ಎಬಿವಿಪಿ ತಾಲೂಕು ಸಂಚಾಲಕ ಅಭಿಲಾಶ್ ಆಕ್ರೋಶ
ಸಮಯಕ್ಕೆ ಸರಿಯಾಗಿ, ಸುಸ್ಥಿತಿಯಲ್ಲಿರುವ ಬಸ್ ವ್ಯವಸ್ಥೆ ಕಲ್ಪಿಸುವಂತೆ ನೂರಾರು ವಿದ್ಯಾರ್ಥಿಗಳು, ಎಬಿವಿಪಿ ಸಂಘಟನೆ ಬುಧವಾರ ಶೃಂಗೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಅಭಿಲಾಶ್ ಮಾತನಾಡಿ ಬೆಳಿಗ್ಗೆ, ಸಂಜೆ ಸಮಯದಲ್ಲಿ ಕಾಲೇಜು ಸಮಯದಲ್ಲಿ ಸರಿಯಾದ ಬಸ್ ವ್ಯವಸ್ಥೆಯಿಲ್ಲ. ಬೇಕಾಬಿಟ್ಟಿ ಸಮಯದಲ್ಲಿ ಬರುತ್ತದೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಮಧ್ಯಾಹ್ನವಾಗುತ್ತದೆ. ಪಾಠವೆಲ್ಲ ಮುಗಿದಿರುತ್ತದೆ. ಹೀಗಾದರೆ ವಿದ್ಯಾರ್ಥಿಗಳ ಭವಿಷ್ಯವೇನು, ಸರ್ಕಾರ,ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.ಬೇಕಾಬಿಟ್ಟಿ ಸಮಯದಲ್ಲಿ ಸುಸ್ಥಿತಿಯಲ್ಲಿಲ್ಲದ ಬಸ್ ಗಳು ಬರುತ್ತದೆ. ಇದು ಕೆಲವೊಮ್ಮೆ ಅಲ್ಲಲ್ಲಿ ಹಾಳಾಗಿ ನಿಲ್ಲುತ್ತದೆ. ಸಂಜೆ ಮನೆಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಮನೆಗೆ ಹೋಗುವಾಗ ರಾತ್ರಿಯಾಗುತ್ತದೆ. ಕಾಡು ದಾರಿಯಲ್ಲಿ ಹೋಗಬೇಕು. ಆನೆಗಳ ಕಾಟ, ಭಯ. ಮನೆಗೆ ಸೇರುವ ಭರವಸೆಯಿಲ್ಲ.
ತಾಲೂಕು ಕಚೇರಿ ಎದುರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಧನುಷ್, ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ್, ಸಿದ್ದಾರ್ಥ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.
ಶೃಂಗೇರಿಯಲ್ಲಿ ಸರ್ಕಾರಿ ಬಸ್ ಸೌಕರ್ಯ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಎಬಿವಿಪಿ ಸಂಘಟನೆ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.