ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಮದ್ದೂರು ತಾಲೂಕಿನ ಮಠದ ಹೊನ್ನನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ ಕಂಡಾಯ, ಮತ್ತಿತಾಳೇಶ್ವರಸ್ವಾಮಿ, ಕಂದೇಗಾಲದ ಚನ್ನಿಗರಾಯಸ್ವಾಮಿ, ಚಿಕ್ಕದೇವಮ್ಮ, ಚಿಕ್ಕವೀರಪ್ಪ ಉತ್ಸವಮೂರ್ತಿಗಳನ್ನು ಹೂ ಹೊಂಬಾಳೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗಳವಾದ್ಯ, ತಮಟೆಯೊಂದಿಗೆ ಮೆರವಣಿಗೆ ಮೂಲಕ ಮತ್ತಿತಾಳೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಶುಭ ಲಗ್ನದಲ್ಲಿ ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಳಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.ಮಂಟೇಸ್ವಾಮಿ ಬಸವಪ್ಪ ಅವರ ನೇತೃತ್ವದಲ್ಲಿ ನಡೆದ ರಥೋತ್ಸವಕ್ಕೆ ತಹಸೀಲ್ದಾರ್ ಲೋಕೇಶ್ ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥಕ್ಕೆ ಹಣ್ಣು, ಜವನ ಎಸೆದು ಧನ್ಯತೆ ಮೆರೆದರು. ನೆರೆದಿದ್ದ ಭಕ್ತರು ದೇವರಿಗೆ ನಮಿಸಿದರು.
ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿ, ವಿಧಾನಗಳೊಂದಿಗೆ ನಡೆದವು. ಬೆಳಗಿನ ಜಾವದಿಂದಲೇ ನಾನಾ ಭಾಗಗಳಿಂದ ಬಂದಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಮತ್ತಿತಾಳೇಶ್ವರಸ್ವಾಮಿ ದೇವರ ದರ್ಶನ ಪಡೆದು, ನಂತರ ದೇವಸ್ಥಾನದ ಆವರಣದಲ್ಲಿನ ಹುತ್ತ ಹಾಗೂ ನಾಗರ ಕಲ್ಲಿಗೆ ಹಾಲು ಹಾಗೂ ತನಿ ಎರೆದು, ವಿಶೇಷ ಪೂಜೆ ಸಲ್ಲಿಸಿದರು.