ಬೇಸಿಗೆ ಬಂತು ಕುಡಿವ ನೀರಿನ ದಾಹ ಹೆಚ್ಚಾಯ್ತು

KannadaprabhaNewsNetwork |  
Published : Mar 09, 2026, 02:30 AM IST
ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಬಹು ಗ್ರಾಮ ಕುಡಿವ ನೀರಿನ ಜಾಕ್‌ವಾಲ್‌ಗೆ ನೀರಿಲ್ಲದೇ ಬಂದ್‌ ಆಗಿದೆ.  | Kannada Prabha

ಸಾರಾಂಶ

ತುಂಗಭದ್ರಾ ನದಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರಿಂದ ಕೆಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದರೂ ಕೊಳವೆಬಾವಿಗಳ ನೀರೇ ಗತಿಯಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಎಲ್ಲೆಡೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇದರಿಂದ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ದಾಹವೂ ಹೆಚ್ಚಾಗುತ್ತಿದೆ. ತುಂಗಭದ್ರಾ ನದಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರಿಂದ ಕೆಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದರೂ ಕೊಳವೆಬಾವಿಗಳ ನೀರೇ ಗತಿಯಾಗಿದೆ.

ಹೌದು, ತಾಲೂಕಿನಲ್ಲಿ 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ನಿಂದ ಕೆಳಗಿನ ಪ್ರದೇಶದಲ್ಲಿನ ಹೊಳಗುಂದಿ ಇತರ 15 ಹಳ್ಳಿಗಳು, ಅಂಕ್ಲಿ-ಕೊಂಬಳಿ ಇತರ 21 ಹಳ್ಳಿಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್‌ವೆಲ್‌ಗಳಿಗೆ ನೀರೇ ಇಲ್ಲದಂತಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ತುಂಗಭದ್ರಾ ನದಿ ನೀರು ಬತ್ತಿ ಹೋಗಿದೆ.

ಈ ಎರಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌ಗಳಿಗೆ ನೀರು ಇಲ್ಲದ ಕಾರಣ, 36 ಹಳ್ಳಿಗಳ ಜನ ಜಾನುವಾರುಗಳಿಗೆ ಕೊಳವೆಬಾವಿಗಳ ನೀರೇ ಗತಿಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು ಕುಡಿಯಲು ಬಳಸುತ್ತಿದ್ದಾರೆ.

34 ಸಮಸ್ಯಾತ್ಮಕ ಹಳ್ಳಿಗಳು:

ತಾಲೂಕಿನ 26 ಗ್ರಾಪಂಗಳಲ್ಲಿ 14 ಗ್ರಾಪಂ ವ್ಯಾಪ್ತಿಯ 34 ಹಳ್ಳಿಗಳನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದು ಎಂದು ಮಾಹಿತಿ ಸಂಗ್ರಹಿಸಿ ಪಟ್ಟಿ ಮಾಡಲಾಗಿದೆ.

