ಕನ್ನಡಪ್ರಭ ವಾರ್ತೆ ಯಮಕನಮರಡಿಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಜೆಡಿಎಸ್ ಸೇರ್ಪಡೆಯಾಗಿದ್ದು ಸೂಕ್ತ ನಿರ್ಧಾರವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾಗಿ ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ ಹೇಳಿದರು.
ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜನಪರ ಯೋಜನೆಗಳನ್ನು ಮತದಾರರಿಗೆ ತಿಳಿಸಿ ಮತಪಡೆಯುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು. ವಿರೋಧಿಗಳು ತಮ್ಮ ಪರ ಅಲೆ ಇದೆ ಎಂದು ವದಂತಿ ಹಬ್ಬಿಸುತ್ತಿದ್ದು ಜನಸಾಮಾನ್ಯರು ಬಿಜೆಪಿ ಪರ ಒಲವು ಹೊಂದಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ರವೀಂದ್ರ ಹಂಜಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದವರ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ದೇಶದ ಅಭಿವೃದ್ಧಿಗೋಸ್ಕರ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಕೆಲ ಮಾಧ್ಯಮದವರು ವ್ಯಕ್ತಿ ವರ್ಚಸ್ಸಿನ ಮೇಲೆ ಸಮೀಕ್ಷೆ ನಡೆಸುತ್ತಿದ್ದು, ಬೂತ್ ಮಟ್ಟದಲ್ಲಿ ಸಮೀಕ್ಷೆ ನಡೆಸದೆ ಇರುವುದು ಸರಿಯಲ್ಲ. ಕಾರ್ಯಕರ್ತರು ಪರಸ್ಪರ ವೈಮನಸ್ಸು ಮರೆತು ಅಣ್ಣಾಸಾಹೇಬ ಜೊಲ್ಲೆಯವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ಶ್ರಮಿಸಬೇಕೆಂದು ಕರೆ ನೀಡಿದರು.ಸಭೆಯಲ್ಲಿ ಯಮಕನಮರಡಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಜಾಕೀರ್ ನದಾಫ್, ಬೆಳಗಾವಿ ಜಿಲ್ಲಾ ಜೆಡಿಎಸ್ ವಕ್ತಾರ ದಯಾನಂದ ನವಲಗುಂದಿ, ಅಣ್ಣಾಸಾಹೇಬ ಬೇಣಿವಾಡೆ, ಉದಯ ನಿರ್ಮಳ, ರವೀಂದ್ರ ಕುರಾಡೆ, ಬಸವರಾಜ ಊದೋಶಿ, ಅಮಿತ ದೇಶಪಾಂಡೆ, ಮಸರಗುಪ್ಪಿ ಗ್ರಾಮದ ಕಲಗೌಡ ಪಾಟೀಲ, ವೈ.ಎಸ್. ವಂಟಮೂರಿ ಮುಂತಾದವರು ಉಪಸ್ಥಿತರಿದ್ದರು.
ಒಗ್ಗಟ್ಟಾದರೆ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಮುಖಂರಾದ ರವೀಂದ್ರ ಹಂಜಿ, ಹಾಗೂ ಮಾರುತಿ ಅಷ್ಟಗಿ ಮತ್ತು ಬಸವರಾಜ ಹುಂದ್ರಿ ಒಗ್ಗಟ್ಟಾದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಜಯಪಾಲ ಜಿಂಡ್ರಾಳಿ ಹೇಳಿದರು. ಯಮಕನಮರಡಿ ಕ್ಷೇತ್ರದ ಜನತೆಯಲ್ಲಿದ್ದ ಮಾರುತಿ ಅಷ್ಟಗಿ ನಿಲುವೇನು ಎಂಬ ಪ್ರಶ್ನೆಗೆ ಇಂದಿನ ಸಭೆಯಲ್ಲಿ ಉತ್ತರ ದೊರಕಿದೆ. ಈ ಬಾರಿ ಮಾರುತಿ ಅಷ್ಟಗಿ ಬಿಜೆಪಿ ಬಲಪಡಿಸುವ ಉದ್ದೇಶದಿಂದ ಮತ್ತೆ ಅಣ್ಣಾಸಾಹೇಬ ಜೊಲ್ಲೆಯವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.