ಸುಳ್ಯ: ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಫಾರಸಿನ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನದ ೨೦ ಲಕ್ಷ ರು. ವೆಚ್ಚ ಹಾಗೂ ಸ್ಥಳೀಯ ನಗರ ಪಂಚಾಯಿತಿ ಸದಸ್ಯರ ನಿಧಿಯಿಂದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ರಸ್ತೆ ಕಾಂಕ್ರಿಟೀಕರಣ ಪೂರ್ಣಗೊಂಡಿದೆ. ಆದರೆ, ಎರಡು ದಿನ ಎರಡು ಪ್ರತ್ಯೇಕ ಕಾರ್ಯಕ್ರಮಗಳ ಮೂಲಕ ಉದ್ಘಾಟನೆ ನಡೆದು ಸುದ್ದಿಯಾಗಿದೆ. ಭಾನುವಾರ ಸಂಜೆ ಶಾಸಕರ ನೇತೃತ್ವದಲ್ಲಿ ಉದ್ಘಾಟನೆ ನಡೆದರೆ, ಸೋಮವಾರ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರ ನೇತೃತ್ವದಲ್ಲಿ ನಡೆಯಿತು.
ಆದರೆ ಭಾನುವಾರ ಬೆಳಗ್ಗೆ ದೇಗುಲದ ವಾಟ್ಸಾಪ್ ಗ್ರೂಪಿನಲ್ಲಿ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 15.6.26ರಂದು 10.30ಕ್ಕೆ ನಿಗದಿಯಾಗಿದ್ದು, ಶಾಸಕರಿಗೆ ತುರ್ತು ಕಾರ್ಯಕ್ರಮ ನಿಗದಿಯಾಗಿರುವುದರಿಂದ ದಿನಾಂಕ. 14.6.2026 ರ ಭಾನುವಾರ ಸಂಜೆ 4ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ಹೊರಬಿತ್ತು. ಇದಾದ ಸ್ವಲ್ಪ ಹೊತ್ತಿನಲ್ಲಿ ಪತ್ರಕರ್ತರನ್ನು ಸಂಪರ್ಕಿಸಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡರು, ಕಾರ್ಯಕ್ರಮವನ್ನು ಶಾಸಕರ ಗಮನಕ್ಕೆ ತಂದು ಜೂ.15ರಂದು ಉದ್ಘಾಟನೆ ಮಾಡುವುದೆಂದು ತೀರ್ಮಾನಿಸಲಾಗಿತ್ತು. ಕಾರ್ಯಕ್ರಮವು ನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದರು.ಶಾಸಕರಿಂದ ಉದ್ಘಾಟನೆ:
ಭಾನುವಾರ ಸಂಜೆ ಉದ್ಘಾಟನೆ ನೆರವೇರಿಸಿದ ಭಾಗೀರಥಿ ಮುರುಳ್ಯ ಅವರು, ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನಗರ ಪಂಚಾಯಿತಿ ನಿಕಟಪೂರ್ವ ಸದಸ್ಯ ಪ್ರವಿತಾ ಪ್ರಶಾಂತ್, ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಕಾಯರ್ತೋಡಿ ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಬ್ರಹ್ಮಕಲಶ ಸಮಿತಿ ಅಧ್ಯಕ್ಷರಾಗಿದ್ದ ಕೃಷ್ಣ ಕಾಮತ್, ರಸ್ತೆಗೆ ಈ ಹಿಂದೆ ಸ್ಥಳ ದಾನ ಮಾಡಿದ ದೆಂಗೋಡಿ ಕುಟುಂಬಸ್ಥರು ಮತ್ತು ಅಳಿಕೆ ಮಜಲು ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಸೇರಿದ್ದರು.ಅಭಿವೃದ್ಧಿಯಲ್ಲಿ ಕಾಂಪಿಟೇಶನ್ ಬೇಕು, ಕಾರ್ಯಕ್ರಮದಲ್ಲಿ ಅಲ್ಲ
ಈ ವೇಳೆ ಮಾತನಾಡಿದ ಎಂ. ವೆಂಕಪ್ಪ ಗೌಡರು, ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕ್ಷೇತ್ರದ ಶಾಸಕರಾದ ಭಾಗೀರಥಿಯವರ ಶಿಫಾರಸಿನ ಮೇರೆಗೆ ೨೫ ಕೋಟಿ ರು. ಬಿಡುಗಡೆಗೊಂಡಿದ್ದು, ಆ ಅನುದಾನದ ೨೦ ಲಕ್ಷ ರು. ವೆಚ್ಚದಲ್ಲಿ ಹಾಗೂ ಸ್ಥಳೀಯ ವಾರ್ಡ್ ಸದಸ್ಯರ ಪಂಚಾಯಿತಿ ಅನುದಾನ ೪ ಲಕ್ಷ ರು. ಹೀಗೆ ೨೪ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಯಾಗಿದೆ. ಈ ರಸ್ತೆಗೆ ಪಿ.ಎ. ಮಹಮ್ಮದ್ ಅವರು ೩ ಫೀಟ್ ಜಾಗ ಹಿಂದೆಯೇ ನೀಡಿದ್ದು, ಅದು ಈಗ ಬಳಕೆಯಾಗಿದೆ. ಇಲ್ಲಿದ್ದ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಹಿಂದಿನ ವ್ಯವಸ್ಥಾಪನಾ ಸಮಿತಿ ಎಸ್ಟಿಮೇಟ್ ರಚಿಸಿತು. ಆದರೆ ಮಹಾವಿಷ್ಣು ನಮಗೆ ಶಕ್ತಿ ನೀಡಿದ್ದು ಅದನ್ನು ಯಾವ ಎಷ್ಟಿಮೇಟು ಇಲ್ಲದೆ ಲಕ್ಷ ಹಣವೂ ಇಲ್ಲದೆ ಬದಿಗೆ ಹಾಕಿಸುವ ಕೆಲಸ ಮಾಡಿದ್ದೇವೆ. ಭಕ್ತರ ಅನುಕೂಲಕ್ಕಾಗಿ ಮೂಲಭೂತ ಕೆಲಸಗಳು ಆಗುತ್ತಿದ್ದು, ಅದರ ಭಾಗವಾಗಿ ದೇವಸ್ಥಾನದ ಅನುದಾನದಲ್ಲಿ ದ್ವಾರವನ್ನು ಮಾಡಲಾಗಿದ್ದು, ಅದರ ಲೋಕಾರ್ಪಣೆಯೂ ನಡೆದಿದೆ. ಅಭಿವೃದ್ಧಿ ವಿಚಾರದಲ್ಲಿ ಕಾಂಪಿಟೇಶನ್ ಬೇಕು ಹೊರತು, ಕಾರ್ಯಕ್ರಮ ಮಾಡುವುದರಲ್ಲಿ ಅಲ್ಲ ಎಂದು ಹೇಳಿದರು.