ಹಿರೇಮಲ್ಲನಕೆರೆ ಗ್ರಾಪಂನ ದಾಸರಹಳ್ಳಿ ತಾಂಡಾ, ಬಸರಹಳ್ಳಿ ತಾಂಡಾ, ಹಿರೇಮಲ್ಲನಕೆರೆ, ಸೋಗಿ ಗ್ರಾಪಂ ವ್ಯಾಪ್ತಿಯ ವರಕನಹಳ್ಳಿ, ಗೋವಿಂದಪುರ ತಾಂಡಾ-1, ಗೋವಿಂದಪುರ ತಾಂಡಾ-2, ಕಾಲ್ವಿ ಗ್ರಾಪಂನ ಹಕ್ಕಂಡಿ, ದುಂಗಾವತಿ ತಾಂಡಾ, ಅಕ್ಲಿ, ಬಿತ್ಯಾನತಾಂಡಾ, ಬಾನ್ಯನ್‌ ತಾಂಡಾ, ಕಾಲ್ವಿ ತಾಂಡಾ, ಮಹಾಜನದಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ತಳಕಲ್ಲು, ಮಹಾಜನದಹಳ್ಳಿ, ಕೆಂಚಮ್ಮನಹಳ್ಳಿ, ಎಂ. ಕಲ್ಲಹಳ್ಳಿ, ನಂದಿಹಳ್ಳಿ ಗ್ರಾಪಂನ ನಂದಿಹಳ್ಳಿ, ಕೊಂಬಳಿ ಗ್ರಾಪಂ ವ್ಯಾಪ್ತಿಯ ಪುರ, ಕೊಯಿಲಾರಗಟ್ಟಿ, ಕೊಯಿಲಾರಗಟ್ಟಿ ತಾಂಡಾ, ನವಲಿ ಗ್ರಾಪಂನಲ್ಲಿ ಹೊಸ ಅಲ್ಲಿಪುರ, ಕಾಗನೂರು, ಹಗರನೂರು ಗ್ರಾಪಂನ ವಡ್ಡನಹಳ್ಳಿ ತಾಂಡಾ, ಹಗರನೂರು, ಮಾನ್ಯರಮಸಲವಾಡ ಗ್ರಾಪಂನ ಕಗ್ಗಲಗಟ್ಟಿ ತಾಂಡಾ, ವ್ಯಾಸಮಲ್ಲಾಪುರ ತಾಂಡಾ, ಮಾನ್ಯರ ಮಸಲವಾಡ, ಸೋವೇನಹಳ್ಳಿ ಗ್ರಾಪಂನ ಸೋವೇನಹಳ್ಳಿ, ಇಟ್ಟಗಿ ಗ್ರಾಪಂನ ಇಟ್ಟಗಿ, ಬೀರಬ್ಬಿ ಗ್ರಾಪಂ ವ್ಯಾಪ್ತಿಯ ಅಂಗೂರು, ಅರಳಿಹಳ್ಳಿ ತಾಂಡಾ, ನಾಗತಿ ಬಸಾಪುರ ಗ್ರಾಪಂನ ನಾಗತಿಬಸಾಪುರ, ಹೊಳಗುಂದಿ ಗ್ರಾಪಂನ ಹೊಳಗುಂದಿ, ಬಾವಿಹಳ್ಳಿ ಸೇರಿದಂತೆ ಒಟ್ಟು 14 ಗ್ರಾಪಂ ವ್ಯಾಪ್ತಿಯ 34 ಹಳ್ಳಿಗಳನ್ನು ಸಮಸ್ಯಾತ್ಮಕ ಹಳ್ಳಿಗಳೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಗುರುತಿಸಲಾಗಿದೆ.

ತಾಲೂಕಿನ ಹಳ್ಳಿಗಳಲ್ಲಿ 493 ಕೊಳವೆಬಾವಿಗಳಿವೆ, ಇದರಲ್ಲಿ 382 ಕೊಳವೆಬಾವಿಗಳಿಂದ ಜನ ನೀರು ಬಳಕೆ ಮಾಡುತ್ತಿದ್ದಾರೆ. ಉಳಿದ 111 ಕೊಳವೆಬಾವಿಗಳ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಆಧಾರದ ಮೇಲೆ ಅವುಗಳನ್ನು ಬಂದ್‌ ಮಾಡಲಾಗಿದೆ.

ತಾಲೂಕಿನಲ್ಲಿ ಹೊಳಗುಂದಿ, ಅಂಕ್ಲಿ-ಕೊಂಬಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಾಕ್‌ವೆಲ್‌ಗಳಿಗೆ ನೀರಿಲ್ಲದೇ ಬಂದ್‌ ಆಗಿವೆ. ಆ ವ್ಯಾಪ್ತಿಯ ಜನ ಜಾನುವಾರುಗಳಿಗೆ ಕೊಳವೆಬಾವಿಗಳಿವೆ. ಉಳಿದಂತೆ 9 ಯೋಜನೆಗಳಿಗೆ ನದಿ ನೀರು ಪೂರೈಕೆಯಾಗುತ್ತಿದೆ. 34 ಸಮಸ್ಯಾತ್ಮಕ ಹಳ್ಳಿಗಳು ಎಂದು ಗುರುತಿಸಲಾಗಿದೆ ಎನ್ನುತ್ತಾರೆ ಹೂವಿನಹಡಗಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರದೀಪ್‌ಕುಮಾರ ಕಟಗಿ,

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಲ್ಲಿ ಸದ್ಯ 1.98 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಬೇಸಿಗೆ ಕಾಲದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಸಾಕಾಗಲಿದೆ ಎನ್ನುತ್ತಾರೆ ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಮಹಿಳೆಗೆ ಬೇಕಿರೋದು ಅವಕಾಶ: ಪದ್ಮಾವತಿ
ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಅಂದಾನಯ್ಯ ವಿರಕ್ತಮಠ