ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಪುರಾಣ ಪ್ರಸಿದ್ಧ ಹಾಗೂ ಪ್ರಮುಖ ದೇವಾಲಯಗಳಲ್ಲಿ ಒಂದಾದ ರಂಗಸ್ಥಳದ ಪ್ರಧಾನ ದೇವರಾದ ಶ್ರೀ ಭೂ ನೀಳಾ ಸಮೇತ ಶ್ರೀ ರಂಗನಾಥ ಸ್ವಾಮಿ ಪಾದವನ್ನು ಮಕರ ಸಂಕ್ರಾಂತಿ ಶುಭದಿನದಂದು ಸ್ಪರ್ಶ ಸೂರ್ಯಕಿರಣದ ಸ್ಪರ್ಶ ಮಾಡಿತು. ಈ ಅಪೂರ್ವ ದೃಶ್ಯವನ್ನು ಕಂಡು ಭಕ್ತರು ವಿಸ್ಮಿತರಾದರು.ನಾಡಿನ ಸಾಕಷ್ಟು ದೇವಾಲಯಗಳು ಇತಿಹಾಸ ಮತ್ತು ಸ್ಥಳ ಪುರಾಣದಿಂದ ಪ್ರಸಿದ್ಧಿಯನ್ನು ಪಡೆದಿವೆ. ಅಂತಾ ಒಂದು ದೇವಾಲಯ ತಾಲೂಕಿನ ರಂಗಸ್ಥಳದಲ್ಲಿರುವ ಭೂನೀಳ ಸಮೇತ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ. ಪೌರಾಣಿಕ ಹಿನ್ನೆಲೆ ಹೊಂದಿರುವ ದೇಗುಲಗಳಲ್ಲೊಂದು. ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾದ ಭೂನೀಳ ಲಕ್ಷ್ಮಿ ರಂಗನಾಥ ಆಲಯಕ್ಕೆ ತ್ರೇತಾಯುಗದ ಹಿನ್ನೆಲೆ ಇದೆ.
ಸ್ವಾಮಿ ಪಾದಕ್ಕೆ ಸೂರ್ಯಕಿರಣ ಸ್ಪರ್ಷಇಲ್ಲಿಯ ಗರ್ಭಗೃಹ ಬಿದಿರು ಬುಟ್ಟಿ ಆಕಾರದಲ್ಲಿದೆ. ಸ್ವಾಮಿಯು ವೈಕುಂಠದಲ್ಲಿ ಮಲಗಿರುವ ಹಾಗೆ ವಿಗ್ರಹವನ್ನು ಕೆತ್ತಲಾಗಿದೆ. ರಂಗನಾಥಸ್ವಾಮಿಯ ಪಾದದ ಬಳಿ ಒಂದು ಕಿಂಡಿ ಇದ್ದು, ಮಕರ ಸಂಕ್ರಮಣ ದಿನ ಸೂರ್ಯೋದಯ ಸಮಯದಲ್ಲಿ, ಸ್ವಾಮಿಯ ಪಾದ ಕಮಲಗಳಿಗೆ ಸೂರ್ಯನ ಕಿರಣಗಳು ಬೀಳುವುದು ವಿಶೇಷ.ಈ ದೇವಸ್ಥಾನ ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರಂಗನಾಥಸ್ವಾಮಿ ದೇವಾಲಯದ ಹೊರಗಿನ ಪ್ರಾಕಾರ ಹಾಗೂ ಗೋಪುರವನ್ನು ವಿಜಯನಗರ ಅರಸರು ಕಟ್ಟಿಸಿದ್ದಾರೆ. ರಂಗನಾಥಸ್ವಾಮಿಗೆ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲಿನ ಊರಿನ ಜನರು ಈ ದೇವಾಲಯಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಮೋಡ ಇಲ್ಲವೇ ಮಂಜು ಅಡ್ಡಿಯಾದ ಸಂದರ್ಭದಲ್ಲಿ ಸೂರ್ಯ ಕಿರಣ ಸ್ಪರ್ಶ ಆಗುವುದಿಲ್ಲ. ಆದರೆ ಈ ವರ್ಷ ಯಾವುದೇ ರೀತಿಯ ತೊಂದರೆ ಇಲ್ಲದೆ ರಂಗನಾಥ ಸ್ವಾಮಿಯ ಪಾದದ ಮೇಲೆ ಸೂರ್ಯ ಕಿರಣ ಸ್ಪರ್ಶ ಆಗಿದ್ದು ಬೆಳ್ಳಂ ಬೆಳಗ್ಗೆ ನೂರಾರು ಮಂದಿ ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು.ಸಿಕೆಬಿ-2 ..... ಚಿಕ್ಕಬಳ್ಳಾಪುರ ತಾಲೂಕಿನ ಸಂಗಸ್ಥಳದ ಶ್ರೀ ರಂಗನಾಥ ಸ್ವಾಮಿ ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿರುವ ಭಕ್ತರು.