ಕನ್ನಡಪ್ರಭ ವಾರ್ತೆ ಮೈಸೂರು
ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಸ್ವಯಂ ಸೇವಾ ಘಟಕ, ಎನ್ಎಸ್ಎಸ್, ಎನ್ಸಿಸಿ ಘಟಕ, ವಿದ್ಯಾರ್ಥಿ ಸಂಸತ್, ರೋಟರ್ಯಾಕ್ಟ್ ಕ್ಲಬ್, ಯೂತ್ ರೆಡ್ ಕ್ರಾಸ್ ಮತ್ತು ಐಕ್ಯೂಎಸಿ ಹಾಗೂ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರುವ ಬೆಂಗಳೂರಿನ ಲವ್-ಇಂಡಿಯಾ ರೀಜನಲ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ರಾಷ್ಟ್ರೀಯತೆ ಮತ್ತು ಯುವಕರು ಎಂಬ ವಿಷಯ ಕುರಿತು ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಉಪನ್ಯಾಸದ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ರಾಷ್ಟ್ರೀಯತೆ, ದೇಶಪ್ರೇಮ ಮತ್ತು ಯುವಜನಾಂಗವನ್ನು ಕುರಿತು ಅವರು ಮಾತನಾಡಿದರು.
ಜ್ಞಾನದ ಹಂಚಿಕೆ ಮತ್ತು ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಇಂದಿನ ಯುವ ಜನಾಂಗ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗಳಲ್ಲಿ ಯುವಜನರ ಬುದ್ದಿವಂತಿಕೆ ಹಾಗೂ ಸಮಯ ಪ್ರಜ್ಞೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ಸಮಾಜ ಮತ್ತು ರಾಷ್ಟ್ರಕ್ಕಾಗಿ ಸಾಧ್ಯವಾದಷ್ಟು ಉತ್ತಮ ಮತ್ತು ಸಕಾರಾತ್ಮಕ ಚಟುವಟಿಕೆಗಳನ್ನು ನಿರ್ವಹಿಸುತ್ತಾ, ಉತ್ತಮ ಕಾರ್ಯತಂತ್ರ, ದೂರದೃಷ್ಟಿ ಮತ್ತು ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಳ್ಳುವ ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಅವರು ಹೇಳಿದರು.ಭಾರತದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಅಡಿಯಲ್ಲಿ ಯುವಕರು ಮೂಲಭೂತವಾಗಿ ತಿಳಿಯಲೇಬೇಕಾಗಿರುವ ಭಾರತದ ಸಂವಿಧಾನ, ತ್ರಿವರ್ಣಧ್ವಜ, ಅಧಿಕೃತ ರಾಷ್ಟ್ರ ಭಾಷೆಗಳು, ರಾಷ್ಟ್ರ ಲಾಂಛನ, ಭಾರತೀಯ ಪ್ರಜಾಸತ್ತಾತ್ಮಕತೆ, ಪ್ರಾಚೀನ ಭಾರತೀಯ ಅನ್ವೇಷಣೆಗಳು, ಜೀವ ವೈವಿಧ್ಯತೆ, ರಾಜಕೀಯ ವಿಜ್ಞಾನ, ನಾಯಕತ್ವ, ಮಾನವ ಹಕ್ಕುಗಳೂ ಸೇರಿದಂತೆ ಹತ್ತು ಹಲವು ವಿಷಯಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಹಲವು ಕುತೂಹಲಕಾರಿ ಮಾಹಿತಿಗಳ ಜೊತೆಗೆ, ಪ್ರಚಲಿತ ನಾಗರಿಕ ಸೇವಾ ಪರೀಕ್ಷೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎದುರಿಸುವ ಪ್ರಮುಖ ಅಂಶಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಶೈಕ್ಷಣಿಕ ಡೀನ್ ಹಾಗೂ ವಿದ್ಯಾರ್ಥಿ ಸ್ವಯಂ ಸೇವಕ ಘಟಕದ ಸಂಚಾಲಕ ಡಾ.ಎಚ್. ಶ್ರೀಧರ, ಐಕ್ಯೂಎಸಿ ಸಂಯೋಜಕಿ ಡಿ. ಗೀತಾ, ವಿದ್ಯಾರ್ಥಿ ಸಂಸತ್ ಮತ್ತು ಎನ್ಸಿಸಿ ಅಧಿಕಾರಿಗಳಾದ ಡಾ.ಪಿ.ಜಿ. ಪುಷ್ಪರಾಣಿ, ಎನ್ಎಸ್ಎಸ್ ಘಟಕಗಳ ಅಧಿಕಾರಿಗಳಾದ ಡಾ.ಜಿ. ದೊಡ್ಡರಸಯ್ಯ, ಡಾ.ಸಿ.ಎಸ್. ಸಿದ್ದರಾಜು, ಯೂತ್ ರೆಡ್ ಕ್ರಾಸ್ ಸಂಚಾಲಕಿ ಎಂ.ಎಚ್. ಸುನೀತಾ, ರೋಟರ್ಯಾಕ್ ಕ್ಲಬ್ ಗಳ ಸಂಚಾಲಕಿ ವಿ. ಗಾಯತ್ರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್. ಪೂರ್ಣಿಮ, ಲವ್-ಇಂಡಿಯಾ ರೀಜನಲ್ ಇನ್ಸ್ ಟಿಟ್ಯೂಟ್ ಸಂಚಾಲಕ ಪ್ರವೀಣ್ ಸಿಂಗ್ ಇದ್ದರು.