ಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಮೀಡಿಯಾ ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಸಾಲ ಸುಮಾರು ₹54 ಲಕ್ಷ ಕೋಟಿ ಇತ್ತು. ಇದು ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗಿನ ಅಂಕಿ-ಅಂಶ. ಆದರೆ, ಬಿಜೆಪಿ ಸರ್ಕಾರದ ಎರಡು ಆಡಳಿತಾವಧಿಯಲ್ಲಿ ಭಾರತದ ಸಾಲ 2014ಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಇನ್ನು ಅಭಿವೃದ್ಧಿ ವಿಚಾರದಲ್ಲಿ ಅಂಬಾನಿ-ಆದಾನಿಯಂಥ ಕೆಲವೇ ಕೆಲವು ವ್ಯಕ್ತಿಗಳು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆಯೇ ಹೊರತು ಭಾರತದ ಬಡತನ, ನಿರುದ್ಯೋಗ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ ಎಂಬುದಕ್ಕೆ ಗರೀಬ್ ಕಲ್ಯಾಣ ಯೋಜನೆಯಡಿ ನೀಡುವ ಪಡಿತರದಿಂದ ಗೊತ್ತಾಗುತ್ತದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ, ಬಿಜೆಪಿ ಹೆಚ್ಚು ಭ್ರಷ್ಟವಾದರೆ, ಕಾಂಗ್ರೆಸ್ನಲ್ಲೂ ಭ್ರಷ್ಟಾಚಾರವಿದೆ. ಬಿಜೆಪಿಗೆ ಹೋಲಿಸಿದರೆ ಕಡಿಮೆಯಷ್ಟೇ. ಚುನಾವಣಾ ಬಾಂಡ್ನಿಂದ ಅವರ ಬಣ್ಣ ಬಯಲಾಗಿದೆ. ಹಾಗಾಗಿ ದೇಶದ ಜನರಿಗೆ ಬಿಜೆಪಿ-ಕಾಂಗ್ರೆಸ್ ಬದಲಾಗಿ ಮತ್ತೊಂದು ಸಾರ್ವಜನಿಕ ಶಕ್ತಿಯ ಅಗತ್ಯವಿದೆ ಎಂದರು.ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಶರಣು ಗಡ್ಡಿ ಸ್ಪರ್ಧಿಸಲಿದ್ದಾರೆ. ಇವರು ಸಾರ್ವಜನಿಕ ಬದುಕಿನಲ್ಲಿ ಅತ್ಯುತ್ತಮ ಹುದ್ದೆಯಲ್ಲಿದ್ದರೂ ಅದನ್ನು ತೊರೆದು ಜನಪರ ಹೋರಾಟಗಳ ಮೂಲಕ ಪಕ್ಷ ಬಲಪಡಿಸುವ ಆ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಶರಣು ಗಡ್ಡಿ, ಮುಖಂಡರಾದ ಶರಣಪ್ಪ ಉದ್ಬಾಳ, ಶರಣು ಪಾಟೀಲ, ಗಂಗರಾಜ ಅಳ್ಳಳ್ಳಿ ಉಪಸ್ಥಿತರಿದ್ದರು.