ಕೊರತೆಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಿ: ಡಾ.ನಾಗಲಕ್ಷ್ಮಿ ಚೌಧರಿ

KannadaprabhaNewsNetwork | Published : Jun 16, 2025 2:08 AM

ಬಾಳೆಹೊನ್ನೂರುಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭಾನುವಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆ, ಹಾಸ್ಟೆಲ್‌ಗೆ ಭೇಟಿ । ವೈದ್ಯಾಧಿಕಾರಿ ಪ್ರವೀಣ್ ಅವರಿಂದ ಮಾಹಿತಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭಾನುವಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಆರೋಗ್ಯ ಕೇಂದ್ರದಲ್ಲಿನ ಕುಂದುಕೊರತೆ, ಮೂಲಭೂತ ಸೌಕರ್ಯ ಗಳ ಕುರಿತು ವೈದ್ಯಾಧಿಕಾರಿ ಪ್ರವೀಣ್ ಅವರಿಂದ ಮಾಹಿತಿ ಪಡೆದರು. ಡಾ.ಪ್ರವೀಣ್ ಅವರು ಆರೋಗ್ಯ ಕೇಂದ್ರದ ಕುರಿತು ಮಾಹಿತಿ ನೀಡಿ, ಬಾಳೆಹೊನ್ನೂರು ಆರೋಗ್ಯ ಕೇಂದ್ರದ ವ್ಯಾಪ್ತಿ ಅತೀ ದೊಡ್ಡದಿದೆ. ಆಸ್ಪತ್ರೆ ಮೇಲ್ದರ್ಜೆಗೇರುವ ಅವಶ್ಯಕತೆ ಯಿದೆ. ಕಾಯಂ ವೈದ್ಯರು ಹಾಗೂ ಹಲವು ಸಿಬ್ಬಂದಿ ಕೊರತೆಯಿದೆ. ಡಯಾಲಿಸಿಸ್ ಕೇಂದ್ರವನ್ನು ರೋಟರಿ ಸಂಸ್ಥೆ ನಿರ್ವಹಿಸುತ್ತಿದ್ದು, ಇದೀಗ ಅದರ ನಿರ್ವಹಣೆ ಆರೋಗ್ಯ ಇಲಾಖೆ ವಹಿಸಿಕೊಳ್ಳಲು ಕೋರುತ್ತಿದೆ ಎಂದು ತಿಳಿಸಿದರು.

ಡಾ. ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿ, ಆಸ್ಪತ್ರೆ ಮೇಲ್ದರ್ಜೆ, ವೈದ್ಯರ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಪಟ್ಟಿ ಮಾಡಿ ಮನವಿಯನ್ನು ಆಯೋಗಕ್ಕೆ ಸಲ್ಲಿಸಿ, ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು. ಆಸ್ಪತ್ರೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದು ಸಿಬ್ಬಂದಿ ಶ್ರಮ ಅಪಾರವಾಗಿದೆ ಎಂದು ಶ್ಲಾಘಿಸಿದರು.ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ವಿದ್ಯಾರ್ಥಿನಿಯರು ಈ ವಯಸ್ಸಿನಲ್ಲಿ ಶಿಕ್ಷಣದತ್ತ ಮಾತ್ರ ಹೆಚ್ಚಿನ ಗಮನಹರಿಸಿ ತಮ್ಮ ಜೀವನ ಉತ್ತಮಗೊಳಿಸಿಕೊಳ್ಳಬೇಕು. ಹರೆಯದ ವಯಸ್ಸಿನಲ್ಲಿ ಮೊಬೈಲ್, ಪ್ರೀತಿ, ಪ್ರೇಮ ಮುಂತಾದ ಲೌಕಿಕ ಜೀವನಗಳ ಆಕರ್ಷಣೆ ಯುವತಿಯರಿಗೆ ಇರುತ್ತದೆ. ಆದರೆ ಇದ್ಯಾವುದಕ್ಕೂ ಗಮನಹರಿಸದೇ ಕೇವಲ ಓದಿನತ್ತ ಗಮನಹರಿಸಿ ತಮ್ಮ ಜೀವನದಲ್ಲಿ ಉತ್ತಮ ದುಡಿಮೆಗೆ ಪ್ರಯತ್ನಪಟ್ಟು ಸಾಧನೆ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ, ಹಣ, ಅಧಿಕಾರ. ಪ್ರೀತಿ, ವಿಶ್ವಾಸ ಎಲ್ಲವೂ ಗಳಿಸಲು ಸಾಧ್ಯವಿದೆ ಎಂದರು.

ಎನ್.ಆರ್.ಪುರ ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಪಿಎಸ್‌ಐ ರವೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಮಹಾಂತೇಶ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಪಂ ಸದಸ್ಯ ಬಿ.ಕೆ.ಮಧುಸೂದನ್, ಆಶಾ ನಾರಾಯಣಗೌಡ, ಪಿಸಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಸ್.ಕೌಶಿಕ್ ಪಟೇಲ್, ಪ್ರಮುಖರಾದ ರಾಜೇಶ್ ಕೇಶವತ್ತಿ, ಕಾರ್ತಿಕ್ ಹುಣಸೇಕೊಪ್ಪ, ಕಾರ್ತಿಕ್ ಕಾರ್‌ಗದ್ದೆ, ಡಾ.ಪ್ರವೀಣ್, ಪಿ.ಕೆ.ಭಗವಾನ್ ಮತ್ತಿತರರು ಹಾಜರಿದ್ದರು.೧೫ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ವೈದ್ಯಾಧಿಕಾರಿ ಡಾ.ಪ್ರವೀಣ್ ಅವರಿಂದ ಆಸ್ಪತ್ರೆ ಕುರಿತು ಮಾಹಿತಿ ಪಡೆದರು.