ಸುಳ್ಯ: ತಡೆಗೋಡೆ ಕುಸಿತ, ಪವರ್‌ಮ್ಯಾನ್‌ಗೆ ಗಾಯ

KannadaprabhaNewsNetwork | Published : May 27, 2025 12:37 AM
ಸುಳ್ಯ ತಾಲೂಕಿನಲ್ಲಿ ಮಳೆಯ ಮಧ್ಯೆ ಕಲ್ಲುಗುಂಡಿ ಸಂಪಾಜೆಯ ಕಡಪಾಲದ ಎಂಬಲ್ಲಿ ವಿದ್ಯುತ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭ ಪವರ್ ಮ್ಯಾನ್ ನವೀನ್ ಎಂಬವರಿಗೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗಳಾಗಿವೆ.
Follow Us

ಕನ್ನಡಪ್ರಭ ವಾರ್ತೆ ಸುಳ್ಯ

ಸುಳ್ಯ ತಾಲೂಕಿನಲ್ಲಿ ಸೋಮವಾರವೂ ಬಿರುಸಿನ ಮಳೆ ಮುಂದುವರಿದಿದ್ದು ಸುಳ್ಯದ ವೆಂಟೆಂಡ್ ಡ್ಯಾಂನಿಂದ ನೀರು ಬಿಡುಗಡೆಗೊಳಿಸಲಾಗಿದೆ.

ಆಲೆಟ್ಟಿಯ ನಾಗಪಟ್ಟಣದಲ್ಲಿರುವ ಕಿಂಡಿ ಅಣೆಕಟ್ಟಿನಿಂದ ನೀರಿನ ಹರಿವು ಆರಂಭವಾಗಿದೆ. ಮುಂಗಾರು ಪ್ರಾರಂಭಕ್ಕೆ ಮುಂಚಿತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟಿನ ಮೇಲಿನ ಭಾಗದಲ್ಲಿ ನೀರಿನ ಶೇಖರಣೆ ಹೆಚ್ಚಾಗಿದ್ದುದರಿಂದ ಅಣೆಕಟ್ಟಿನ ಗೇಟು ತೆರದು ನೀರಿನ ಹರಿವು ಬಿಡಲಾಗಿದೆ.

ಅಣೆಕಟ್ಟಿನಲ್ಲಿ ಒಟ್ಟು ೧೪ ಗೇಟುಗಳಿದ್ದು ಈಗಾಗಲೇ ೬ ಬಾಗಿಲುಗಳನ್ನು ಮೇಲೆತ್ತಲಾಗಿದ್ದು ಸಂಪೂರ್ಣ ಪ್ರಮಾಣದಲ್ಲಿ ಕೆಳಭಾಗಕ್ಕೆ ನೀರನ್ನು ಬಿಡಲಾಯಿತು. ಈ ಬಾರಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಶೇಖರಣೆಯಾಗಿದ್ದು ಬೇಸಿಗೆ ಕಾಲದಲ್ಲಿ ನೀರಿನ ಅಭಾವ ತಲೆದೋರಲಿಲ್ಲ.ವಿದ್ಯುತ್ ಕಂಬಕ್ಕೆ ಹಾನಿ: ಉಬರಡ್ಕ ಮಿತ್ತೂರು ಗ್ರಾಮದ ಬಳ್ಳಡ್ಕದಲ್ಲಿ ಮರ ಬಿದ್ದು ವಿದ್ಯುತ್ ತಂತಿ, ಕಂಬ ಹಾನಿಗೊಂಡಿದೆ. ಬಳಿಕ ಸ್ಥಳೀಯರೆಲ್ಲ ಸೇರಿ ಮೆಷಿನ್ ಮೂಲಕ ಮರ ತುಂಡರಿಸಿ, ತೆರವು ಕಾರ್ಯ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರೆಂದು ತಿಳಿದುಬಂದಿದೆ.ಕಂಪೌಂಡ್‌ ಕುಸಿತ: ದುಗ್ಗಲಡ್ಕದ ಕೊಳೆಂಜಿಕೋಡಿಯಲ್ಲಿ ಮನೆ ಬದಿಯ ಕಾಂಪೌಂಡ್ ಕುಸಿದು ಅಪಾರ ನಷ್ಟ ಸಂಭವಿಸಿದೆ.ಕೊಳೆಂಜಿಕೋಡಿ ಅಬ್ದುಲ್ಲ ಎಂಬವರ ಮನೆ ಬದಿಯ ಸುಮಾರು ೨೦ ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮವಾಗಿ ಅಪಾರ ನಷ್ಟ ಸಂಭವಿಸಿದೆ. ಕಾಂಪೌಂಡ್ ನ ಕಲ್ಲು, ಮಣ್ಣು ಕೆಳಗಿನ ಮನೆಯ ಹನೀಫ್ ಎಂಬವರ ಮನೆಯ ಮೇಲೆ ಬಿದ್ದುದರಿಂದ ಆ ಮನೆಗೂ ಹಾನಿಯಾಗಿದೆ. ಹನೀಫ್ ಮನೆಯ ಕಿಟಕಿಯ ಗಾಜು ಹುಡಿಯಾಗಿದ್ದು, ಗೋಡೆಗೂ ಹಾನಿಯಾಗಿದೆ.ಅಡಕೆ ಮರ ನಷ್ಟ: ಜಾಲ್ಸೂರು ಗ್ರಾಮದ ಕುಕ್ಕನ್ನೂರು ಚಾವಡಿ ಸಮೀಪ ನಿವಾಸಿ ಗಣೇಶ್ ರೈ ತೋಟದ ಪಕ್ಕದ ಜಮೀನಿನಲ್ಲಿದ್ದ ದೊಡ್ಡ ಗಾತ್ರದ ಚೇರೆ ಮರ ಬುಡ ಸಮೇತ ಮಗುಚಿ ಬಿದ್ದು ಸುಮಾರು ೩೫ ಕ್ಕೂ ಅಧಿಕ ಅಡಕೆ ಮರ ನಷ್ಟ ವಾಗಿರುವುದಾಗಿ ತಿಳಿದುಬಂದಿದೆ.ಪವರ್ ಮ್ಯಾನ್ ಗೆ ಗಾಯ: ಮಳೆಯ ಮಧ್ಯೆ ಕಲ್ಲುಗುಂಡಿ ಸಂಪಾಜೆಯ ಕಡಪಾಲದ ಎಂಬಲ್ಲಿ ವಿದ್ಯುತ್ ಲೈನ್ ಸರಿ ಮಾಡುತ್ತಿದ್ದ ಸಂದರ್ಭ ಪವರ್ ಮ್ಯಾನ್ ನವೀನ್ ಎಂಬವರಿಗೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗಳಾಗಿವೆ.