ಚಾ.ನಗರ- ಹೆಜ್ಜಾಲ ರೈಲ್ವೆ ಯೋಜನೆಗೆ ಸಂಸದ ಧ್ವನಿ

KannadaprabhaNewsNetwork |  
Published : Mar 18, 2026, 01:30 AM IST
ಸುನೀಲ್‌ ಬೋಸ್‌ | Kannada Prabha

ಸಾರಾಂಶ

ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್‌ ಅವರು ಲೋಕಸಭೆಯಲ್ಲಿ ಗಮನ ಸೆಳೆದಿದ್ದಾರೆ.

- ಸಂಸತ್‌ನಲ್ಲಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳ ಪ್ರಸ್ತಾಪಿಸಿದ ಸುನೀಲ್‌ ಬೋಸ್‌

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಚಾಮರಾಜನಗರ ಸಂಸದ ಸುನೀಲ್ ಬೋಸ್‌ ಅವರು ಲೋಕಸಭೆಯಲ್ಲಿ ಗಮನ ಸೆಳೆದಿದ್ದಾರೆ.ಚಾಮರಾಜನಗರ ಜಿಲ್ಲೆಯಲ್ಲಿ ದಿನನಿತ್ಯ ನೂರಾರು ಕಾರ್ಮಿಕರು ನಗರದಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಾರೆ. ನಗರದಿಂದ ಮೈಸೂರು, ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಅವರ ಬಹುದಿನಗಳ ಬೇಡಿಕೆ ಹೆಜ್ಜಾಲ ರೈಲ್ವೆ ಮಾರ್ಗವನ್ನ ಕಲ್ಪಿಸಿಕೊಡಬೇಕು. ಇದು ದಶಕಗಳ ಬೇಡಿಕೆ ಅಂದರೂ ತಪ್ಪಾಗಲ್ಲ. ಹೆಜ್ಜಾಲದಿಂದ ನಗರಕ್ಕೆ ಸುಮಾರು 140 ಕಿ.ಮೀ. ರಷ್ಟು ದೂರ ಇದೆ. ಆದರೆ ನಮ್ಮಲ್ಲಿ ರೈಲ್ವೆ ಮಾರ್ಗಗಳು ಕಡಿಮೆ ಇದೆ. ನನ್ನ ಕ್ಷೇತ್ರ ಸುಮಾರು ಶೇ.51ರಷ್ಟು ಅರಣ್ಯ ವ್ಯಾಪ್ತಿಯಲ್ಲಿ ಇರುವುದರಿಂದ ರೈಲ್ವೆ ಮಾರ್ಗಗಳು ಬಹಳ ಕಡಿಮೆ ಇದೆ ಎಂದು ಸಂಸದರು ಹೇಳಿದರು.

ಹೆಜ್ಜಾಲ ರೈಲ್ವೆ ಯೋಜನೆಯನ್ನು 1996-97ರಲ್ಲಿ ಘೋಷಣೆ ಮಾಡಿ 13-14ನೇ ಸಾಲಿನಲ್ಲಿ ಸುಮಾರು 1382 ಕೋಟಿ ರು.ಗಳನ್ನು ಯೋಜನೆಗೆ ಮೀಸಲು ಇಡಲಾಯಿತು. ಆದರೆ, ಈವರೆಗೂ ಕೂಡ ಭೂಸ್ವಾಧೀನ ಪ್ರಕ್ರಿಯೆ ಸಹ ಆರಂಭವಾಗಿಲ್ಲ. ಈ ವಿಳಂಬಕ್ಕೆ ಪ್ರಮುಖ ಕಾರಣವೆಂದರೆ ಯೋಜನೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ. 50-50ರ ಅನುಪಾತದ ಅನುದಾನದಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವುದೇ ಇದಕ್ಕೆ ಮೂಲ ಕಾರಣ ಎಂದರು.

ರೈಲ್ವೆ ಇಲಾಖೆ ಸಂಪೂರ್ಣವಾಗಿ ಕೇಂದ್ರದ ಪಟ್ಟಿಯಲ್ಲಿದೆ. ಈ ಯೋಜನೆಯಿಂದ ಬರುವ ಲಾಭಾಂಶವು ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ. ಚಾಮರಾಜನಗರದಂತಹ ಪರಿಸರ ಸೂಕ್ಷ್ಮ ಹಾಗೂ ಹಿಂದುಳಿದ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಸರ್ಕಾರವೇ ಶೇ.100ರಷ್ಟು ಅನುದಾನವನ್ನು ಭರಿಸಿ ಈ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ರೈಲು ಸಂಚಾರದ ವೇಳೆ ಮೈಸೂರು-ಚಾಮರಾಜನಗರ ರೈಲು ಮಾರ್ಗದಲ್ಲಿ ಬರುವ ಎಲ್‌ಸಿ ಗೇಟ್‌ಗಳಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಗೇಟ್‌ಗಳು ಮುಚ್ಚಿರುತ್ತದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಪ್ರಾಣಕ್ಕೆ ತೊಂದರೆ ಸಂಭವಿಸುತ್ತಿರುವ ಘಟನೆಗಳು ಕೂಡ ವರದಿಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಣ್ಯದಹುಂಡಿ ಎಲ್‌ಸಿ ಗೇಟ್ 47, ಚಿನ್ನದಗುಡಿ ಹುಂಡಿ ಗೇಟ್ 27 ಮತ್ತು ನಂಜನಗೂಡು ಪಟ್ಟಣದ 20 ಗೇಟ್‌ಗೆ ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಲಾಗಿದೆ. ಇದಕ್ಕಾಗಿ ಡಿಪಿಆರ್‌ ಸಿದ್ಧವಾಗಿ ಅನುದಾನ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಕೂಡ ಕಾಮಗಾರಿ ಮಾತ್ರ ಇನ್ನು ಆರಂಭವಾಗಿಲ್ಲ. ಕೇಂದ್ರದ ರಾಜ್ಯ ಸಚಿವರು ಮತ್ತು ನಾವು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳ ಜೊತೆ ಹಲವು ಬಾರಿ ಚರ್ಚೆಯನ್ನು ಮಾಡಲಾಗಿದ್ದರೂ ಕೂಡ ಯಾವುದೇ ಕಾಮಗಾರಿ ಇನ್ನು ಆರಂಭ ಮಾಡಿಲ್ಲ. ಅದಕ್ಕಾಗಿ ನಾನು ಪ್ರಧಾನಮಂತ್ರಿಗಳು ಹಾಗೂ ರೈಲ್ವೆ ಸಚಿವರನ್ನು ಒತ್ತಾಯಿಸುವುದೇನೆಂದರೆ ಕೂಡಲೇ ಸ್ಥಗಿತಗೊಂಡಿರುವ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿ ನನ್ನ ಕ್ಷೇತ್ರದ ರೈಲ್ವೆ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಮನವಿ ಮಾಡುವುದಾಗಿ ಸಂಸದ ಬೋಸ್‌ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸ ಮುಕ್ತ ಹೊಸಕೋಟೆ ನಿರ್ಮಾಣಕ್ಕೆ ಸಹಕರಿಸಿ
ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ: ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