ಲೀಡ್‌.. ನಗರಕ್ಕೆಎರಡು ವರ್ಗಗಳ ಸಂಘರ್ಷ ಕೊನೆಗೆ ಸಮಾಜವಾದಿ ರೂಪ ತಾಳುತ್ತದೆ: ಬಿ. ರವಿ

KannadaprabhaNewsNetwork | Published : Feb 22, 2024 1:49 AM

ಸಾರಾಂಶ

ಮಾರ್ಕ್ಸ್ ವಾದ ಸದಾ ವಿಕಸಿತವಾಗುವ ವಿಜ್ಞಾನದಂತೆ. ಇದನ್ನು ಕಾರ್ಲ್ಮಾರ್ಕ್ಸ್ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದ್ದಾರೆ. ಶಿವದಾಸ್‌ ಘೋಷ್‌ ಅವರು ಈ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಮಾರ್ಕ್ಸ್ ವಾದದಿಂದ ಪ್ರಭಾವಿತರಾದವರು. ದೇಶದ ಜನತೆಯ ವಿಮುಕ್ತಿಗಾಗಿ ಕ

ಕನ್ನಡಪ್ರಭ ವಾರ್ತೆ ಮೈಸೂರು

ಎರಡು ವರ್ಗಗಳ ನಡುವಿನ ಸಂಘರ್ಷ ಅಂತಿಮವಾಗಿ ಸಮಾಜವಾದಿ ರೂಪ ತಾಳುತ್ತದೆ ಎಂದು ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ. ರವಿ ತಿಳಿಸಿದರು.

ನಗರದ ಎಸ್.ಯು.ಸಿ.ಐ ಕಚೇರಿಯಲ್ಲಿ ಬುಧವಾರ ನಡೆದ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕ ಕಾಮ್ರೇಡ್ ಶಿವದಾಸ್‌ ಘೋಷ್‌ ಬರೆದ ನಾಲ್ಕು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾರ್ಕ್ಸ್ ವಾದ ಸದಾ ವಿಕಸಿತವಾಗುವ ವಿಜ್ಞಾನದಂತೆ. ಇದನ್ನು ಕಾರ್ಲ್ಮಾರ್ಕ್ಸ್ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದ್ದಾರೆ. ಶಿವದಾಸ್‌ ಘೋಷ್‌ ಅವರು ಈ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಮಾರ್ಕ್ಸ್ ವಾದದಿಂದ ಪ್ರಭಾವಿತರಾದವರು. ದೇಶದ ಜನತೆಯ ವಿಮುಕ್ತಿಗಾಗಿ ಕಮ್ಯೂನಿಸ್ಟ್ ಪಕ್ಷ ಸ್ಥಾಪಿಸಿದರು. ಜೊತೆಗೆ ಮಾರ್ಕ್ಸ್ವಾದ, ಲೆನಿನ್ ವಾದವನ್ನು ತಮ್ಮ ವಿಚಾರಗಳಿಂದ ಮತ್ತಷ್ಟು ಶ್ರೀಮಂತಗೊಳಿಸಿದ್ದಾಗಿ ಅವರು ಹೇಳಿದರು.

ವಿವಿಧ ವಿಷಯಗಳನ್ನು ವಿಶ್ಲೇಷಿಸುತ್ತ ಅವರು ಅನೇಕ ಪುಸ್ತಕ ಬರೆದಿದ್ದಾರೆ. ಅವರ ವಿಚಾರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಅವರು ಬರೆದ ಅನೇಕ ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಿಲಾಗಿದೆ ಎಂದು ಅವರು ಹೇಳಿದರು.

ನವೆಂಬರ್ ಮಹಾಕ್ರಾಂತಿಯ ಪತಾಕೆ ಎತ್ತಿ ಹಿಡಿಯಿರಿ ಪುಸ್ತಕದಲ್ಲಿ ವಿಶ್ವದ ರೂಪುರೇಷೆಯನ್ನೇ ಬದಲಿಸಿದ, ದುಡಿಯುವ ಜನತೆಗೆ ಆಶಾಕಿರಣವಾಗಿ ಹೊರಹೊಮಿದ ಸೋವಿಯತ್ ಸಮಾಜವಾದಿ ಸಮಾಜವನ್ನು ಸೃಷ್ಟಿಸಿದ ಮಹಾನ್ ನವೆಂಬರ್ ಕ್ರಾಂತಿಯ ಬಹುಮುಖ್ಯ ಪಾಠಗಳನ್ನು ಈ ಚರ್ಚೆಯಲ್ಲಿ ಶಿವದಾಸ್ ಘೋಷ್ ವಿವರಿಸಿದ್ದಾರೆ.

