ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶಿಕ್ಷಣದಲ್ಲಿ ಜ್ಞಾಪಕಶಕ್ತಿ ಮಾತ್ರವಲ್ಲದೆ ಗ್ರಹಿಸುವ ಶಕ್ತಿಯನ್ನೂ ಕೂಡ ವಿದ್ಯಾರ್ಥಿಗಳು ಇಟ್ಟುಕೊಳ್ಳಬೇಕು ಎಂದು ವಾಗ್ಮಿ ಎಂ.ಕೃಷ್ಣೇಗೌಡ ಹೇಳಿದರು.ಪಟ್ಟಣದ ಆದಿಚುಂಚನಗಿರಿ ಬಿಇಡಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ ಸನ್ಮಾರ್ಗದಲ್ಲಿ ಸಾಗುವಂತಾಗಬೇಕು. ಜಗತ್ತಿನಲ್ಲಿ ಎಲ್ಲಾ ವೃತ್ತಿಗಳು ಶ್ರೇಷ್ಠವಾದುವು. ಅದಕ್ಕೆ ನಾವು ಶ್ರೇಷ್ಠತೆ ತಂದುಕೊಡಬೇಕು. ಮನಸ್ಸು, ದೇಹ ಪರಿಪಕ್ವಗೊಳಿಸುವುದು ಶಿಕ್ಷಣದ ಆಶಯ. ಮನುಷ್ಯನಿಗೆ ಯೋಚಿಸುವ, ಜ್ಞಾನ ಗಳಿಸುವ ಶಕ್ತಿ ಇದೆ. ಹಾಗಾಗಿ ಜ್ಞಾನವನ್ನು ಇನ್ನೊಬ್ಬರಿಗೆ ತಿಳಿಸಿ ಕೊಡುವ ಕೆಲಸ ಮಾಡಬೇಕು. ಆದರ್ಶ ಇರಿಸಿಕೊಂಡು ಉತ್ತಮರಾಗಿ ಹೊರಹೊಮ್ಮಬೇಕು ಎಂದರು.
ವಿದ್ಯಾರ್ಥಿಗಳನ್ನು ಸಂವೇದಶೀಲರನ್ನಾಗಿ, ಜ್ಞಾನವಂತರನ್ನಾಗಿ ಮಾಡುವ ಸಾಮರ್ಥ್ಯ ಶಿಕ್ಷಕರಿಗೆ ಇದೆ. ಶಿಕ್ಷಣಕ್ಕೆ ಪೂರಕವಾದ ವಿಚಾರ ಕಲಿಸಬೇಕಿರುವುದು ಶಿಕ್ಷಕರ ಗುರಿಯಾಗಬೇಕು. ಇದರಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳು ಪದವಿ ಪಡೆಯುವುದರ ಜತೆಗೆ ಸಂಸ್ಕಾರ ಮುಖ್ಯ ಎಂದು ತಿಳಿಸಿದರು.ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ ಮಾತನಾಡಿ, ಪುಸ್ತಕ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ನಡೆ, ನುಡಿಯಲ್ಲಿ ಸಮಾಜಕ್ಕೆ ಮಾದರಿಯಾಗಬೇಕು. ತಂದೆ, ತಾಯಿ ಇರಿಸಿರುವ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಗಮನಹರಿಸಬೇಕು. ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರ. ಅಂಧಕಾರ ದೂರ ಮಾಡಿ ವಿದ್ಯಾರ್ಥಿಗಳಲ್ಲಿ ಸುಜ್ಞಾನ ಬಿತ್ತುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎ.ಟಿ.ಶಿವರಾಮು ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕಗಳಿಗಿಂತ ಸಂವಹನ ಕೌಶಲ ಮುಖ್ಯ ಎಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜು ಪ್ರಾಂಶುಪಾಲ ಎಂ.ಕೆ.ಮಂಜುನಾಥ, ಸಹ ಪ್ರಾಧ್ಯಾಪಕ ಎಸ್.ಲಕ್ಷ್ಮೀಕಾಂತ್ ಭಾಗವಹಿಸಿದ್ದರು.