ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಲಕ್ಷ್ಮಣ್ ಕುಮಾರ್

KannadaprabhaNewsNetwork |  
Published : Aug 05, 2026, 03:45 AM IST
ಮೂಡಿಗೆರೆ ತಾಲೂಕಿನ ಗೌಡಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಕನ್ನಡಪ್ರಭ ದಿನಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ವಿದ್ಯಾರ್ಥಿ ಆವೃತ್ತಿಯ ಉದ್ಘಾಟನಾ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು. | Kannada Prabha

ಸಾರಾಂಶ

ಮೂಡಿಗೆರೆವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ದಾನಿ ಬಿ.ಕೆ. ಲಕ್ಷ್ಮಣ್ ಕುಮಾರ್ ಸಲಹೆ ನೀಡಿದರು.

ಮೂಡಿಗೆರೆ ಗೌಡಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡಪ್ರಭ ದಿನಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ವಿದ್ಯಾರ್ಥಿ ಆವೃತ್ತಿ ಬಿಡುಗಡೆ

ಕನ್ನಡಪ್ರಭ ವಾರ್ತೆ ಮೂಡಿಗೆರೆ

ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ದಾನಿ ಬಿ.ಕೆ. ಲಕ್ಷ್ಮಣ್ ಕುಮಾರ್ ಸಲಹೆ ನೀಡಿದರು.ಮೂಡಿಗೆರೆ ತಾಲೂಕಿನ ಗೌಡಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಕನ್ನಡಪ್ರಭ ದಿನಪತ್ರಿಕೆಯ ‘ವಿದ್ಯಾರ್ಥಿ ಮಿತ್ರ’ ವಿದ್ಯಾರ್ಥಿ ಆವೃತ್ತಿ ಬಿಡುಗಡೆ ಸಮಾರಂಭವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ಮಿತ್ರದಲ್ಲಿ ಪರೀಕ್ಷೆಗೆ ಅಗತ್ಯ ಮಾಹಿತಿ, ಸಾಮಾನ್ಯ ಜ್ಞಾನ, ಸಾಮಾಜಿಕ ಅರಿವು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ವಿಷಯ ಪ್ರಕಟವಾಗುತ್ತವೆ. ಅವುಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಅಂಕ ಗಳೊಂದಿಗೆ ಶಾಲೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ದಾನಿಗಳಾದ ಬಿ.ಕೆ. ಲಕ್ಷ್ಮಣ್ ಕುಮಾರ್ ತಮ್ಮ ಸ್ವಂತ ವೆಚ್ಚದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅವಧಿಗೆ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಉಚಿತವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.ಹಿರಿಯ ಪತ್ರಕರ್ತ ಪ್ರಸನ್ನ ಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪತ್ರಿಕೆ ಓದುವ ಸಂಸ್ಕೃತಿ ಬೆಳೆಸುವುದು ಅತ್ಯಗತ್ಯ ಎಂದರು.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆದರೆ ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಮಾಹಿತಿ, ಮಾದರಿ ಪ್ರಶ್ನೆ ಪತ್ರಿಕೆಗಳು, ಕ್ರೀಡಾ ಸುದ್ದಿ ಹಾಗೂ ವಿವಿಧ ಶಿಕ್ಷಣ ಸಂಬಂಧಿತ ಮಾಹಿತಿ ದೊರೆಯುತ್ತವೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ, ನಾವು ಬಡವರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು, ಸಣ್ಣ ರೈತರ ಮಕ್ಕಳು ಎಂಬ ಕಾರಣಕ್ಕೆ ಉನ್ನತ ಹುದ್ದೆಗಳನ್ನು ತಲುಪಲು ಸಾಧ್ಯವಿಲ್ಲ ಎಂಬ ಕೀಳರಿಮೆ ಮೊದಲು ತೊರೆಯಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಆಡಳಿತಾತ್ಮಕ ಹಾಗೂ ಉನ್ನತ ಹುದ್ದೆ ಅಲಂಕರಿಸಿರುವ ಅನೇಕ ಸಾಧಕರು ನಮ್ಮ ಮುಂದಿದ್ದಾರೆ. ಅವರನ್ನೇ ಆದರ್ಶವಾಗಿಸಿಕೊಂಡು ಆತ್ಮವಿಶ್ವಾಸದಿಂದ ವಿದ್ಯಾಭ್ಯಾಸ ಮಾಡಿದರೆ ಯಾವುದೇ ಗುರಿ ಸಾಧಿಸಬಹುದು.

