ಕೊಪ್ಪಳ: ಮಕ್ಕಳ ರಕ್ಷಣೆಯಲ್ಲಿ ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತ್ವರಿತಗತಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಮಧು ಎನ್.ಆರ್. ಹೇಳಿದರು.
ಬಾಧಿತ ಮಗು ಅಥವಾ ಮಗುವಿನ ಪರ ಮಧ್ಯಂತರ ಪರಿಹಾರಕ್ಕಾಗಿ ತ್ವರಿತಗತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಈ ಕುರಿತು ಮಕ್ಕಳಿಗೆ ಸೂಕ್ತ ಮಾಹಿತಿ ನೀಡಬೇಕು. ಇದರಿಂದ ಯಾವುದೇ ಆಮಿಷ ಅಥವಾ ಆಸೆಗೆ ಒಳಗಾಗಿ ಮಕ್ಕಳು ತಮ್ಮ ಹೇಳಿಕೆ ಬದಲಾಯಿಸುವುದನ್ನು ತಡೆಯಲು ಹಾಗೂ ಆರೋಪಿತರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ನಿಯಮಾವಳಿ 2020 ದೇಶದಾದ್ಯಂತ ಜಾರಿಯಲ್ಲಿರುವ ಏಕರೂಪದ ನಿಯಮಾವಳಿಗಳಾಗಿವೆ. ಈ ನಿಯಮಾವಳಿಗಳ ಜೀವಾಳವೇ ಬೆಂಬಲ ವ್ಯಕ್ತಿಗಳು. ವಿಚಾರಣೆ ಪ್ರಕ್ರಿಯೆಯಲ್ಲಿ ಬಾಧಿತ ಮಗುವಿಗೆ ಮಾನಸಿಕ ಸ್ಥೈರ್ಯ, ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿ ಮಗುವಿನ ಮನೋಬಲ ಹೆಚ್ಚಿಸುವಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಮಾತನಾಡಿ, ನಿಯಮಾವಳಿಗಳನ್ವಯ ಬೆಂಬಲ ವ್ಯಕ್ತಿಗಳು ಬಾಧಿತ ಮಗು, ವಿವಿಧ ಇಲಾಖೆಗಳು ಹಾಗೂ ಸಮುದಾಯದ ನಡುವೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸುವುದು ಅತ್ಯವಶ್ಯಕವಾಗಿದೆ. ಮಗುವಿನ ಘನತೆ ಕುಟುಂಬ ಮತ್ತು ಸಮುದಾಯದಲ್ಲಿ ಪುನರ್ ಸ್ಥಾಪಿಸುವುದರೊಂದಿಗೆ, ಮಕ್ಕಳು ತಮ್ಮ ಹಕ್ಕು ಅನುಭವಿಸಲು ಪೂರಕವಾದ ವಾತಾವರಣ ನಿರ್ಮಿಸುವುದು ಬೆಂಬಲ ವ್ಯಕ್ತಿಗಳ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲರೂ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಮಕ್ಕಳ ರಕ್ಷಣೆಯಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಬೆಂಬಲ ವ್ಯಕ್ತಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಬಸಮ್ಮ ನಿರೂಪಿಸಿದರು. ಪ್ರತಿಭಾ ಪ್ರಾರ್ಥಿಸಿದರು. ಅಮರಮ್ಮ ಸ್ವಾಗತಿಸಿದರು. ರವಿಕುಮಾರ ಪವಾರ ವಂದಿಸಿದರು.