾರ್ಥಿನಿ ೨೦೨೨ನೇ ಸಾಲಿನಲ್ಲಿ ೬೨೫ಕ್ಕೆ ೬೨೨ ಅಂಕ ಗಳಿಸಿದ್ದರು. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಿರಣ ತಾಳಿಕೋಟಿ ಬೆಳಗಾವಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಪ್ರತಿಭಾ ಮುತ್ತಪ್ಪ ಸೊಬರದ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪಟ್ಟಿ ಹೆಚ್ಚಾಗುತ್ತದೆ.ಆದರೆ ಜಿಲ್ಲೆ ಹಾಗೂ ರಾಜ್ಯವೇ ತಿರುಗಿ ತಾಲೂಕಿನತ್ತ ನೋಡುವ ಫಲಿತಾಂಶ ಬಂದರೂ ಉನ್ನತ ವ್ಯಾಸಂಗದ ಕನಸನ್ನು ಈಡೇರಿಸಿಕೊಳ್ಳಲು ಬೇರೆ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಅನೇಕ ವಿದ್ಯಾರ್ಥಿಗಳ ಕನಸನ್ನು ಕಮರುವಂತೆ ಮಾಡುತ್ತಿದೆ.
ಅನುಕೂಲ: ೨೦೨೨ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ೬೨೫ಕ್ಕೆ ೬೨೨ ಅಂಕ ಪಡೆದ ನನ್ನ ಮಗಳು ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ತಾಲೂಕಿನಲ್ಲಿಯೇ ಉನ್ನತ ವ್ಯಾಸಂಗ ಕೇಂದ್ರಗಳಿದ್ದರೆ ಮತ್ತಷ್ಟು ಪಾಲಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಗೋಗೇರಿ ಗ್ರಾಮದ ಮುತ್ತಪ್ಪ ಸೊಬರದ ತಿಳಿಸಿದರು.