"ವಿದ್ಯಾರ್ಥಿಗಳು ತಮ್ಮ ಓದಿನ ಕಡೆ ಹೆಚ್ಚಿನ ಗಮನಹರಿಸಿ, ಉತ್ತಮ ಅಂಕ ಗಳಿಸಿ ಶಾಲೆ, ಗ್ರಾಮ ಹಾಗೂ ಪೋಷಕರಿಗೆ ಕೀರ್ತಿ ತರಬೇಕು. ಮುಂದೆ ಉನ್ನತ ಹುದ್ದೆ ಅಲಂಕರಿಸಿದ ನಂತರ ತಾವು ಕಲಿತ ಶಾಲೆಯನ್ನು ಮರೆಯದೆ ತಮ್ಮ ದುಡಿಮೆ ಒಂದು ಭಾಗವನ್ನು ಶಾಲೆ ಹಾಗೂ ಊರಿನ ಶೈಕ್ಷಣಿಕ ಪ್ರಗತಿಗೆ ಮೀಸಲಿಡಬೇಕು. ಸಮಾಜಕ್ಕೆ ಮರಳಿ ಕೊಡುವ ಮನೋ ಭಾವ ಜೀವನದ ನಿಜವಾದ ಸಾರ್ಥಕತೆ ಎಂದು ಕರೆ ನೀಡಿದರು.

ಮೊಬೈಲ್ ನೋಡಿದರೆ ತಲೆ ತಗ್ಗಿಸಿಯೇ ಇರಬೇಕಾಗುತ್ತದೆ; ಪುಸ್ತಕ ಮತ್ತು ಪತ್ರಿಕೆ ಓದಿದರೆ ತಲೆ ಎತ್ತಿ ಸಮಾಜದಲ್ಲಿ ನಡೆಯುವಂತಾಗುತ್ತದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸದ ಮಹತ್ವ ಮನವರಿಕೆ ಮಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ಉನ್ನತ ಗುರಿ ಹೊಂದಿ ಶ್ರಮಿಸಿದರೆ ಕುಟುಂಬ, ಶಾಲೆ ಹಾಗೂ ಗ್ರಾಮದ ಹೆಮ್ಮೆ ಹೆಚ್ಚಿಸಬಹುದು ಎಂದರು.

ದಾನಿ ಬಿ.ಕೆ. ಲಕ್ಷ್ಮಣ್ ಕುಮಾರ್ ಅವರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ಪತ್ರಿಕೆ ವಿತರಣೆ ಮಾಡಲಾಗುವುದು.ಅಧ್ಯಕ್ಷತೆಯನ್ನು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ವಹಿಸಿದ್ದರು. ರೈತ ಹಿತರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ಕೆ. ಲಕ್ಷ್ಮಣ್ ಗೌಡ, ಕನ್ನಡಪ್ರಭ ವರದಿಗಾರ ಪ್ರದೀಪ್ ಕುಮಾರ್ ಎನ್., ಶಿಕ್ಷಕರಾದ ರೇಣುಕಮ್ಮ ಕೆ., ಗೀತಾ ಟಿ.ಜಿ., ನಾಜಿಮಾ, ಚಂದ್ರೇಶ್ ಎಚ್.ಪಿ., ಸುಪ್ರಿತ್, ರಂಜಿತ್ ಸೇರಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನಗಿರಿ ತಾಲೂಕಿನಲ್ಲಿ ಮಳೆ: 2 ಮನೆಗಳಿಗೆ ಹಾನಿ
ಲೀಡ್‌...ನಿಯಮಬಾಹಿರ ನೇಮಕಾತಿ ರದ್ದುಪಡಿಸಲು ಆಗ್ರಹ