ನರಗುಂದ: ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿರ್ಣಾಯಕ ಘಟ್ಟವಾಗಿದೆ. ಈ ಅವಧಿಯಲ್ಲಿ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ವಿದ್ಯಾವಂತರಾಬೇಕು. ಸರ್ಕಾರ ಶೈಕ್ಷಣಿಕವಾಗಿ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ಭಯವನ್ನು ಬಿಟ್ಟು ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು. ಉತ್ತಮ ಜ್ಞಾನವಿದ್ದರೂ ಕೆಲವೊಂದಿಷ್ಟು ವಿದ್ಯಾರ್ಥಿಗಳು ಭಯ ಭೀತರಾಗುವುದನ್ನು ನಿಲ್ಲಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಅವರಿಗೆ ಓದುವಂತೆ ಪ್ರೇರೇಪಿಸಬೇಕು. ಆದಷ್ಟು ಪಾಲಕರು ಮಕ್ಕಳನ್ನು ಟಿವಿ ಮತ್ತು ಮೊಬೈಲ್ನಿಂದ ದೂರವಿರಿಸಬೇಕಾಗಿದೆ. ಪ್ರತಿಶತ ೮೦ರಷ್ಟು ಮಕ್ಕಳು ಮೋಬೈಲ್ನಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮಕ್ಕಳು ಅಹಿತಕರ ಘಟನೆಗಳಿಗೆ ಮಾರು ಹೋಗಿ ಚಿಕ್ಕ ವಯಸ್ಸಿನಲ್ಲಿಯೆ ಅಪರಾಧಿಗಳಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಕ್ಕಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಬೇಕು ಎಂದರು.ಕೇವಲ ಪರೀಕ್ಷೆಗಾಗಿ ಓದದೆ ನಾಳಿನ ಉತ್ತಮ ಭವಿಷ್ಯಕ್ಕಾಗಿ ಜ್ಞಾನವನ್ನು ಪಡೆಕೊಂಡು ದೇಶಕ್ಕೆ ಏನನ್ನಾದರು ಕೊಡುಗೆಯನ್ನು ನೀಡಬೇಕು. ಪರೀಕ್ಷಾ ಕಾರ್ಯಾಗಾರಗಳಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕಠಿಣವೆನಿಸಿರುವ ವಿಷಯವನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ಸರಳಿಕರಣಗೊಳಿಸುವ ಒಂದು ವಿಶೇಷ ಯೋಜನೆಯಾಗಿದೆ. ಇದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಂಡು ಉತ್ತಮ ಅಂಕ ಗಳಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಸಮನ್ವಯಾಧಿಕಾರಿ ಬಿ.ಎಫ್. ಮಜ್ಜಗಿ, ಸಯೋಜಕ ಎಂ.ಎಚ್. ಚೂರಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ಬಿ.ಆರ್.ಪಿ ಎಂ.ಬಿ. ಪಾಟೀಲ, ಎಸ್.ಎಸ್. ಉಳ್ಳಾಗಡ್ಡಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಪಿ.ಸಿ. ಕಲಹಾಳ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಝೆಡ್.ಎಂ. ಖಾಜಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಲ್. ಮರಿಗೌಡ್ರ, ಶಿಕ್ಷಕ ಎಸ್.ಜಿ. ಮಣ್ಣೂರಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.