ಕನ್ನಡಪ್ರಭ ವಾರ್ತೆ ಶಿರಸಿ
ಚಾತುರ್ಮಾಸ್ಯದ ಸಂದರ್ಭ ಜಪ-ಅರ್ಚನೆ, ಪೂಜೆ, ಅಭಿಷೇಕ ಮುಂತಾದ ಸೇವೆಗಳನ್ನು ಶ್ರದ್ಧೆಯಿಂದ ಸಲ್ಲಿಸಿದ ಮೆಣಸಿ ಸೀಮೆಯ ಭಕ್ತಜನರು ಹಾಗೂ ಮಾತೆಯರನ್ನು ಉದ್ದೇಶಿಸಿ ಆಶೀರ್ವಚನ ನುಡಿದರು. ಮನುಷ್ಯನ ಜೀವನದ ಯಶಸ್ಸಿಗೆ ಕಾರಣವೇನು ಎಂಬ ಮೂಲಭೂತ ಮತ್ತು ಗಂಭೀರ ಪ್ರಶ್ನೆಗೆ ಶ್ರೀಗಳು ಶಾಸ್ತ್ರಧಾರಿತವಾಗಿ ವಿವರಿಸಿದ ಶ್ರೀಗಳು, ಮಾನವ ಜೀವನದಲ್ಲಿ ಯಶಸ್ಸು ಹೇಗೆ ದೊರೆಯುತ್ತದೆ ಎಂಬ ವಿಷಯದಲ್ಲಿ ಸಮಾಜದಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಕಾಣಬಹುದಾಗಿದೆ. ಅವು ಪುರುಷ ಪ್ರಯತ್ನ ಮತ್ತು ದೈವಾನುಗ್ರಹ ಎಂದರು.
ಸತತ ಪ್ರಯತ್ನಶೀಲನಾದವನಿಗೆ ಅಂದರೆ ಪುರುಷಸಿಂಹನಿಗೆ ಯಶಸ್ಸೆಂಬ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ. ಎಲ್ಲವೂ ದೈವಬಲದಿಂದಲೇ ಸಿಗಬೇಕು ಎಂದು ಹೇಳುತ್ತಾರೆ. ಆದ್ದರಿಂದ ದೈವವನ್ನು ಬದಿಗೊತ್ತಿ ನಿನ್ನ ಆತ್ಮಶಕ್ತಿಯಿಂದ ಪುರುಷಪ್ರಯತ್ನ ಮಾಡು; ಶ್ರಮವಹಿಸಿ ಪ್ರಯತ್ನಿಸಿದ ಮೇಲೂ ಕಾರ್ಯ ಸಿದ್ಧಿಸದಿದ್ದರೆ ಅದರ ಬಗ್ಗೆ ಬೇಸರಿಸುವ ಅಗತ್ಯವಿಲ್ಲ. ಇದು ಒಂದು ದೃಷ್ಟಿಕೋನ ಎಂದು ವಿವರಿಸಿದರು.ಇದಕ್ಕೆ ವಿರುದ್ಧವಾಗಿ, ಕೇವಲ ಸ್ವಪ್ರಯತ್ನದಿಂದ ಏನೂ ಸಾಧ್ಯವಿಲ್ಲ, ಭಗವಂತನ ಇಚ್ಛೆ ಅಥವಾ ದೈವಬಲವಿದ್ದರೆ ಮಾತ್ರ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಪ್ರತಿಪಾದಿಸುವ ಮತ್ತೊಂದು ವರ್ಗವಿದೆ ಎಂದರು.
ಮನುಷ್ಯ ಪ್ರಯತ್ನಕ್ಕೆ ದೈವಕೃಪೆ ಮೇಳೈಸಿದಾಗ ಮಾತ್ರ ಸತ್ಫಲ ದೊರೆಯುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು. ಆದ್ದರಿಂದ ಎಲ್ಲರೂ ಮೂಲಸತ್ವವಾದ ಪರಮಾತ್ಮನನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಶಾಸ್ತ್ರೋಕ್ತವಾದ ಕ್ರಮಬದ್ಧ ಪ್ರಯತ್ನ ಹಾಗೂ ಈಶ್ವರ ಪ್ರಾರ್ಥನೆಗಳ ಮೂಲಕ ಪ್ರಾರಬ್ಧವನ್ನು ದಾಟಿ ಜೀವನದಲ್ಲಿ ವಿಜಯವನ್ನು ಸಾಧಿಸಬೇಕು ಎಂದರು.