ಕಾನೂರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ವಾರ್ಷಿಕ ಮಹಾ ಸಭೆ
ಕಾನೂರು ಗ್ರಾಮ ಪಂಚಾಯಿತಿ ಮಟ್ಟದ ಅರ್ಹ ಮಹಿಳೆಯರು ಕಾನೂರು ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಬೇಕು ಎಂದು ಎನ್.ಆರ್.ಎಲ್.ಎಂ.ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಮಣ್ಯ ಕರೆ ನೀಡಿದರು.
ಕಾನೂರು ಗ್ರಾಪಂನಲ್ಲಿ ನಡೆದ ಕಾನೂರು ಸಂಜೀವಿನಿ ಗ್ರಾಪಂ ಮಟ್ಟದ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಒಕ್ಕೂಟ ಅನೇಕ ಗುರಿ ಹೊಂದಿದ್ದು ಸಂಜೀವಿನಿ ಒಕ್ಕೂಟದಿಂದ ಸಿಗುವ ಸಾಲ, ಅನುದಾನ ಹಾಗೂ ಇತರ ಸೌಲಭ್ಯವನ್ನು ಸ್ವಸಹಾಯ ಸಂಘದ ಸದಸ್ಯರು ಉಪಯೋಗಿಸಿಕೊಳ್ಳಬೇಕು. ಪ್ರತಿ ವರ್ಷ ಆಂತರಿಕ ಮತ್ತು ಶಾಸನಬದ್ಧ ಲೆಕ್ಕ ಪರಿಶೋಧನೆ ಮಾಡಿಸಬೇಕು. ವಾರ್ಷಿಕ ಮಹಾ ಸಭೆ ಏರ್ಪಡಿಸಿ ಒಕ್ಕೂಟದ ಆದಾಯ ಹಾಗೂ ವೆಚ್ಚಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ಪಡೆಯಬೇಕು. ಸಂಘದ ಸದಸ್ಯರು ಗ್ರಾಮ ಸಭೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದುಕೊಳ್ಳಿ ಎಂದರು.ಕಟ್ಟಿನಮನೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಡಾ.ವಿನಯ ಮಾದಕ ಮುಕ್ತ ಕರ್ನಾಟಕ ಅಭಿಯಾನ ದಡಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಿಕ ನಾಗೇಂದ್ರಪ್ಪ ಮಕ್ಕಳು ಹಾಗೂ ಮಹಿಳೆಯರಿಗೆ ಬೇಕಾಗುವ ಪೌಷ್ಠಿಕ ಆಹಾರ, ಆರೋಗ್ಯ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.