ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಣ್ಣನೆ । ಶಾಸಕರ ಭವನದ ಮುಂಭಾಗದಲ್ಲಿ ಡಿ.ಸುಧಾಕರ್ಗೆ ನುಡಿನಮನಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರದ ಶಾಸಕರ ಭವನದ ಮುಂಭಾಗದಲ್ಲಿ ಶನಿವಾರ ಆಯೋಜಿಸಿದ್ದ ಡಿ.ಸುಧಾಕರ್ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರಂಭದಲ್ಲಿ ನಾನು ರಾಜಕಾರಣಕ್ಕೆ ಬರಬೇಕು ಎಂಬ ನಿರ್ಧಾರಕ್ಕೆ ಬಂದು ಕ್ಷೇತ್ರದಲ್ಲಿ ಓಡಾಡುವಾಗ ಸುಧಾಕರ್ ಅವರ ಒಡನಾಟ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೂ ಅವರ ನನ್ನ ಸಂಬಂಧ ಸಹೋದರರ ರೀತಿಯಂತಿತ್ತು.ಅವರ ರಾಜಕೀಯ ಚಾಣಾಕ್ಷತನದಿಂದಲೇ ರಾಜಕಾರಣದಲ್ಲಿ ಬೆಳೆದು ಬಂದವರು. ಅವರ ಹಾಸ್ಯದ ಮಾತುಗಳು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದವು. ಅವರ ಅನಾರೋಗ್ಯ ಸಂಬಂಧ ಸದಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಅವರ ಆರೋಗ್ಯ ಸುಧಾರಣೆಗೆ ಶ್ರಮಿಸಿದ್ದೇವೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಬದುಕಿಸಲು ವೈದ್ಯರು ಹರಸಾಹಸಪಟ್ಟರು ಎಂದು ವಿವರಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸುಧಾಕರ್ ಜನಸೇವಕನಾಗಿ ಜನರಿಗೆ ಹೇಗೆ ಉಪಯೋಗ ಮಾಡಬೇಕು ಎಂಬುದನ್ನು ಅರಿತವರು. ಚಿಕ್ಕಪ್ಪನವರ ಗರಡಿಯಲ್ಲಿ ಬೆಳೆದು ಈ ಮಟ್ಟಕ್ಕೆ ಬಂದವರು. ದೇವರಾಜು ಅರಸು ಅವರ ಅಭಿಮಾನಿಯಾಗಿ ಸಾಮಾಜಿಕ ನ್ಯಾಯದ ಪರವಾಗಿದ್ದವರು. ಅದಕ್ಕಾಗಿಯೇ ಅವರು ಸಮಾಜದಲ್ಲಿ ನಾಯಕರಾಗಿ ಹೊರಹೊಮ್ಮಿದ್ದರು.
ಮಹಿಳಾ ಮತಗಳನ್ನು ಮತಬ್ಯಾಂಕ್ ಮಾಡಿಕೊಂಡಿದ್ದು ರಾಜಕೀಯವಾಗಿ ಬೆಳೆಯಲು ಕಾರಣವಾಗಿತ್ತು ಎಂದರು.
ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಸುಧಾಕರ್ ಕುಟುಂಬಕ್ಕೂ ನಮಗೂ ಮೂವತ್ತು ವರ್ಷಗಳ ಅನುಬಂಧ ಇತ್ತು. ಮಂತ್ರಿಯಾಗಿದ್ದಾಗ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಅವರು ಹೊಂದಿದ್ದರು. ಸುಧಾಕರ್ ಕುಟುಂಬದ ಸದಸ್ಯರು ಹಿರಿಯೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ, ನಾವೆಲ್ಲಾ ಗೆಲ್ಲಿಸುವ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಟಿ.ಪ್ರಭುದೇವ್ ಮಾತನಾಡಿ, ಪ್ರತಿಯೊಂದು ಜನಾಂಗವನ್ನು ತೆಕ್ಕೆಯಲ್ಲಿಟ್ಟುಕೊಂಡು ರಾಜಕಾರಣ ಮಾಡಿದವರು ಎಂದರು.
ಕಾಂಗ್ರೆಸ್ ಮುಖಂಡ ಸಿ.ವೀರಭದ್ರಬಾಬು, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ರಾಜ್ಯ ಕಾಂಗ್ರೆಸ್ ಕುಶಲಕರ್ಮಿಗಳ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಜಿ.ಟಿ. ಬಾಬು ರೆಡ್ಡಿ, ಗದ್ದಿಗೆ ತಿಪ್ಪೇಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾಬಾಯಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ಕೆಡಿಪಿ ಸದಸ್ಯ ರಂಗಸ್ವಾಮಿ, ಸಂಪತ್ ಕುಮಾರ್, ಮಹಡಿ ಶಿವಮೂರ್ತಿ, ಪರಶುರಾಂಪುರ ನಾಗರಾಜ್, ಜಯವೀರಾಚಾರಿ, ಟಿ.ರವಿಕುಮಾರ್, ಡಿ.ಎನ್. ಮೈಲಾರಪ್ಪ ಸೇರಿದಂತೆ ಸುಧಾಕರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಇದ್ದರು. ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಜಿ.ಟಿ. ಶಶಿಧರ್ ಕಾರ್ಯಕ್ರಮ ನಡೆಸಿಕೊಟ್ಟರು.