ಕೃಷಿ ಗೊಬ್ಬರ ಕೈಗಾರಿಕೆಗೆ ಸರಬರಾಜು: 337 ಚೀಲ ಜಫ್ತಿ

KannadaprabhaNewsNetwork |  
Published : Nov 13, 2023, 01:18 AM IST
ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ರಸಗೊಬ್ಬರವನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಳ್ಳಲಾಯಿತು. ಕೃಷಿ ಅಧಿಕಾರಿ ಎಸ್. ವೆಂಕಟೇಶ್ ಚವ್ಹಾಣ್, ಪಿಎಸ್‌ಐ ಶಶಿಕುಮಾರ್ ಇದ್ದರು.  | Kannada Prabha

ಸಾರಾಂಶ

ಕೃಷಿ ಗೊಬ್ಬರ ಕೈಗಾರಿಕೆಗೆ ಸರಬರಾಜು: 337 ಚೀಲ ಜಫ್ತಿ

6 ತಿಂಗಳಲ್ಲಿ ಎರಡನೇ ಪ್ರಕರಣ । ರೈತರ ಹೆಸರಲ್ಲಿ ಸರ್ಕಾರಕ್ಕೆ ವಂಚನೆ । ಕೃಷಿ ಜಾಗೃತದಳದ ಯಶಸ್ವಿ ಕಾರ್ಯಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ರೈತರ ಹೆಸರಿನಲ್ಲಿ ರಸಗೊಬ್ಬರ ಪಡೆದು ಕೇರಳ ರಾಜ್ಯದ ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಭೇದಿಸುವಲ್ಲಿ ಕೃಷಿ ಇಲಾಖೆ ಜಾಗೃತದಳ ಯಶಸ್ವಿಯಾಗಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿ ಚೆಕ್ ಪೋಸ್ಟ್‌ನಲ್ಲಿರುವ ಶ್ರೀ ಸಿದ್ಧಿ ವಿನಾಯಕ ಆಗ್ರೋ ಸೆಂಟರ್‌ನ ಮಾಲೀಕ ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸಿ ಎನ್. ಮಧುಸೂಧನ್ ಅವರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದುಕೊಂಡು 337 ಚೀಲ ರಸಗೊಬ್ಬರ ಹಾಗೂ ಕೇರಳ ಮೂಲದ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ರಸಗೊಬ್ಬರದ ಒಟ್ಟು ಮೌಲ್ಯ 5.50 ಲಕ್ಷ ರುಪಾಯಿ ಎಂದು ಹೇಳಲಾಗುತ್ತಿದೆ. ಐಪಿಎಲ್ ಕಂಪನಿಗೆ ಸೇರಿದ 311, ಎಂಸಿಎಫ್‌ ಹಾಗೂ ಸ್ಪಿಕ್ ಕಂಪನಿಗೆ ಸೇರಿದ 26 ಚೀಲ ಯೂರಿಯಾ ರಸಗೊಬ್ಬರವನ್ನು ಹಾಸನದ ಅಕ್ಷಯ ಟ್ರೇಡಿಂಗ್ ಕಂಪನಿಯಿಂದ ಮಧುಸೂಧನ್ ಅವರು ತರಿಸಿಕೊಂಡಿದ್ದು, ಲಾರಿಯಲ್ಲಿ ಬಂದ ರಸಗೊಬ್ಬರವನ್ನು ಕೇರಳ ರಾಜ್ಯದ ನೋಂದಣಿ ಇರುವ ಲಾರಿಯಲ್ಲಿ ತುಂಬಿಸಿ ಕಳುಹಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಎಸ್. ವೆಂಕಟೇಶ್ ಚವ್ಹಾಣ್ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ ರಸಗೊಬ್ಬರ ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡರು. ಸಹಾಯಕ ಕೃಷಿ ನಿರ್ದೇಶಕ ಎಸ್. ವೆಂಕಟೇಶ್ ಚವ್ಹಾಣ್ ನೀಡಿರುವ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್‌ಸ್ಪೆಕ್ಟರ್ ವೈ.ಎಸ್. ಶಶಿಕುಮಾರ್ ಪ್ರಕರಣವನ್ನು ದಾಖಲಿಸಿಕೊಂಡು ಮಧುಸೂಧನ್ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಎರಡನೇ ಪ್ರಕರಣ: ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ ಮಾಡಿ ಕೈಗಾರಿಕೆಗಳಿಗೆ ಮಾರಾಟ ಮಾಡುವ ದಂಧೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ಬಾಣೂರು ಗ್ರಾಮದ ಬಳಿ ಕೋಳಿ ಫಾರಂ ಹೌಸ್‌ನಲ್ಲಿ 1100 ಚೀಲ ಯೂರಿಯಾ ಗೊಬ್ಬರ ವಶ ಪಡಿಸಿಕೊಳ್ಳಲಾಗಿತ್ತು. ಚಿಲ್ಲರೆ ರಸಗೊಬ್ಬರ ಮಾರಾಟ (ರಿಟೈಲ್) ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿ ಮಾಡಿ, ಕೈಗಾರಿಕೆಗಳಿಗೆ ಮಾರಾಟ ಮಾಡುವ ರಸಗೊಬ್ಬರದ ಚೀಲಗಳಲ್ಲಿ ತುಂಬಿಸಿ ಅಕ್ರಮವಾಗಿ ಸರಬರಾಜು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಇದೀಗ ಲಿಂಗದಹಳ್ಳಿಯಲ್ಲಿ ಇಂತಹದ್ದೆ ಪ್ರಕರಣ ಬಯಲಿಗೆ ಬಂದಿದೆ. ಆದರೆ, ಈ ಪ್ರಕರಣದಲ್ಲಿ ಚೀಲವನ್ನು ಅದಲು ಬದಲು ಮಾಡದೆ ನೇರವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು. ----- ಬಾಕ್ಸ್ ------ಹೇಗಿದು ವಂಚನೆ ?ರೈತರು, ರಸಗೊಬ್ಬರ ಖರೀದಿ ಮಾಡುವ ಸಂದರ್ಭದಲ್ಲಿ ಅವರ ಆಧಾರ್ ಕಾರ್ಡ್‌ವನ್ನು ರಿಜಿಸ್ಟ್ರರ್ ಮಾಡಿ ಕೊಳ್ಳಲಾಗುವುದು. ಎಷ್ಟು ಚೀಲ ರೈತರು ಖರೀದಿ ಮಾಡಿದ್ದಾರೆ, ಯಾವ ರಸಗೊಬ್ಬರ, ಯಾವ ಕಂಪನಿಗೆ ಸೇರಿದ್ದು ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಆನ್ ಲೈನ್‌ ಮೂಲಕ ಕಳುಹಿಸಲಾಗುತ್ತಿದೆ. ಅದರ ಆಧಾರದ ಮೇಲೆ ಕಂಪನಿಗಳಿಗೆ ಸರ್ಕಾರ ನೇರವಾಗಿ ಸಬ್ಸಿಡಿ ಪಾವತಿ ಮಾಡುತ್ತದೆ. 45 ಕೆ.ಜಿ. ತೂಕದ ಒಂದು ಚೀಲ ಯೂರಿಯಾ ರಸಗೊಬ್ಬರವನ್ನು ರೈತರು 266.50 ರು.ಗೆ ಖರೀದಿ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಪ್ರತಿ ಚೀಲಕ್ಕೆ 1150 ರಿಂದ 1450 ರು. ವರೆಗೆ ಕಂಪನಿಗಳಿಗೆ ಸಬ್ಸಿಡಿ ನೀಡುತ್ತಿದೆ. ಓರ್ವ ರೈತ 2 ಚೀಲ ಯೂರಿಯಾ ಗೊಬ್ಬರ ಖರೀದಿ ಮಾಡಿದರೆ, ರಿಟೇಲ್ ಅಂಗಡಿಯವರು ಮನಸ್ಸಿಗೆ ತೋಚಿದಷ್ಟು ಚೀಲದ ಸಂಖ್ಯೆಯನ್ನು ದಾಖಲು ಮಾಡುತ್ತಾರೆ. ಹೀಗೆ ದಾಖಲು ಮಾಡುವುದರಿಂದ ರಸಗೊಬ್ಬರ ಕಂಪನಿಗಳು, ರಿಟೇಲ್ ಅಂಗಡಿಯವರಿಗೆ ಇಂತಿಷ್ಟು ಹಣ ಸಂದಾಯ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಹೆಚ್ಚುವರಿಯಾಗಿ ದಾಸ್ತಾನು ಮಾಡಲಾಗಿರುವ ರಸಗೊಬ್ಬರವನ್ನು ಗಮ್‌, ಪ್ಲೈವುಡ್, ಚರ್ಮದ ಕೆನೆ, ವೈದ್ಯಕೀಯ ಉತ್ಪನ್ನಗಳ ತಯಾರಿಕೆ ಕಂಪನಿಗಳಿಗೆ ರಿಟೇಲ್ ಅಂಗಡಿಯವರು ಚೀಲಕ್ಕೆ 700 ರಿಂದ 800 ರು. ಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ವಂಚಿಸುತ್ತಿರುವ ರಿಟೇಲ್ ಅಂಗಡಿಗಳಿಗೆ ಕಂಪನಿಗಳಿಂದ ಹಾಗೂ ಕೈಗಾರಿಕೆಗಳಿಂದ ಹಣ ಬರುತ್ತಿದೆ. ----------ಲಿಂಗದಹಳ್ಳಿಯಲ್ಲಿ ವಶಪಡಿಸಿಕೊಂಡಿರುವ ರಸಗೊಬ್ಬರದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಅದರ ಗುಣಮಟ್ಟ ಪರೀಕ್ಷಿಸಿದ ನಂತರ ರೈತರಿಗೆ ವಿತರಣೆ ಮಾಡಲಾಗುವುದು.

- ಎಸ್. ವೆಂಕಟೇಶ್ ಚವ್ಹಾಣ್ ಸಹಾಯಕ ಕೃಷಿ ನಿರ್ದೇಶಕರು ಕೃಷಿ ಜಾಗೃತದಳ ------ 12 ಕೆಸಿಕೆಎಂ 7ಕೇರಳ ರಾಜ್ಯಕ್ಕೆ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ರಸಗೊಬ್ಬರವನ್ನು ಲಾರಿ ಸಹಿತ ವಶಕ್ಕೆ ತೆಗೆದು ಕೊಳ್ಳಲಾಯಿತು. ಕೃಷಿ ಅಧಿಕಾರಿ ಎಸ್. ವೆಂಕಟೇಶ್ ಚವ್ಹಾಣ್, ಪಿಎಸ್‌ಐ ಶಶಿಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