ವಿದ್ಯಾರ್ಥಿಗಳು ಸಾಧನೆಗೆ ದೊಡ್ಡ ಗುರಿ ಹೊಂದಬೇಕು: ಸುಧಾಕರ್‌

KannadaprabhaNewsNetwork | Published : Oct 2, 2024 1:03 AM

ನಗರದ ಕೆ.ಆರ್‌.ಪುರದ ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್‌ ತರಗತಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಕೆ.ಆರ್‌.ಪುರದ ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯದ 2024-25ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್‌ ತರಗತಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಚಾಲನೆ ನೀಡಿದರು.

ಕಾಲೇಜು ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗುವ ಮೂಲಕ ಬಿಇ ತರಗತಿಗಳಿಗೆ ಸಚಿವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಧನೆಗೆ ದೊಡ್ಡ ಗುರಿ ಹೊಂದಿರಬೇಕು. ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಣೆ, ಹೊಸ ಹೊಸ ಅನ್ವೇಷಣೆಗೆ ಸಾಕಷ್ಟು ಅವಕಾಶಗಳಿವೆ. ನಾಡು, ದೇಶದ ಅಭಿವೃದ್ಧಿಗೆ ಪೂರಕವಾದ ಹಾಗೂ ಪೋಷಕರು ಹೆಮ್ಮೆ ಪಡುವಂತಹ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕೇಂಬ್ರಿಡ್ಜ್ ತಾಂತ್ರಿಕ ವಿದ್ಯಾಲಯವು ಅತ್ಯುತ್ತಮ ಮಟ್ಟದ ಮೂಲಸೌಕರ್ಯಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಿಲ್ಲ. ಕಾಲೇಜಿನ ಆವರಣದಲ್ಲೇ ಹಲವು ಸಂಸ್ಥೆಗಳು ತಮ್ಮ ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದ್ದು, ಸಂಶೋಧನಾ ನಿರತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸುಗಮ ದಾರಿಯಾಗಿದೆ ಎಂದರು.

ಕೇಂಬ್ರಿಡ್ಜ್‌ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್‌ ಮಾತನಾಡಿ, ತಮ್ಮ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದ ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಾಲೇಜಿನ ಸೌಲಭ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಬುದ್ದಿಶಕ್ತಿ ಹೆಚ್ಚಳ, ಸಂಶೋಧನೆ, ಪ್ರಯೋಗಗಳಿಗೆ ಬಳಿಸಿಕೊಳ್ಳಬೇಕು. ಕಠಿಣ ಪರಿಶ್ರಮ, ಗುರಿ ಸಾಧಿಸುವ ಛಲ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಸಲಹೆ ನೀಡಿದರು.

ಜಾಗತಿಕ ವಿಶ್ಲೇಷಕ, ಕಥೆಗಾರ ಆನಂದ್‌ ಮುನ್ಷಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಇಂದುಮತಿ, ಸಂಸ್ಥೆಯ ಸಿಇಒ ನಿತಿನ್‌ ಮೋಹನ್‌ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.