ವೈಜ್ಞಾನಿಕ ದ್ವಂದ್ವಾತ್ಮಕ ವಿಧಾನಕ್ರಮವೇ ಮಾರ್ಕ್ಸ್ವಾದಿ ವಿಜ್ಞಾನ ಕೃತಿಯಲ್ಲಿ ಮಾರ್ಕ್ಸ್ವಾದವೇ ವಿಜ್ಞಾನ ಎನ್ನುವ ಮತ್ತು ಅದರ ತಿರುಳು ವೈಜ್ಞಾನಿಕ ವಿಧಾನಕ್ರಮವೆನ್ನುವ ಮೂಲಭೂತ ಅಂಶವನ್ನು ಈ ಚರ್ಚೆಯಲ್ಲಿ ಶಿವದಾಸ್ ಘೋಷ್ ತೋರಿಸಿಕೊಟ್ಟಿದ್ದಾರೆ ಎಂದು ಬಿ. ರವಿ ವಿವರಿಸಿದರು.

ಚೆಕೊಸ್ಲೋವಾಕಿಯಾದಲ್ಲಿ ಸೋವಿಯತ್ ಮಿಲಿಟರಿ ಹಸ್ತಕ್ಷೇಪ ಮತ್ತು ಪರಿಷ್ಕರಣವಾದ ಪುಸ್ತಕದಲ್ಲಿ ಚೆಕೊಸ್ಲೋವಾಕಿಯಾದಲ್ಲಿ ಸೋವಿಯತ್ ಒಕ್ಕೂಟವು ನಡೆಸಿದ ಸೈನಿಕ ಕಾರ್ಯಾಚರಣೆಯನ್ನು ಗಮನಿಸಿ ಆ ವಿದ್ಯಮಾನದ ಹಿನ್ನೆಲೆಯನ್ನು ವಿಶ್ಲೇಷಿಸಿದ್ದಾರೆ. ಭಾರತದಲ್ಲಿ ಜನ ಹೋರಾಟಗಳ ಸಮಸ್ಯೆಗಳು ಕೃತಿಯಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿಯ ಹೇರಿಕೆಯ ಕೊಂಚ ಸಮಯ ಮುಂಚಿತವಾಗಿ ನಮ ದೇಶದಲ್ಲಿದ್ದ ರಾಜಕೀಯ ಪರಿಸ್ಥಿತಿಯನ್ನು ಮತ್ತು ಅದನ್ನು ಇಂದಿನ ತಲೆಮಾರು ಅರಿತುಕೊಳ್ಳುವುದರ ಅಗತ್ಯ ಮತ್ತು ಅದರ ಪ್ರಸ್ತುತತೆಯನ್ನು ಈ ಚರ್ಚೆಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.

ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಚಂದ್ರಶೇಖರ ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಬಂಡವಾಳಶಾಹಿ ವ್ಯವಸ್ಥೆಯು ತೀವ್ರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇಡೀ ಸಂಪತ್ತು ಇಂದು ಕೆಲವೇ ಕೆಲವು ಶ್ರೀಮಂತ ಬಂಡವಾಳಿಗರ ಕೈವಶವಾಗಿದೆ. ಇದು ಇಂದಿನ ಸಮಸ್ಯೆಗೆ ಕಾರಣ. ಈ ಅಸಮಾನತೆ ಹೋಗಲಾಡಿಸಲು ರೈತರು, ಕಾರ್ಮಿಕರು ತಮ ಹೋರಾಟಗಳನ್ನು ಕೇವಲ ಆರ್ಥಿಕ ಬೇಡಿಕೆಗಳಿಗೆ ಸಿಮೀತಗೊಳಿಸದೇ ಸಮ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲು ಮುಂದಾಗಬೇಕು ಎಂದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಸ್. ಸಂಧ್ಯಾ, ಜಿ.ಎಸ್. ಸೀಮಾ, ಹರೀಶ್, ಪಕ್ಷದ ಕಾರ್ಯಕರ್ತರಾದ ಬಸವರಾಜು, ಸುಮಾ, ಚಂದ್ರಕಲಾ, ಸುಭಾಷ್, ನೀತು, ಮುದ್ದುಕೃಷ್ಣ, ಚೈತ್ರಾ, ನಿತಿನ್ ಮೊದಲಾದವರು ಇದ್ದರು.

Share this article