- ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕುಡಿವ ನೀರು ಪೂರೈಕೆ ಪರಿಸ್ಥಿತಿ ಅವಲೋಕನ
ಕನ್ನಡಪ್ರಭ ವಾರ್ತೆ ಕಲಬುರಗಿ
ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಸ್ಥಿತಿಗತಿ ಕುರಿತು ಅವಲೋಕಿಸಿದರು.ತಾಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಾಫರಾಬಾದ ಗ್ರಾಮಕ್ಕೆ ತೆರಳಿ, ಜಿಲ್ಲಾಧಿಕಾರಿ ಗ್ರಾಮದಲ್ಲಿನ ಆಶ್ರಯ ಕಾಲೋನಿ, ಪಂಡಿತ್ ದೀನ ದಯಾಳ ನಗರ, ಎಸ್.ಎಂ.ಕೃಷ್ಣ ಕಾಲೋನಿಗಳ ಮನೆ-ಮನೆಗಳಿಗೆ ಭೇಟಿ ನೀಡಿ ನೀರು ಪೂರೈಕೆ ಕುರಿತು ಸಾರ್ವಜನಿಕರಿಂದ ವಿಚಾರಿಸಿದರು.
ಜಾಫರಾಬಾದ ಗ್ರಾಮದಲ್ಲಿ ಜಲ್ ಜೀವನ ಮಿಷನ್ ಯೋಜನೆಯಡಿ ಮನೆ-ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲು ಈಗಾಗಲೆ ಡಿ.ಪಿ.ಆರ್. ಸಿದ್ಧಪಡಿಸಿರುವ ಕಾರಣ ಯೋಜನೆ ಕೂಡಲೇ ಅನುಷ್ಠಾನ ಮಾಡಲಾಗುವುದು ಎಂದು ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ಅಭಯ ನೀಡಿದರು.
ನಂತರ ಸಾವಳಗಿ, ಹುಣಸಿಹಡಗಿಲ್ ಹಾಗೂ ಮಾಚನಾಳ ತಾಂಡಾ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಖಾಸಗಿ ಬೋರವೆಲ್, ಬಾವಿಗಳನ್ನು ಬಾಡಿಗೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸಬೇಕು. 15ನೇ ಹಣಕಾಸು ಮತ್ತು ಸ್ಥಳೀಯ ಸಂನ್ಮೂಲಗಳ ಅನುದಾನ ಬಳಸಿಕೊಂಡು ಇದನ್ನು ಪ್ರಥಮಾದ್ಯತೆ ಮೇಲೆ ಮಾಡುವಂತೆ ಪಿ.ಡಿ.ಒ ಗಳಿಗೆ ಕಟುನಿಟ್ಟಿನ ನಿರ್ದೇಶನ ನೀಡಿದರು.ಮಾಚನಾಳ್ ತಾಂಡಾದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆಕಲ್ಪಿಸಿರುವ ನಲ್ಲಿ ಸಂಪರ್ಕಗಳನ್ನು ವೀಕ್ಷಿಸಿದರು.
ಗರೂರು (ಬಿ) ಗ್ರಾಮದಲ್ಲಿನ ಬೋರವೆಲ್ಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಕಾರಣ, ಈ ನೀರು ಯಾವುದೇ ಕಾರಣಕ್ಕೂ ಕುಡಿಯಲು ಸರಬರಾಜು ಮಾಡಬಾರದು. ಗ್ರಾಮದಲ್ಲಿನ ತೋಟದಲ್ಲಿನ ಬಾವಿಯನ್ನು ಬಾಡಿಗೆ ಪಡೆದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೀರು ಸರಬರಾಜು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿ.ಇ.ಒ ಭಂವರ್ ಸಿಂಗ್ ಮೀನಾ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಸಾಹಿತ್ಯ, ತಾಲೂಕ ಪಂಚಾಯತ್ ಇ.ಒ. ಮೊಹಮ್ಮದ್ ಸೈಯದ್ ಪಟೇಲ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತು ನೈರ್ಮಲ್ಯ ವಿಭಾಗದ ಎ.ಇ.ಇ. ಜಗದೇವ ಜೀವಣಗಿ ಸೇರಿದಂತೆ ಗ್ರಾಮಗಳ ಪಿ.ಡಿ.ಒ ಮತ್ತು ಗ್ರಾಮಾಡಳಿತಾಧಿಕಾರಿಗಳು ಇದ್ದರು.