ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೆ.ಎಸ್. ಈಶ್ವರಪ್ಪನವರು 1975ರ ತುರ್ತು ಪರಿಸ್ಥಿತಿಯ ಕರಾಳ ನೆನಪಿನ 50ನೇ ವರ್ಷದ ಅಂಗವಾಗಿ ಜು.19ರಂದು ಶಿವಮೊಗ್ಗ ನಗರದ ಮಟ್ಟದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಆಯೋಜಿಸಿದ್ದು, ಈ ಕಾರ್ಯಕ್ರಮ ಯುವಜನತೆಯಲ್ಲಿ ರಾಜಕೀಯ-ಕೋಮು ದ್ವೇಷ ಭಾವನೆ ಮೂಡಿಸುವ ಉದ್ದೇಶದಿಂದ ಆಯೋಜಿಸದ ಕಾರ್ಯಕ್ರಮವಾಗಿದೆ ಎಂದು ಎನ್ಎಸ್ಯುಐ ಕಾರ್ಯಕರ್ತರು ಆರೋಪಿಸಿದರು.
ಈಶ್ವರಪ್ಪನವರು ಬಿಜೆಪಿಯಲ್ಲಿದ್ದಾಗ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದರಿಂದಾಗಿ ಬಿಜೆಪಿ ಈಶ್ವರಪ್ಪನವರಿಗೆ ಟಿಕೆಟ್ ನೀಡದೇ ರಾಜಕೀಯವಾಗಿ ಮೂಲೆಗುಂಪು ಮಾಡಿದೆ. ತಮ್ಮ ರಾಜಕೀಯ ಜೀವನ ಮುಗಿದ ಅಧ್ಯಾಯ ಎಂದು ಗೊತ್ತಿದ್ದರೂ ತಮ್ಮ ಮಗನನ್ನು ರಾಜಕೀಯದಲ್ಲಿ ನೆಲೆಯೂರಿಸುವ ಉದ್ದೇಶದಿಂದ ಕೆ.ಎಸ್.ಈಶ್ವರಪ್ಪನವರು ಈಗ ದೇಶಭಕ್ತಿಯ ನಾಟಕವಾಡುತ್ತಿದ್ದು, ಅದಕ್ಕೆ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಇದೀಗ ರಾಜಕೀಯವಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟಿರುವ ಈಶ್ವರಪ್ಪನವರು ಬಿಜೆಪಿ ವರಿಷ್ಟರನ್ನು ಓಲೈಕೆ ಮಾಡಲು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸರಿಯಲ್ಲ. ಇಂದಿರಾ ಗಾಂಧಿಯವರು ದೇಶದ ಅಂದಿನ ಆರ್ಥಿಕ-ರಾಜಕೀಯ ಪರಿಸ್ಥಿತಿಯನ್ನಾಧರಿಸಿ ತುರ್ತು ಪರಿಸ್ಥಿತಿ ಹೇರಿಕೆ ಮಾಡಿದ್ದರು. ಆದರೆ, ಈಶ್ವರಪ್ಪ ತಮ್ಮ ರಾಜಕೀಯ ತೆವಲಿಗೋಸ್ಕರ ವಿದ್ಯಾರ್ಥಿಗಳಿಗೆ ‘ತುರ್ತು ಪರಿಸ್ಥಿತಿಯ ಕರಾಳ ನೆನಪು’ ಎಂದು ಹೇಳುತ್ತಾ ಇಂತಹ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಅವರಲ್ಲಿ ರಾಜಕೀಯ-ಕೋಮು ಪ್ರಚೋದನಾ ಭಾವನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಈಶ್ವರಪ್ಪನವರಿಗೆ ಈ ದೇಶದ ಬಗ್ಗೆ ನೈಜ ಕಾಳಜಿ ಇದ್ದರೆ, ಗೋದ್ರಾ ಹತ್ಯಾಕಾಂಡದಲ್ಲಿ ನಡೆದ ಸಾವಿರಾರು ಜನರ ಮಾರಣಹೋಮವನ್ನು ನೆನಪು ಮಾಡಿಕೊಳ್ಳಲಿ. ರಾಜಕೀಯ ಉದ್ದೇಶಕ್ಕಾಗಿ ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡುವುದು ಬೇಡ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಎನ್ಎಸ್ಯುಐ ನಗರ ಅಧ್ಯಕ್ಷ ಎಚ್.ಎಲ್.ರವಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್, ಜೀವನ್, ನಗರ ಪ್ರಧಾನ ಕಾರ್ಯದರ್ಶಿ ಆದಿತ್ಯ, ಸುಭಾನ್, ಸಾಗರ್, ನಂದೀಶ್, ಶ್ರೀಕಾಂತ್, ಮಂಜು, ಚಂದು ಮತ್ತಿತರರು ಇದ್ದರು.